ADVERTISEMENT

ಇಂದಿನಿಂದ ದ್ರಾಕ್ಷಾರಸ ಮೇಳ 

ಈಶ ಪ್ರಸನ್ನ
Published 24 ಜುಲೈ 2014, 19:30 IST
Last Updated 24 ಜುಲೈ 2014, 19:30 IST

ನಮ್ಮ ದೇಶದಲ್ಲಿ 85-ರಿಂದ 90ರಷ್ಟು ದ್ರಾಕ್ಷಿಯನ್ನು ಹಣ್ಣಿನಂತೆ ಹಾಗೆಯೇ ಜನ ಸೇವಿಸುತ್ತಾರೆ. ಉಳಿದ 10ರಿಂದ 15ರಷ್ಟು ಉತ್ಪನ್ನವನ್ನು ಒಣ ದ್ರಾಕ್ಷಿಯಾಗಿ ಪರಿವರ್ತಿಸಲಾಗುತ್ತದೆ. ಇತ್ತೀಚೆಗೆ ದ್ರಾಕ್ಷಿ ವೈನ್‌ ತಯಾರಿಕೆ ಹೆಚ್ಚು ಪ್ರಗತಿಯಲ್ಲಿದೆ.

ರಾಜ್ಯದಲ್ಲಿ ಬೆಂಗಳೂರು, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಗದಗ, ಬಾಗಲಕೋಟೆ ಮುಂತಾದ ಕಡೆ ದ್ರಾಕ್ಷಿ ಹಣ್ಣು ಬೆಳೆಯುತ್ತಾರೆ. ವಿಶ್ವದಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ವೈನ್‌ ಉದ್ದಿಮೆಗೆ ಉತ್ತೇಜನ ನೀಡುವುದರಿಂದ ದ್ರಾಕ್ಷಿ ಬೆಳೆಗಾರರು ತಾಜಾ ಹಣ್ಣಿನ ತಳಿಗಳ ಬದಲಾಗಿ ವೈನ್‌ ತಯಾರಿಸಲು ಬಳಸುವ ದ್ರಾಕ್ಷಿ ತಳಿಗಳನ್ನು ಬೆಳೆದು, ವೈನ್‌ ತಯಾರಿಕಾ ಘಟಕಗಳಿಗೆ ಪೂರೈಸುತ್ತಿವೆ.

ರಾಜ್ಯದಲ್ಲಿ ದ್ರಾಕ್ಷಿ ಸಂಸ್ಕರಣ ಮತ್ತು ವೈನ್‌ ಉದ್ಯಮಕ್ಕಿರುವ ಅಪಾರ ಅವಕಾಶವನ್ನು ಪರಿಚಯಿಸಲು ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ‘ಬೆಂಗಳೂರು ಅಂತರರಾಷ್ಟ್ರೀಯ ದ್ರಾಕ್ಷರಸ ಮೇಳ–2014ನ್ನು ಜಯಮಹಲ್‌ ಅರಮನೆ ಪ್ರಾಂಗಣದಲ್ಲಿ ಜು.25ರಿಂದ 27 ರವರೆಗೆ ಆಯೋಜಿಸಲಾಗಿದೆ. ಮೂರು ದಿನಗಳ ಅವಧಿಯ ಈ ಅಂತರರಾಷ್ಟ್ರೀಯ ವೈನ್‌ ಮೇಳದಲ್ಲಿ ಇವೆಲ್ಲಾ ಇರಲಿವೆ...
* 35ಕ್ಕೂ ಹೆಚ್ಚು ವೈನರಿಗಳು ಹಾಗೂ ಅಂತರರಾಷ್ಟ್ರೀಯ ವೈನರಿಗಳು.
* ವೈನ್‌ಉತ್ಪಾದನೆ, ತಯಾರಿಕೆ , ಕುರಿತು ಆಧುನಿಕ ತಂತ್ರಜ್ಞಾನದ ಬಗ್ಗೆ ಮಾಹಿತಿ  ಪ್ರದರ್ಶನ,  ಮಾರಾಟ.
* ಭಾರತದ ವೈನ್‌ ಮಾರುಕಟ್ಟೆ, ದ್ರಾಕ್ಷಿಯಿಂದ ವೈನ್‌, ವೈನ್‌ ಅರ್ಥೈಸುವಿಕೆ.
* ವೈನ್‌ ದ್ರಾಕ್ಷಿ ತಳಿಗಳು, ಅದರ ತೋಟದ ಅಭಿವೃದ್ದಿ, ರೋಗ ನಿರ್ವಹಣೆ, ಬೇಸಾಯ ಪದ್ಧತಿ ಬಗ್ಗೆ ಮಾಹಿತಿ.
* ಬೆಳೆಗಾರರ, ಮಾರಾಟಗಾರರ ಮತ್ತು ತಯಾರಕರ ಸಭೆ.
* ವೈನ್‌ ಸೇವನೆ, ಗುಣಮಟ್ಟ ಪರಾಮರ್ಶೆ, ವೈನ್‌ ಉದ್ದಿಮೆ ಸ್ಥಿತಿ–ಗತಿ –ಭವಿಷ್ಯ, ಉದ್ದಿಮೆ ಸಾಗುತ್ತಿರುವ ದಿಕ್ಕು, ಆಹಾರ ಹೊಂದಾಣಿಕೆ ಹಾಗೂ ಬಳಕೆದಾರರಿಗೆ ತಿಳಿವಳಿಕೆ.
ಮೇಳದ ಪ್ರವೇಶ ದರ ಪ್ರತಿಯೊಬ್ಬರಿಗೆ ರೂ. 49. 

ವೈನ್ ಟೂರಿಸಂ
ಫ್ರಾನ್ಸ್‌, ಜರ್ಮನಿಯಲ್ಲಿ ಇರುವಂತೆ ಇಲ್ಲಿಯೂ ವೈನ್‌ ಪ್ರವಾಸೋದ್ಯಮವನ್ನು ಆರಂಭಿಸಲಾಗುತ್ತಿದೆ. ಬೆಂಗಳೂರು ದೇವನಹಳ್ಳಿ ವಿಮಾನ ನಿಲ್ದಾಣ ರಸ್ತೆಯಲ್ಲಿ ಹಾಗೂ ರಾಮನಗರ, ಮೈಸೂರು, ಗೌರಿಬಿದನೂರು, ತುಮಕೂರುಗಳಲ್ಲಿ ವೈನ್‌ ಟೂರಿಸಂ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ವೈನ್‌ ಟೂರಿಸಂಗಳಲ್ಲಿ ಇದರ ಬಳಕೆಯ ಕುರಿತು ತಿಳಿವಳಿಕೆ, ರುಚಿ ನೋಡುವ ಸೌಲಭ್ಯ ಮತ್ತು ಆಹಾರ ಲಭ್ಯವಿದೆ ಜನರಿಂದ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಇಲ್ಲಿಯ ವೈನ್‌ಗೆ ವಿದೇಶಗಳಲ್ಲಿಯೂ ಬೇಡಿಕೆ ಹಾಗೂ ರಫ್ತು ಪ್ರಮಾಣವು ಹೆಚ್ಚಳವಾಗಿದೆ.

ದ್ರಾಕ್ಷಾರಸದ ಅರಿವು
‘ದ್ರಾಕ್ಷಾರಸದಲ್ಲಿ ನೈಸರ್ಗಿಕವಾದ ಮದ್ಯಸಾರ ಇರುತ್ತದೆ. ಇದರಿಂದ ಆರೋಗ್ಯಕ್ಕೆ ಅಪಾಯವಿಲ್ಲ. ಮಂಡಳಿಯು ಇದರ ಬಗ್ಗೆ ಅರಿವು ಹಾಗೂ ವೈನ್‌ ಉದ್ಯಮ ಬೆಳೆಸಲು, ಜನರಿಗೆ ದ್ರಾಕ್ಷರಸದ ಬಗ್ಗೆ ಮಾಹಿತಿ ನೀಡಲು ವೈನ್‌ ಮೇಳವು ಸಹಕಾರಿಯಾಗಲಿದೆ.
– ಡಾ.ಬಿ.ಕೃಷ್ಣ, ವ್ಯವಸ್ಥಾಪಕ ನಿರ್ದೇಶಕರು,
ಕರ್ನಾಟಕ ವೈನ್‌ ಮಂಡಳಿ


ಕರ್ನಾಟಕ ದ್ರಾಕ್ಷಾರಸ ಮಂಡಳಿ: ಪ್ಯಾಲೆಸ್‌ ಹೋಟೆಲ್‌ ಆವರಣ, ಜಯಮಹಲ್. ಬೆಂಗಳೂರು ಅಂತರರಾಷ್ಟ್ರೀಯ ವೈನ್‌ ಫೆಸ್ಟಿವಲ್‌–2014. ಉದ್ಘಾಟನೆ ತೋಟಗಾರಿಕೆ ಮತ್ತು ಕೃಷಿ ಮಾರುಕಟ್ಟೆ ಸಚಿವ ಶಾಮನೂರು ಶಿವಶಂಕರಪ್ಪ. ಜುಲೈ 25ರಿಂದ 27. ಸಂಜೆ 4.30.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT