ADVERTISEMENT

ಆರೋಗ್ಯ: ಹೊರಗುತ್ತಿಗೆಯ ಸರಕಲ್ಲ!

ಕೆ.ಸಿ.ರಘು
Published 1 ಡಿಸೆಂಬರ್ 2017, 19:30 IST
Last Updated 1 ಡಿಸೆಂಬರ್ 2017, 19:30 IST
ಆರೋಗ್ಯ: ಹೊರಗುತ್ತಿಗೆಯ ಸರಕಲ್ಲ!
ಆರೋಗ್ಯ: ಹೊರಗುತ್ತಿಗೆಯ ಸರಕಲ್ಲ!   

ಕರ್ನಾಟಕ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ವಿಧೇಯಕ ನಮ್ಮ ರಾಜ್ಯದಲ್ಲಷ್ಟೇ ಅಲ್ಲದೇ ದೇಶದಾದ್ಯಂತ ಖಾಸಗಿ ವೈದ್ಯಕೀಯ ಸೇವೆ, ಸರ್ಕಾರದ ಪಾತ್ರ, ಅನಾರೋಗ್ಯದಿಂದ ಬಳಲುವವರ ಹಕ್ಕು – ಹೀಗೆ ಅನೇಕ ವಿಚಾರಗಳು ಚರ್ಚೆಯಾಗುತ್ತಿವೆ.

ಸರ್ಕಾರ ತಾನು ಬಡವ ಪರ, ಜನಸಾಮಾನ್ಯರ ಆರೋಗ್ಯವನ್ನು ಕಾಪಾಡುವಲ್ಲಿ ಬದ್ಧ. ಹಾಗಾಗಿ ಈ ವಿಧೇಯಕ ಎಂದು ಪ್ರಕಟಪಡಿಸುತ್ತಿದೆ. ಖಾಸಗಿ ಕ್ಷೇತ್ರದಲ್ಲಿ ನಡೆಯುತ್ತಿರುವ ಅನ್ಯಾಯ ಮತ್ತು ಅವ್ಯವಸ್ಥೆಗಳ ಬಗ್ಗೆ ಮಾತನಾಡುವ ಮೊದಲು, ನಾವು ಗಮನಿಸಬೇಕಾದುದು ಸರ್ಕಾರ ಜನಸಾಮಾನ್ಯರ ಆರೋಗ್ಯದತ್ತ ನಿರಂತರವಾಗಿ ವಹಿಸಿರುವ ನಿರ್ಲಕ್ಷ ಧೋರಣೆ.

ಸರ್ಕಾರಿ ಆಸ್ಪತ್ರೆಗಳು ಅವ್ಯವಸ್ಥೆಗಳ ಆಗರಗಳಾಗಿವೆ. ಜನಸಾಮಾನ್ಯರು ಗತಿ ಇಲ್ಲದೆ ಖಾಸಗಿಯತ್ತ ಮುಖ ಮಾಡಿದ್ದಾರೆ. ನಮ್ಮ ದೇಶದಲ್ಲಿ ಆರೋಗ್ಯಕ್ಕಾಗಿ ಪ್ರತಿ ವರ್ಷ ಸುಮಾರು 10 ಲಕ್ಷ ಕೋಟಿ ರೂಪಾಯಿಗಳಷ್ಟು ಖರ್ಚಾಗುತ್ತಿದೆ. ಇದರಲ್ಲಿ ಸರ್ಕಾರ ಭರಿಸುವ ವೆಚ್ಚ ಕೇವಲ 1.8 ಲಕ್ಷ ಕೋಟಿಯಷ್ಟೇ. ಅಂದರೆ ಜನಸಾಮಾನ್ಯರನ್ನು ನಮ್ಮ ’ಕಲ್ಯಾ ರಾಜ್ಯ’ ಕೈಬಿಟ್ಟಿದೆ. ಒಟ್ಟು ಕೇಂದ್ರ ಮತ್ತು ರಾಜ್ಯ ಸರ್ಕಾರ ಸೇರಿ ನಮ್ಮ ಜಿಡಿಪಿಯ ಕೇವಲ 1.2 ರಷ್ಟು ಮಾತ್ರ ಖರ್ಚು ಮಾಡುತ್ತಿದೆ.

ADVERTISEMENT

ಜಗತ್ತಿನಲ್ಲಿ ಬಹಳ ಕಳಪೆ ಸಾಧನೆ ನಮ್ಮ ಸರ್ಕಾರದ್ದಾಗಿದೆ. ಸರ್ಕಾರ ಬ್ರೆಡ್ ಮಾಡಬೇಕಿಲ್ಲ, ವಿಮಾನ ನಡೆಸಬೇಕಿಲ್ಲ, ಹೋಟೆಲ್ ನಡೆಸಬೇಕಿಲ್ಲ. ಮೂಲಭೂತವಾಗಿ ಆರೋಗ್ಯ ಮತ್ತು ಶಿಕ್ಷಣದ ಜವಾಬ್ದಾರಿ ಹೊರಲೇಬೇಕು. ‘Two ills that dog our nation - illiteracy and ill-health - should be the prime responsibility of the state.’

ಇಂದು ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಲಕ್ಷಾಂತರ ರೂಪಾಯಿ ದುಡ್ಡು ಕೊಟ್ಟು ಓದಿ, ಮತ್ತೆ ಬೃಹತ್ ಬಂಡವಾಳ ಹೂಡಿ, ಖಾಸಗಿ ಆಸ್ಪತ್ರೆ ನಡೆಸುವವರಲ್ಲಿ ಸಾಮಾಜಿಕ ಕಳಕಳಿ ನಿರೀಕ್ಷಿಸುವುದು ಸಾಧ್ಯವೇ? ಕಳೆದ ಎರಡು ದಶಕಗಳಲ್ಲಿ ಖಾಸಗಿ ವೈದ್ಯಕೀಯ ಕಾಲೇಜುಗಳ ಸಂಖ್ಯೆ 200ಕ್ಕೂ ದಾಟಿದೆ. ಹೆಚ್ಚಿನ ಖಾಸಗಿ ವೈದ್ಯಕೀಯ ಕಾಲೇಜುಗಳು ರಾಜಕಾರಣಿಗಳ ಒಡೆತನದಲ್ಲಿಯೇ ಇರುವುದರಿಂದ ಕ್ರಮಬದ್ಧವಾಗಿ ಸಾರ್ವಜನಿಕ ವ್ಯವಸ್ಥೆಯನ್ನು ಕಡೆಗಣಿಸಿ, ಕೆಡವುತ್ತ, ಖಾಸಗಿ ವ್ಯವಸ್ಥೆಯತ್ತ ಜನಸಾಮಾನ್ಯರನ್ನು ತಳ್ಳಲಾಯಿತು.

ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ಎಲ್ಲ ಆರೋಗ್ಯ ವ್ಯವಸ್ಥೆಗೆ ಮತ್ತು ವೈದ್ಯಕೀಯ ಕಾಲೇಜುಗಳ ಪರವಾನಿಗೆಗೆ ಕಾನೂನಾತ್ಮಕ ಸಂಸ್ಥೆಯಾಗಿದೆ. ಆದರೆ ಇಂದು ಅದು ಅತ್ಯಂತ ಭ್ರಷ್ಟ ಸಂಸ್ಥೆಯಾಗಿದೆ. ಹಾಗೆಯೇ ಆಯುರ್ವೇದ, ಯುನಾನಿ ಮತ್ತು ಹೋಮಿಯೋಪತಿ ನಿಯಂತ್ರಿಸುವ ಮೆಡಿಕಲ್ ಕೌನ್ಸಿಲ್ ಇನ್ನೂ ಕಳಪೆಮಟ್ಟದ್ದಾಗಿದೆ. ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದ ಕಾನೂನಿನಡಿ ಜನಸಾಮಾನ್ಯರು ತಮ್ಮ ಕುಂದುಕೊರತೆಯನ್ನು ಕುರಿತು ದೂರು ನೀಡಬಹುದು. ಆದರೆ ಅಲ್ಲಿ ವೈದ್ಯರುಗಳೇ ಇದ್ದು, ಬೇರೆಯವರಿಗೆ ಅವಕಾಶವಿಲ್ಲದಿರುವುದರಿಂದ ಜನಪರವಾಗಿ ನಿರ್ಧಾರಗಳು/ತೀರ್ಪುಗಳು ಆಗುತ್ತಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ಹಣದ ಲೆಕ್ಕಾಚಾರ ಹೆಚ್ಚಾಗಿದೆ ಎನ್ನುವುದಕ್ಕೆ ಅಲ್ಲಿ ನಡೆಯುವ ಸಿಸೇರಿಯನ್ ಹೆರಿಗೆ ಶೇ.50ರಿಂದ 70ರಷ್ಟು ಆಗುತ್ತಿರುವುದೇ ಸಾಕ್ಷ್ಯವಾಗಿದೆ. ಆದರೆ ಈ ಪ್ರಮಾಣ ಸರ್ಕಾರಿ ಆಸ್ಪತ್ರೆಗಳಲ್ಲಿ ಕೇವಲ ಶೇ.10ರಷ್ಟು ಮಾತ್ರವೇ. ವಿಶ್ವ ಆರೋಗ್ಯ ಸಂಸ್ಥೆ ಹೇಳುವಂತೆ ಶೇ.10ಕ್ಕೂ ಮೀರಿ ಸಿಸೇರಿಯನ್ ಹೆರಿಗೆ ನಡೆದಲ್ಲಿ ಅಲ್ಲಿ ವಾಣಿಜ್ಯ ಕಾರಣಗಳು ಇರುವುದರ ಸೂಚಕ. ಹರಿಯಾಣ ರಾಜ್ಯದಲ್ಲಿ ಹೆಣ್ಣುಭ್ರೂಣಹತ್ಯೆಗೆ ಖಾಸಗಿ ವೈದ್ಯಕೀಯ ವ್ಯವಸ್ಥೆ ಸಹಾಯ ಮಾಡದಿದ್ದಲ್ಲಿ,  6 ವರ್ಷದೊಳಗಿನ ಮಕ್ಕಳಲ್ಲಿ ‘1000 ಗಂಡುಮಕ್ಕಳಿಗೆ 625 ಹೆಣ್ಣುಮಕ್ಕಳು’ – ಈ  ಭಯಾನಕ ಲಿಂಗಾನುಪಾತ ಅಲ್ಲಿ ಉಂಟಾಗುತ್ತಿರಲಿಲ್ಲ. ಕರ್ನಾಟಕದಲ್ಲಿಯೂ ಸಹ ಲಿಂಗಾನುಪಾತ 2014ರಲ್ಲಿದ್ದ 917 ರಿಂದ 898ಕ್ಕೆ 2016ಕ್ಕೆ ಇಳಿದಿರುವುದು ವೈದ್ಯಕೀಯ ವ್ಯವಸ್ಥೆ ಸಹಾಯವಿಲ್ಲದೇ ನಡೆದಿಲ್ಲ.

ಸರ್ಕಾರವು ಆರೋಗ್ಯಕ್ಕೆ ಪೂರಕವಾದ ಕೆಲಸಗಳನ್ನು ಮಾಡದೆ, ಆರೋಗ್ಯ ವ್ಯವಸ್ಥೆಯನ್ನೂ ಸರಿಯಾಗಿ ನಿಭಾಯಿಸದೇ ಇದ್ದಾಗ, ತನ್ನ ಕೈಯನ್ನು ಖಾಸಗಿ ವ್ಯವಸ್ಥೆಗೆ ತಾನೇ ಕೊಟ್ಟು, ತಿರುಚಿಸಿಕೊಂಡಂತಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಖಾಸಗಿ ವ್ಯವಸ್ಥೆಯನ್ನು ನಿಯಂತ್ರಿಸುವುದು ಕಷ್ಟವಾಗಬಹುದು. ಹೀಗಾಗಿ ಜನಸಾಮಾನ್ಯರಿಗೆ ಸಾರ್ವಜನಿಕ ಅಸ್ಪತ್ರೆ ಅದರಲ್ಲೂ ಪ್ರಾರ್ಥಮಿಕ ಚಿಕಿತ್ಸಾ ಕೇಂದ್ರಗಳಿಗೆ ಒತ್ತುಕೊಡಬೇಕಾಗಿದೆ. ಕೇವಲ ವಿಮೆ ಮೂಲಕ ಸಾರ್ವತ್ರಿಕ ಆರೋಗ್ಯ ಸೇವೆ ಕೊಡಲು ಸಾದ್ಯವಿಲ್ಲದ ಮಾತು. ಇದಾಗಲೇ ಇರುವ ವಿಮೆಯಲ್ಲಿ ಸಿಂಹಪಾಲು ಶೇ.70ರಷ್ಟು ಬೆಂಗಳೂರಿನ ಪಾಲಾಗಿದೆ. ಅಲ್ಲಿ ಕೂಡ ಕೇವಲ ಬೆರಳೆಣಿಕೆಯಷ್ಟು ದೊಡ್ಡ ಆಸ್ಪತ್ರೆಗಳು ಮಾತ್ರವೇ ಅದರ ಲಾಭ ಪಡೆದುಕೊಳ್ಳುವುದಾಗಿದೆ. ಆರೋಗ್ಯ ಮತ್ತು ಶಿಕ್ಷಣಕ್ಷೇತ್ರವನ್ನು ಹೊರಗುತ್ತಿಗೆ ಕೊಡುವಂಥದ್ದಲ್ಲ.

**

–ರಘು ಕೆ.ಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.