ADVERTISEMENT

ಮಹೇಶ್ ಭಟ್‌ ಅಭಿಮಾನಿಯ ಕನ್ನಡ ‘ಸಂಭವ’

ಪಂಚರಂಗಿ

​ಪ್ರಜಾವಾಣಿ ವಾರ್ತೆ
Published 29 ಮೇ 2015, 19:30 IST
Last Updated 29 ಮೇ 2015, 19:30 IST

ಕನ್ನಡದ ನಿರ್ದೇಶಕ ಟಿ.ಎನ್. ನಾಗೇಶ್ ಅವರ ಮೇಲೆ ಬಾಲಿವುಡ್ ನಿರ್ದೇಶಕ ಮಹೇಶ್ ಭಟ್ ಅವರ ಪ್ರಭಾವ ಸ್ವಲ್ಪ ಜೋರಾಗಿಯೇ ಆಗಿದೆ! ಭಟ್ ಅವರ ಹಲವು ಚಿತ್ರಗಳನ್ನು ನೋಡಿ ಪ್ರೇರಣೆಗೊಂಡಿರುವ ನಾಗೇಶ್, ಅಂಥದೇ ಬಗೆಯ ಚಿತ್ರವೊಂದನ್ನು ನಿರ್ದೇಶಿಸುತ್ತಿದ್ದಾರೆ. ಮುಹೂರ್ತ ನಡೆದ ಬಳಿಕ ಸಮಯ ವ್ಯರ್ಥ ಮಾಡದೇ ಒಂದು ಹಂತದ ಚಿತ್ರೀಕರಣವನ್ನು ಮಾಡಿ ಮುಗಿಸಿದ್ದಾರೆ. ರೊಮ್ಯಾಂಟಿಕ್ – ಸಸ್ಪೆನ್ಸ್ ಥ್ರಿಲ್ಲರ್ ಆಗಿರುವ ಚಿತ್ರದ ಹೆಸರು ‘ಸಂಭವ’.

ಈ ಹಿಂದೆ ‘ಪಂಚಾಮೃತ’ ಎಂಬ ಸಿನಿಮಾ ನಿರ್ದೇಶಿಸಿದ್ದ ನಾಗೇಶ್, ಅದರ ಬಳಿಕ ಎರಡೂವರೆ ವರ್ಷ ಯಾವುದೇ ಯೋಜನೆ ಕೈಗೆತ್ತಿಕೊಂಡಿರಲಿಲ್ಲ. ಹಾಗೆಂದು ಅವರು ಸುಮ್ಮನೇ ಕುಳಿತಿರಲಿಲ್ಲ. ಆಸಕ್ತಿಕರವಾದ ಕಥೆಯೊಂದನ್ನು ಬರೆದು, ಅದನ್ನು ಚಿತ್ರರೂಪಕ್ಕೆ ತರುವ ಕೆಲಸ ನಡೆಸಿದ್ದರು. ಮಹೇಶ ಭಟ್ ಅವರ ‘ಜಿಸ್ಮ್’ ಸಿನಿಮಾದಂಥದ್ದೇ ಆದ ಕಥೆ ‘ಸಂಭವ’ದಲ್ಲಿದೆ. ‘ಹಾಗೆಂದು ಇದು ರಿಮೇಕ್ ಅಲ್ಲ. ಅದರಿಂದ ಸ್ಫೂರ್ತಿ ಪಡೆದಿರುವೆ’ ಎನ್ನುವ ಸ್ಪಷ್ಟನೆ ಅವರದು.

‘ಸಿರಿವಂತ’ ಹಾಗೂ ‘ಶ್ರಾವಣ’ದಲ್ಲಿ ಕಾಣಿಸಿಕೊಂಡಿದ್ದ ಭುವನಚಂದ್ರ, ಪೂರ್ಣಪ್ರಮಾಣದ ನಾಯಕನಾಗಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮಂತ್ರಿಯ ಮಗನಾಗಿದ್ದರೂ ಅಪ್ಪನ ಹಣಕ್ಕೆ ಆಸೆ ಪಡದೇ ಸ್ವಾಭಿಮಾನದಿಂದ ಬದುಕುವ ಯುವಕನ ಪಾತ್ರ ಅವರದು. ‘24 ಕ್ಯಾರೆಟ್’ ಸಿನಿಮಾದಲ್ಲಿ ನಟಿಸಿದ್ದ ಪೂಜಾ ‘ಸಂಭವ’ದ ನಾಯಕಿ. ಎರಡು ಶೇಡ್‌ಗಳ ಪಾತ್ರ ಅವರದು. ರಂಗಭೂಮಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುವ ಅನುರಾಗ್‌, ‘ಪ್ರತಿ ಕ್ಷಣವೂ ತಿರುವು ಇರುವ ಸಿನಿಮಾದಲ್ಲಿ ನೆಗೆಟಿವ್ ಪಾತ್ರ ನನ್ನದು’ ಎಂದರು. ಹವ್ಯಾಸ ರಂಗಭೂಮಿ ವಲಯದಲ್ಲಿ ಚಿರಪರಿಚಿತರಾಗಿರುವ ಶ್ರೀನಿವಾಸ್ ಅವರು ಕೂಡ ‘ಸಂಭವ’ದ ಮೂಲಕ ಸಿನಿಮಾ ಲೋಕಕ್ಕೆ ಪರಿಚಯಗೊಳ್ಳುತ್ತಿದ್ದಾರೆ.

ನಾಗೇಶ್ ಅವರ ಹಳೆಯ ಮಿತ್ರ ರವಿಕುಮಾರ್ ‘ಸಂಭವ’ಕ್ಕೆ ಬಂಡವಾಳ ಹಾಕುತ್ತಿದ್ದಾರೆ. ‘ಕಥೆ ಕೇಳಿದ ಮರುಕ್ಷಣವೇ ಒಪ್ಪಿಗೆ ಕೊಟ್ಟೆ. ಇದು ಒಂದು ಕೋಟಿ ರೂಪಾಯಿ ಬಜೆಟ್‌ನ ಸಿನಿಮಾ’ ಎಂದು ರವಿಕುಮಾರ್ ಹೇಳಿದರು. ಇನ್ನಿಬ್ಬರು ನಿರ್ಮಾಪಕರಾದ ಆರ್. ತಾರಾ ಹಾಗೂ ಎಂ. ರವಿಕುಮಾರ್, ಛಾಯಾಗ್ರಾಹಕ ಬೆನಕ ರಾಜು, ಸಂಕಲನಕಾರ ಬಸವರಾಜ ಅರಸ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ವೀರ ಸಮರ್ಥ್ ಸಂಗೀತ ಸಂಯೋಜಿಸಿದ್ದಾರೆ. ಚಿಕ್ಕಮಗಳೂರು ಸಮೀಪದ ಕಾಫಿ ಎಸ್ಟೇಟಿನ ಬಂಗಲೆ, ಮಂಗಳೂರು ಹಾಗೂ ಗೋವಾದಲ್ಲಿ ಹದಿನೈದು ದಿನಗಳ ಕಾಲ ಚಿತ್ರೀಕರಣ ನಡೆಸಿಕೊಂಡು ಚಿತ್ರತಂಡ ವಾಪಸಾಗಿದೆ. ಜೂನ್ ಎರಡರಿಂದ ಎರಡನೇ ಹಂತದ ಚಿತ್ರೀಕರಣ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.