ADVERTISEMENT

ಮತ್ತೊಮ್ಮೆ ಮಹೇಶ್‌ ನಾಯಕ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2015, 19:30 IST
Last Updated 1 ಡಿಸೆಂಬರ್ 2015, 19:30 IST

‘ನಮಕ್ ಹರಾಮ್’ ಚಿತ್ರದ ಮೂಲಕ ತನ್ನ ಸಿನಿಮಾ ಬದುಕು ಆರಂಭಿಸಿದ ನಟ ಗಣೇಶ್ ಸಹೋದರ ಮಹೇಶ್ ಈಗ ಇನ್ನೊಂದು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಬಾಲ ವಿನಾಯಕ ಅವರ ನಿರ್ದೇಶನದ ‘ದಂಡಂ’ ಚಿತ್ರ ಅದು. ಈ ಚಿತ್ರದ ಮುಹೂರ್ತ ಇತ್ತೀಚೆಗೆ ನೆರವೇರಿತು. ಶಿವಮಹದೇವಪ್ಪ ಹಾಗೂ ತಿರುಮಲೇಶ್ ನಿರ್ಮಾಪಕರು. ಸಾಧು ಕೋಕಿಲ ಸಂಗೀತ ನೀಡುವುದರೊಂದಿಗೆ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. 

‘ಇದು ಜರ್ನಿ ಕಥೆ. ನಾಯಕ ತನ್ನ ಸ್ನೇಹಿತರಿಗಾಗಿ ಬೆಂಗಳೂರಿನಿಂದ ಸಾಗರಕ್ಕೆ ಬರುತ್ತಾನೆ. ಆ ಪಯಣದಲ್ಲಿ ನಡೆಯುವ ಹಾಗೂ ಸಾಗರದಲ್ಲಿ ನಡೆವ ಘಟನೆಗಳು ಪ್ರಮುಖ ಕಥಾವಸ್ತು. ನಿಖಿತಾ ನಾರಾಯಣ, ಸಿಂಧೂ ರಾವ್ ಹಾಗೂ ಇಶಿತಾ ನಾಯಕಿಯರಾಗಿ ನಟಿಸಲಿದ್ದಾರೆ. ಬೆಂಗಳೂರು, ಸಾಗರ, ಸಿಗಂದೂರು ಸುತ್ತಮುತ್ತ 50 ದಿನಗಳ ಒಂದೇ ಹಂತದಲ್ಲಿ ಚಿತ್ರೀಕರಣ ನಡೆಸಲಾಗುವುದು. ಯಾರೇ ಏನೇ ತಪ್ಪು ಮಾಡಿದರೂ ಅದಕ್ಕೊಂದು ಶಿಕ್ಷೆ ಇದೆ. ಅದನ್ನು ದಂಡಂ ಎಂದು ಕರೆಯುತ್ತೇವೆ’ ಎಂದು ಚಿತ್ರದ ಬಗ್ಗೆ ಮಾಹಿತಿ ನೀಡಿದರು ಬಾಲ ವಿನಾಯಕ.   

‘ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡುವ ಹಲವು ಕಲಾತ್ಮಕ ಹಾಗೂ ಮನರಂಜನೆಯ ಚಿತ್ರಗಳನ್ನು ನಿರ್ಮಿಸುವ ಉದ್ದೇಶ ನಮ್ಮದಾಗಿದೆ’ ಎಂದವರು ನಿರ್ಮಾಪಕ ಶಿವಮಹದೇವಪ್ಪ. ಚಿತ್ರಕ್ಕೆ 3 ಕೋಟಿ ಹೂಡಿಕೆಯ ಆಲೋಚನೆ ಅವರದ್ದಂತೆ.

ನಾಯಕ ಮಹೇಶ್, ‘ನನ್ನ ಮೊದಲ ಚಿತ್ರ ರೌಡಿಸಂ ಕಥೆಯಾಗಿತ್ತು. ಇದು ಲವ್–ಮಾಸ್ ಚಿತ್ರವಾಗಿದೆ. ಸ್ನೇಹಿತರಿಗಾಗಿ ಏನು ಬೇಕಾದರೂ ಮಾಡುವ ಗುಣ ನಾಯಕನದ್ದು.  ಮೂವರು ನಾಯಕಿಯರು ಆತನ ಜೀವನದಲ್ಲಿ ಬರುತ್ತಾರೆ’ ಎಂದು ಪಾತ್ರದ ಬಗ್ಗೆ ಹೇಳಿದರು. ನಟಿ ಸಿಂಧೂ ರಾವ್‌, ಹಿರಿಯ ಛಾಯಾಗ್ರಾಹಕ ಮುತ್ತುರಾಜ್, ಸಂಗೀತ ನಿರ್ದೇಶಕ ಸಾಧು ಕೋಕಿಲ ಇತರರು ಚಿತ್ರತಂಡದಲ್ಲಿ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.