ಕಲಾತ್ಮಕ ಮತ್ತು ಮಕ್ಕಳ ಚಿತ್ರ ನಿರ್ದೇಶಿಸಿದ್ದ ಹೇಮಂತ್ಕುಮಾರ್ ಈಗ ಹಾರರ್ ಹಾದಿಗೆ ಹೊರಳಿದ್ದಾರೆ. ಮೊದಲ ಬಾರಿಗೆ ‘ಅರ್ಕಾವತ್’ ಚಿತ್ರದ ಮೂಲಕ ಸಸ್ಪೆನ್ಸ್ ಕಥೆ ಹೇಳಲು ಹೊರಟಿದ್ದಾರೆ. ಚಿತ್ರದ ಪ್ರಾರಂಭದಲ್ಲಿಯೇ ನಾಯಕಿಯ ಕಥೆ ಮುಗಿದು ಹೋಗುತ್ತದೆ. ವಿರಾಮದ ನಂತರ ಆಕೆ ಪ್ರತ್ಯಕ್ಷಳಾಗುತ್ತಾಳೆ. ಆಕೆಯ ಹಿಂದೆ ಆತ್ಮಗಳು ಸುತ್ತಾಡುತ್ತವೆ. ಈ ಸಮಸ್ಯೆಯಿಂದ ಹೇಗೆ ಪಾರಾಗಿ ಬರುತ್ತಾರೆ ಎಂಬುದು ಚಿತ್ರದ ಕಥಾವಸ್ತು. ಮುಕ್ಕಾಲು ಭಾಗದಷ್ಟು ಚಿತ್ರೀಕರಣ ಮುಗಿಸಿರುವ ಚಿತ್ರ ತಂಡ ಈ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಸುದ್ದಿಗೋಷ್ಠಿ ನಡೆಸಿತ್ತು.
ನಿರ್ದೇಶಕ ಹೇಮಂತ್ಕುಮಾರ್, ‘ಇದು ಹಾರರ್ ಕಥೆ. ಚಿತ್ರದಲ್ಲಿ ಕೇವಲ ಒಂದು ಹಾಡು ಸಾಕೆಂದು ನಿರ್ಧರಿಸಿದ್ದೆವು. ಆದರೆ, ಸಹ ನಿರ್ಮಾಪಕ ರವಿ ಅವರ ಸಲಹೆಯಂತೆ ನಾಲ್ಕು ಹಾಡುಗಳಿಗೆ ಅರುಣ್ರಾಮ್ ರಾಗ ಸಂಯೋಜಿಸುವಂತಾಯಿತು’ ಎಂದರು.
‘ಅರ್ಕಾವತ್’ ಎಂದರೇನು? ಎಂಬ ಪ್ರಶ್ನೆಗೆ, ‘ಈ ಶೀರ್ಷಿಕೆಯು ಕಥೆಗೆ ಲಿಂಕ್ ಕೊಡುತ್ತದೆ. ಈ ಕುರಿತು ಮುಂದಿನ ಸುದ್ದಿಗೋಷ್ಠಿಯಲ್ಲಿ ಹೇಳುತ್ತೇನೆ’ ಎಂದ ಅವರು ಗುಟ್ಟು ಬಿಟ್ಟುಕೊಡಲಿಲ್ಲ.
ನಾಯಕ ಅಭಿಜಿತ್, ನಾಯಕಿ ಆಶಾ ಶೆಟ್ಟಿ ಇದ್ದರು. ಇದೇ ವೇಳೆ ‘ಬಿಗ್ಬಾಸ್’ ಖ್ಯಾತಿಯ ಪ್ರಥಮ್ ಚಿತ್ರದ ಹಾಡುಗಳನ್ನು ಬಿಡುಗಡೆಗೊಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.