ಸಂಬಂಧಗಳನ್ನೇ ವಸ್ತುವಾಗಿಸಿಕೊಂಡ ಹಲವು ಧಾರಾವಾಹಿಗಳು ಈಗಾಗಲೇ ’ಬಂದಿವೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮಾ. 20ರ ಸೋಮವಾರದಿಂದ ಪ್ರಸಾರವಾಗಲಿರುವ ಹೊಸ ಧಾರಾವಾಹಿ ‘ಸಿಂದೂರ’ ಇದಕ್ಕೆ ಹೊಸ ಸೇರ್ಪಡೆ.
ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8 ಗಂಟೆಗೆ ಪ್ರಸಾರವಾಗುವ ಈ ಧಾರಾವಾಹಿ ವಿಶಿಷ್ಟ ಕಥಾ ಹಂದರವನ್ನು ಹೊಂದಿದೆ ಎಂದು ವಾಹಿನಿ ಹೇಳಿದೆ. ಅಕ್ಕ–ತಂಗಿಯರ ಬಾಂಧವ್ಯವೇ ಇದರ ಕಥಾವಸ್ತು.
ಅಕ್ಕ, ತಾಯಿಯ ಮತ್ತೊಂದು ಸ್ವರೂಪ. ತಂದೆಯ ಸ್ಥೈರ್ಯ ಮತ್ತು ತಾಯಿಯ ಮಮತೆ ಎರಡೂ ಗುಣ ಅಕ್ಕನ ಒಳಗಿರುತ್ತದೆ. ತಂಗಿ, ಅಕ್ಕನಿಗೆ ಮಗಳಿದ್ದ ಹಾಗೆ. ಆಕೆ ಎಷ್ಟೇ ಬೆಳೆದರೂ ಅಕ್ಕನ ಪಾಲಿಗೆ ಅವಳು ಮಗುವಿನಂತೆಯೇ. ತನ್ನ ತಂಗಿಯ ಬಾಳು ಹಸನಾಗಿಸಲು ಮಹಾ ತ್ಯಾಗಕ್ಕೆ ಮುಂದಾಗುವ ಅಕ್ಕನ ಸಿಂದೂರನ ಕತೆಯಿದು.
ಅನುಭವಿ ಕಲಾವಿದರಾದ ಸೌಮ್ಯಲತಾ, ಆನಂದ್ ನಾಗರ್ಕರ್ ಮತ್ತು ಮುತ್ತುರಾಜ್ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಹೊಸ ಪ್ರತಿಭೆಗಳಾದ ಭೂಮಿಕಾ, ಚಂದನಾ, ಗೌತಮ್ ಮತ್ತು ವಿಕಾಸ್ ಅವರನ್ನು ಈ ಧಾರಾವಾಹಿಯಲ್ಲಿ ಪರಿಚಯಿಸಲಾಗಿದೆ. ಸಕ್ಕರೆಬೈಲು ಶ್ರೀನಿವಾಸ್ ನಿರ್ದೇಶನದ ‘ಸಿಂದೂರ’ಕ್ಕೆ ಕ್ಯಾಮೆರಾ ಹಿಡಿದವರು ನಿಂಗೇಗೌಡ ಮಾರನಹಳ್ಳಿ. ಸಂಕಲನಕಾರರಾಗಿ ನರಸಿಂಹ ಕೆಲಸ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.