ADVERTISEMENT

ಮನ ಮನಗಳ ದ್ವಂದ್ವದ ಮಂಥನ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2017, 19:30 IST
Last Updated 16 ಫೆಬ್ರುವರಿ 2017, 19:30 IST
ಕಿರಣ್‌ ರಜಪೂತ್‌, ಅರ್ಪಿತಾ
ಕಿರಣ್‌ ರಜಪೂತ್‌, ಅರ್ಪಿತಾ   

‘ಅಶೋಕ ಪೈ ಹೃದಯವಂತರು. ಅವರು ಈಗ ಇದ್ದಿದ್ದರೆ ತುಂಬ ಖುಷಿಪಡುತ್ತಿದ್ದರು. ಈ ಚಿತ್ರ ಮೂಡಿಬಂದ ಬಗ್ಗೆ ಅವರಿಗೆ ಅಪಾರ ಖುಷಿಯಿತ್ತು’ – ಇಷ್ಟು ಹೇಳಿ ನಟ, ನಿರ್ದೇಶಕ ಸುರೇಶ್ ಹೆಬ್ಳೀಕರ್‌ ನಿಟ್ಟುಸಿರುಬಿಟ್ಟರು.

‘ಮನ ಮಂಥನ’ ಖ್ಯಾತ ಮನೋವೈದ್ಯ ಡಾ. ಅಶೋಕ ಪೈ ನಿರ್ಮಾಣದ ಕೊನೆಯ ಸಿನಿಮಾ. ಅದು ಇಂದು (ಫೆ.17) ಬಿಡುಗಡೆಯಾಗುತ್ತಿದೆ. ಈ ಕುರಿತು ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಪತ್ರಿಕಾಗೋಷ್ಠಿ ಕರೆದಿತ್ತು.

ಕೆಲವು ತಿಂಗಳ ಹಿಂದಷ್ಟೇ ತೀರಿಕೊಂಡಿರುವ ಅಶೋಕ ಪೈ, ಭೌತಿಕವಾಗಿ ಇಲಿಲ್ಲ ಎನ್ನುವುದನ್ನು ಬಿಟ್ಟರೆ ಎಲ್ಲರ ಮಾತಿನಲ್ಲಿಯೂ ಮತ್ತೆ ಮತ್ತೆ ಮರುಕಳಿಸುತ್ತಿದ್ದರು. ಈ ಚಿತ್ರದ ಕಥೆಯೂ ಅವರದೇ.

‘ಇದು ಮನೋವೈಜ್ಞಾನಕ್ಕೆ ಸಂಬಂಧಿಸಿದ ಚಿತ್ರ. 1990ರ ನಂತರ ಭಾರತದ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಕಷ್ಟು ಬದಲಾಗಿದೆ. ಈ ಬದಲಾದ ಪರಿಸ್ಥಿತಿಯಲ್ಲಿ ಯುವಕರ ಮಾನಸಿಕ ದ್ವಂದ್ವದ ಸುತ್ತ ಈ ಸಿನಿಮಾವನ್ನು ಹೆಣೆಯಲಾಗಿದೆ. ಇದು ನಮ್ಮ ಸಮಾಜದ ಪ್ರತಿ ಕುಟುಂಬಕ್ಕೂ ಅನ್ವಯಿಸುವ ಕಥೆ’ ಎಂದು ಹೆಬ್ಳೀಕರ್ ವಿವರಿಸಿದರು. ಇದು ಅಶೋಕ ಪೈ ಅವರು ತಮ್ಮ ವೃತ್ತಿಬದುಕಿನಲ್ಲಿ ಕಂಡ ಕೆಲವು ನೈಜಘಟನೆಗಳನ್ನು ಆಧರಿಸಿ ಈ ಸಿನಿಮಾ ಹೆಣೆಯಲಾಗಿದೆ.

ಕಿರಣ್‌ ರಜಪೂತ್‌, ಅರ್ಪಿತಾ, ರಮೇಶ್‌ ಭಟ್‌, ಸುಮನ್‌, ಸಂಗೀತಾ, ಕೆ.ಎಸ್‌. ಶ್ರೀಧರ್‌ ಜತೆಗೆ ಸುರೇಶ್‌ ಹೆಬ್ಳೀಕರ್‌ ಅವರೂ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ರಮೇಶ್‌ ಭಟ್‌ ಅವರ ಪಾತ್ರಕ್ಕೆ ಅತ್ಯುತ್ತಮ ಪೋಷಕನಟ ಪ್ರಶಸ್ತಿ ದೊರೆತಿದೆ. ಈ ಖುಷಿಯ ಜತೆಗೆ ಮಾತಿಗಿಳಿದ ರಮೇಶ್‌ ಭಟ್‌ – ‘ಈ ಸಿನಿಮಾದಲ್ಲಿ ಫೈಟ್‌ ಇಲ್ಲ, ಐಟಂ ಸಾಂಗ್‌ ಇಲ್ಲ, ತುಂಡುಡುಗೆಯ ಪ್ರದರ್ಶನ ಇಲ್ಲ. ಆದರೆ ಬದುಕಿಗೆ ಹತ್ತಿರವಾದ ತುಂಬ ನೈಜ ಕಥೆಯಿರುವ ಸಿನಿಮಾ ಇದು. ಇಂದಿನ ತಲೆಮಾರಿನ ತಂದೆ ಮಕ್ಕಳ ಮಧ್ಯದ ವಿಚಾರಗಳ ದ್ವಂದ್ವವನ್ನು ತುಂಬ ಚೆನ್ನಾಗಿ ತೋರಿಸಿದ್ದಾರೆ’ ಎಂದು ಪ್ರಶಂಸಿಸಿದರು.

ಧಾರವಾಡದ ಕಿರಣ್‌ ಈ ಚಿತ್ರದಲ್ಲಿ ತಾಯಿಯ ಕನಸನ್ನು ಈಡೇರಿಸಲು ಹೆಣಗುವ ಮಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ನಾವು ಅಂದುಕೊಂಡಿರುವುದು ಆಗದೇ ಇದ್ದಾಗ ಬದುಕಿನಲ್ಲಿ ಆಗುವ ಬದಲಾವಣೆಗಳ ಕುರಿತು ಈ ಚಿತ್ರದಲ್ಲಿನ ನನ್ನ ಪಾತ್ರ ಹೇಳುತ್ತದೆ’ ಎಂದು ಅವರು ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು.

‘ಈ ಸಿನಿಮಾದಿಂದ ನಾನು ಸಾಕಷ್ಟು ಸಂಗತಿಗಳನ್ನು ಕಲಿತುಕೊಂಡಿದ್ದೇನೆ’ ಎಂದು ನಿರ್ದೇಶಕರನ್ನು ಮನಃಪೂರ್ತಿ ಹೊಗಳಿದರು ಅರ್ಪಿತಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.