ಒಂದಿಷ್ಟು ಜನ ಹೊಸ ಹುಡುಗರು ಸೇರಿಕೊಂಡು ‘ಧರ್ಮಪುರ’ ಎಂಬ ಸಿನಿಮಾ ಮಾಡಿದ್ದಾರೆ. ಸಿನಿಮಾದ ಹಾಡುಗಳನ್ನು ಬಿಡುಗಡೆ ಮಾಡಿ, ಸಿನಿಮಾ ಬಗ್ಗೆ ತುಸು ಮಾಹಿತಿಯನ್ನು ಕೊಡಬೇಕು ಎಂಬ ಉದ್ದೇಶದಿಂದ ಸಿನಿತಂಡ ಈಚೆಗೆ ಸುದ್ದಿಗೋಷ್ಠಿ ಕರೆದಿತ್ತು.
ಸಿನಿಮಾದ ನಾಲ್ಕು ಹಾಡುಗಳನ್ನು ಬಿಡುಗಡೆ ಮಾಡಿ, ಸಿನಿ ತಂಡಕ್ಕೆ ಶುಭ ಕೋರಲು ಲಹರಿ ವೇಲು ಅವರು ಕಾರ್ಯಕ್ರಮಕ್ಕೆ ಬಂದಿದ್ದರು.
ಸುದ್ದಿಗೋಷ್ಠಿಗೂ ಮೊದಲು ಚಿತ್ರದ ಟ್ರೇಲರ್ ತೋರಿಸಲಾಯಿತು. ಇದು ಪೊಲೀಸ್ ಅಧಿಕಾರಿಯೊಬ್ಬನ ಕಥೆ. ಒಂದಿಷ್ಟು ಹೊಡಿಬಡಿ ದೃಶ್ಯಗಳು ಸಿನಿಮಾದಲ್ಲಿ ಇವೆ ಎಂಬುದನ್ನು ಟ್ರೇಲರ್ ಖಚಿತಪಡಿಸಿತು.
‘ಮನುಷ್ಯ ತನ್ನ ಜೀವನದಲ್ಲಿ ಪ್ರೀತಿಯಿಂದ ಗೆಲುವು ಸಾಧಿಸಲು ಸಾಧ್ಯವೇ ಅಥವಾ ದ್ವೇಷದಿಂದಲೇ ಎಂಬುದು ಸಿನಿಮಾ ಕಥೆ. ಇದರಲ್ಲಿ ಪೊಲೀಸ್ ಅಧಿಕಾರಿಯನ್ನು ಇಬ್ಬರು ಯುವತಿಯರು ಪ್ರೀತಿಸುತ್ತಿರುತ್ತಾರೆ. ಆ ಅಧಿಕಾರಿ ಇಬ್ಬರಲ್ಲಿ ಯಾರಿಗೆ ಸಿಗುತ್ತಾನೆ ಎಂಬುದು ಚಿತ್ರದ ಕೊನೆಯಲ್ಲಿ ಗೊತ್ತಾಗುತ್ತದೆ’ ಎಂದರು ನಿರ್ದೇಶಕ ಹೇಮಂತ ನಾಯ್ಕ್.
ಮಂಜುಳಾ ದಾನೇಶ್ವರ್ ಮತ್ತು ಹೇಮಂತ್ ನಾಯ್ಕ್ ಅವರು ಜೊತೆಯಾಗಿ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.
ರಮೇಶ್ ಪಾಲ್ತ್ಯ ಅವರು ನಾಯಕನ ಪಾತ್ರವನ್ನು, ಅಮೃತಾ ವಿ. ರಾಜ್ ಮತ್ತು ರಾಣಿ ಪದ್ಮಜಾ ಚವಾಣ್ ಅವರು ನಾಯಕಿಯರ ಪಾತ್ರವನ್ನು ನಿಭಾಯಿಸಿದ್ದಾರೆ. ಖಳನಾಯಕನ ಪಾತ್ರ ಮಾಡಿರುವುದು ಮುರುಗೇಶ್ ಅವರು.
ನಲವತ್ತು ದಿನಗಳಲ್ಲಿ ಈ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆಯಂತೆ. ಈಗ ಸಿನಿಮಾ ಸೆನ್ಸಾರ್ ಮಂಡಳಿಯ ಅಂಗಳದಲ್ಲಿ ಇದೆಯಂತೆ. ರಮೇಶ್ ಅವರು ಬಳ್ಳಾರಿಯವರು. ಸುದ್ದಿಗೋಷ್ಠಿಯಲ್ಲಿ ಹೆಚ್ಚೇನೂ ಮಾತನಾಡಲಿಲ್ಲ.
‘ಸಂಪತ್ತಿಗೆ ಸವಾಲ್ ಚಿತ್ರದಲ್ಲಿ ಮಂಜುಳಾ ಅವರಿಗೆ ಸಿಕ್ಕಂತಹ ಪಾತ್ರ ನನ್ನದು’ ಎಂದರು ಅಮೃತಾ. ಪದ್ಮಜಾ ಅವರು ಆಂಧ್ರಪ್ರದೇಶದವರು. ಅವರೂ ಸಿನಿಮಾ ಬಗ್ಗೆ ಹೆಚ್ಚು ಮಾತನಾಡಲಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.