ADVERTISEMENT

ಇಂದಿನಿಂದ ‘ಸ್ವರ ಸಾಮರಸ್ಯ’

​ಪ್ರಜಾವಾಣಿ ವಾರ್ತೆ
Published 1 ಮೇ 2015, 19:30 IST
Last Updated 1 ಮೇ 2015, 19:30 IST

ಸಾಂಸ್ಕೃತಿಕ ಸಂಘಟನೆಯಾಗಿ ‘ಸಮುದಾಯ’ಕ್ಕೆ 40 ವರ್ಷಗಳು ಕಳೆದವು. ಸಮೂಹದ ಆಶಯಗಳನ್ನು ಆಕೃತಿಗೊಳಿಸುತ್ತ, ಕಾಲದ ಕರೆಗೆ ಓಗೊಡುತ್ತ ಸಾಗಿಬಂದ ಪ್ರಗತಿಪರ ಸಂಘಟನೆ ಇದು. ಇಂದು ನಾಡಿನಲ್ಲಿ ಸಮೂಹದ ಜತೆ ಸಾಂಸ್ಕೃತಿಕವಾಗಿ ತೊಡಗಿಸಿಕೊಂಡವರು ಒಂದಲ್ಲಾ ಒಂದು ರೀತಿಯಲ್ಲಿ ‘ಸಮುದಾಯ’ದ ಜತೆ ಸಂಬಂಧ ಹೊಂದಿದವರೇ ಎನ್ನುವುದು ಹೆಮ್ಮೆಯ ಸಂಗತಿ.

ರಂಗಪ್ರಯೋಗ, ವಿಚಾರ ಸಂಕಿರಣಗಳು, ಜಾಥಾ ಮುಂತಾದ ಚಟುವಟಿಕೆಗಳನ್ನು ನಿರಂತರವಾಗಿ ನಡೆಸಿಕೊಂಡು ಬಂದಿರುವ ‘ಸಮುದಾಯ’ ಈಗ ಸಾಹಿತ್ಯ ಸಮುದಾಯ, ರಂಗಸಮುದಾಯ, ಚಿತ್ರಸಮುದಾಯ ಹೀಗೆ ಸೌಂದರ್ಯಶಾಸ್ತ್ರದ ಹಲವು ಭೂಮಿಕೆಗಳಲ್ಲಿ ಸಮಾಜದ ಗತಿಬಿಂಬವಾಗಿ ಮುಂದುವರಿಯುತ್ತಿದೆ.

ನಲವತ್ತು ತುಂಬುತ್ತಿರುವ ಈ ಕಾಲಘಟ್ಟದಲ್ಲಿ ‘ಸಮುದಾಯ’ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಪಾಲ್ಗೊಳ್ಳಲು ಆಶಿಸಿದೆ. ಅದಕ್ಕಾಗಿ ಮುಂದಿನ ಒಂದು ವರ್ಷ ‘ಸಮುದಾಯ’ 40ರ ಹೆಸರಿನಲ್ಲಿ ರಾಜ್ಯದಾದ್ಯಂತ ಕಾರ್ಯಕ್ರಮಗಳನ್ನು ಆಯೋಜಿಸಿದೆ.

‘ಸ್ವರ ಸಾಮರಸ್ಯ’
ಸ್ವರ ಸಾಮರಸ್ಯ ಎಂಬ ರಾಷ್ಟ್ರಮಟ್ಟದ ಸಂಗೀತ ಉತ್ಸವವನ್ನು ಬುದ್ಧಪೂರ್ಣಿಮೆಯ ಸಂದರ್ಭದಲ್ಲಿ ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ 2015ರ ಮೇ 2, 3 ಮತ್ತು 4ರಂದು ನಡೆಸುತ್ತಿದ್ದೇವೆ. ನಾಡಿನ ಹೆಸರಾಂತ ಸಂಗೀತ ದಿಗ್ಗಜರು ಈ ಉತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.

ಹಿಂದೂಸ್ತಾನಿ, ಕರ್ನಾಟಕ ಸಂಗೀತದಲ್ಲಿ ಹಲವು ಪ್ರಯೋಗಗಳನ್ನು ಕೈಗೊಂಡು ಯುವ ಮಿಡಿತವನ್ನು ಧನಾತ್ಮಕವಾಗಿ ಸಂಘಟಿಸಿದವರು, ಸೂಫಿ, ತತ್ವಪದಗಳ ಮೂಲಕ ಸಂಘರ್ಷ ಮತ್ತು ಸಾಮರಸ್ಯದ ನೆಲೆಗಳನ್ನು ಅರಸಿದವರು, ಪ್ರತಿಭಟನೆಯ ಹಾಡುಗಳ ಮೂಲಕ ವರ್ಣ, ವರ್ಗ ಸಂಘರ್ಷವನ್ನು ರೂಪಕವಾಗಿಸಿದವರು, ಫ್ಯೂಷನ್ (ಬೆಸುಗೆ) ಸಂಗೀತದ ಮೂಲಕ ಪೂರ್ವ ಪಶ್ಚಿಮದ ಗೋಡೆ ದಾಟಿ ಮನುಕುಲವನ್ನು ಒಂದಾಗಿಸಲು ಪ್ರಯತ್ನಿಸಿದವರು... ಹೀಗೆ ಸಂಗೀತದ ಮೂಲಕ ಸಂವಾದ ನಡೆಸಿದವರು ಸೇರಿ ಕಾರ್ಯಕ್ರಮ ನೀಡಲಿದ್ದಾರೆ.

ಅದೇ ಸಂದರ್ಭದಲ್ಲಿ ಮೇ 3ರಂದು ಮುಂಜಾನೆ ‘ಸಂಗೀತ: ಸೀಮೆಗಳು-ಉಲ್ಲಂಘನೆಗಳು’ ಕುರಿತ ರಾಷ್ಟ್ರಮಟ್ಟದ ವಿಚಾರಸಂಕಿರಣ ನಡೆಯಲಿದೆ. ಸಂಗೀತಕ್ಕೂ ಪ್ರಭುತ್ವಕ್ಕೂ ಇರುವ ಸಂಬಂಧದ ಪ್ರತಿರೋಧದ ನೆಲೆಗಳನ್ನು ಅರಸುವ ಹಾಗೂ ಸಾಮರಸ್ಯದ ನೆಲೆಗಳ ಕುರಿತು ಹಲವು ವಿದ್ವಾಂಸರು ವಿಚಾರ ಮಂಡಿಸಲಿದ್ದಾರೆ. 2014ಕ್ಕೆ ಮೊದಲ ವಿಶ್ವ ಸಮರ ಮುಗಿದು ನೂರು ತುಂಬಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.