ಚಂದ್ರು ನಿರ್ದೇಶನದ ‘ಕನಕ’ ಚಿತ್ರದ ಮಾತಿನ ಭಾಗವೀಗ ಸಂಪೂರ್ಣವಾಗಿ ಮುಕ್ತಾಯವಾಗಿದೆ. ಇನ್ನೆರಡು ಹಾಡುಗಳು ಬಾಕಿ ಇವೆ. ಆ ಹಾಡುಗಳನ್ನು ಚಿತ್ರೀಕರಿಸಿಕೊಳ್ಳಲು ಅವರು ವಿಶೇಷವಾದ ಸೆಟ್ ಹಾಕಲು ಯೋಜಿಸಿಕೊಂಡಿದ್ದಾರೆ. ನಾಯಕ ದುನಿಯಾ ವಿಜಯ್ ಈ ಚಿತ್ರದಲ್ಲಿ ಹಲವು ರಿಸ್ಕಿ ಸನ್ನಿವೇಶಗಳಲ್ಲಿ ಅಭಿನಯಿಸಿದ್ದಾರೆ ಎಂದು ಚಿತ್ರತಂಡ ಹೇಳಿಕೊಂಡಿದೆ.
‘ರಿಯಲಿಸ್ಟಿಕ್ ಪ್ರೇಮಕಥೆ ಮತ್ತು ಆ್ಯಕ್ಷನ್ ಎರಡೂ ಇರುವ ಈ ಚಿತ್ರ ಖಂಡಿತ ಪ್ರೇಕ್ಷಕರಿಗೆ ಇಷ್ಟವಾಗಲಿದೆ’ ಎಂಬ ಭರವಸೆ ಚಂದ್ರು ಅವರದು. ಇದು ನೈಜ ಘಟನೆ ಆಧರಿಸಿದ ಸಿನಿಮಾವಂತೆ. ನಾಯಕ ಆಟೊ ಡ್ರೈವರ್. ರಾಜಕುಮಾರ್ ಅಭಿಮಾನಿ. ಅಂಥವನಿಗೆ ಪ್ರೀತಿಯಾದರೆ ಹೇಗಿರುತ್ತದೆ ಎಂಬುದನ್ನು ಚಂದ್ರು ಕಾವ್ಯಾತ್ಮಕವಾಗಿ ಹೇಳಹೊರಟಿದ್ದಾರೆ.
ಮಾನ್ವಿತಾ ಹರೀಶ್ ಮತ್ತು ಹರಿಪ್ರಿಯಾ ಈ ಚಿತ್ರದಲ್ಲಿ ನಾಯಕಿಯರಾಗಿ ನಟಿಸಿದ್ದಾರೆ. ಸಾಧುಕೋಕಿಲ, ರಂಗಾಯಣ ರಘು, ರವಿಶಂಕರ್, ಶ್ರೀನಿವಾಸಮೂರ್ತಿ, ಅಚ್ಯುತರಾವ್, ಸುಧಾ, ಪದ್ಮಜಾರಾವ್, ಸುಧಾ ಬೆಳವಾಡಿ, ಯುಗ ಚಂದ್ರು ಮುಂತಾದವರು ತಾರಾಬಳಗದಲ್ಲಿದ್ದಾರೆ. ಸತ್ಯ ಹೆಗ್ಡೆ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ನವೀನ್ ಸಜ್ಜು ಸಂಗೀತ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.