ಮುಂಬೈ: ಅಮಿತಾಬ್ ಬಚ್ಚನ್ ಹಾಗೂ ಶತ್ರುಘ್ನ ಸಿನ್ಹಾ ಒಂದೇ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ವಿಚಾರವನ್ನು ನನ್ನಿಂದ ನಂಬಲು ಸಾಧ್ಯವಾಗುತ್ತಿಲ್ಲ ಎಂದು ಟಿವಿ ಕಾರ್ಯಕ್ರಮಗಳ ನಿರೂಪಕ ಸಾಜಿದ್ ಖಾನ್ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
1980ರಲ್ಲಿ ತೆರೆ ಕಂಡಿದ್ದ ‘ದೋಸ್ತಾನಾ‘ ಚಿತ್ರದಲ್ಲಿ ಈ ದಿಗ್ಗಜರು ಜೊತೆಯಾಗಿ ಕಾಣಿಸಿಕೊಂಡ ಕೊನೆಯ ಚಿತ್ರವಾಗಿತ್ತು. ಇದರಿಂದಾಗಿ ಇಬ್ಬರ ಸಂಬಂಧದ ಬಗ್ಗೆ ಹಲವು ವದಂತಿಗಳು ಹರಿದಾಡಿದ್ದವು. ಆದರೆ ಸುಧೀರ್ಘ 35 ವರ್ಷಗಳ ಬಳಿಕ 'ಯಾರೋಂ ಕೀ ಭಾರತ್' ಎಂಬ ಟಿವಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವ ಮೂಲಕ ಆ ಎಲ್ಲಾ ವದಂತಿಗಳಿಗೆ ತೆರೆ ಎಳೆಯಲಿದ್ದಾರೆ. ಇದು ಈ ಇಬ್ಬರ ಅಭಿಮಾನಿಗಳಲ್ಲಿ ಸಂತಸದ ಜೊತೆಗೆ ಅಪಾರ ನಿರೀಕ್ಷೆ ಉಂಟುಮಾಡಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾರ್ಯಕ್ರಮದ ನಿರೂಪಕ ಸಾಜಿದ್ ಖಾನ್ ‘ನಮ್ಮ ಕಾರ್ಯಕ್ರಮದಲ್ಲಿ ಭಾಗವಹಿಸುವ ಬಗ್ಗೆ ಅಮಿತಾಬ್ ಹಾಗೂ ಶತ್ರುಘ್ನ ಸಿನ್ಹಾ ಅವರೊಂದಿಗೆ ಮಾತುಕತೆ ನಡೆಸಿದ್ದೇವೆ. ಒಪ್ಪಿಗೆ ಸೂಚಿಸಿದ್ದಾರೆ. ಆದರೂ ನನ್ನಿಂದ ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ’ ಎಂದಿದ್ದಾರೆ.
‘ಮಾತುಕತೆಯ ಬಳಿಕ ಇಬ್ಬರ ಜೊತೆ ಒಮ್ಮೆಯೂ ಕಾರ್ಯಕ್ರಮದ ಪೂರ್ವಾಭ್ಯಾಸ ಮಾಡದಿರುವ ಕಾರಣ ನಿರೂಪಣೆ ಮಾಡಲಿರುವ ಸನ್ನಿವೇಶ ನೆನೆದು ಭಯವಾಗುತ್ತಿದೆ’ ಎಂದು ತಿಳಿಸಿದ್ದಾರೆ.
‘ಯಾರೋಂ ಕೀ ಭಾರತ್’ ಮನರಂಜನಾ ಕಾರ್ಯಕ್ರಮವಾಗಿದ್ದು, ಅಕ್ಟೋಬರ್ 8ರಿಂದ ಹಿಂದಿಯ ಝೀ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಇದನ್ನು ಸಾಜಿದ್ ಖಾನ್ ಅವರೊಂದಿಗೆ ರಿತೇಶ್ ದೇಶ್ಮುಖ್ ಜಂಟಿಯಾಗಿ ನಿರೂಪಿಸಲ್ಲಿದ್ದಾರೆ.
ಪರಿಣಿತಿ ಚೋಪ್ರಾ ಹಾಗೂ ಸಾನಿಯಾ ಮಿರ್ಜಾ ಅವರೂ ಸಹ ಈ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲ್ಲಿದ್ದು, ಪ್ರೇಕ್ಷಕರಲ್ಲಿ ಮತ್ತಷ್ಟು ನಿರೀಕ್ಷೆಯನ್ನು ಹೆಚ್ಚಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.