ADVERTISEMENT

ಒಡನಾಡಿಗಳ ಸಹೃದಯ ಚಿತ್ರಣ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2017, 19:30 IST
Last Updated 15 ಡಿಸೆಂಬರ್ 2017, 19:30 IST
‘ದೀಪ್ತಶೃಂಗಗಳು’ ಪುಸ್ತಕದ ಮುಖಪುಟ
‘ದೀಪ್ತಶೃಂಗಗಳು’ ಪುಸ್ತಕದ ಮುಖಪುಟ   

‘ಇವರೇನ್ರೀ ಹೀಗೆ. ಇದು ನಮ್ಮ ಮೊದಲ ಭೇಟಿ. ಆದರೆ ಎಷ್ಟೋ ವರ್ಷಗಳ ಒಡನಾಡಿಗಳಂತೆ ಕಾಣುತ್ತಾರೆ, ಪ್ರೀತಿ ತೋರಿಸ್ತಾರೆ...’

– ಸಾಹಿತಿ ಎಸ್‌.ಆರ್‌. ರಾಮಸ್ವಾಮಿ ಅವರನ್ನು ಮೊದಲ ಬಾರಿಗೆ ಭೇಟಿಯಾದ ಅನೇಕರು ಹೇಳುವ ಮಾತು ಇದು. ವಯಸ್ಸು, ಓದು, ಜಾತಿ ಇತ್ಯಾದಿ ಬೇಲಿಗಳನ್ನು ಲೆಕ್ಕಕ್ಕೇ ಇರಿಸದೇ ಪ್ರೀತಿ ಸುರಿಸುವ ಸಹೃದಯ ಮನಸು ರಾಮಸ್ವಾಮಿ ಅವರದು. ಜನರನ್ನು ಹೀಗೆ ಹೃದಯಕ್ಕೆ ಹತ್ತಿರ ಮಾಡಿಕೊಂಡು ಕಾಣುವ ಈ ಹಿರಿಯರು ಬರೆಯುವ ವ್ಯಕ್ತಿಚಿತ್ರಣಗಳೂ ಇದೇ ಕಾರಣಕ್ಕೆ ವಿಶಿಷ್ಟ ಎನಿಸುತ್ತವೆ.

ಡಿವಿಜಿ ಅವರ ಒಡನಾಡಿಗಳೂ ಆದ ರಾಮಸ್ವಾಮಿ ಅವರು ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯನ್ನು ಕಟ್ಟಿರೂಪಿಸಲು ಶ್ರಮಿಸಿದ ಪ್ರಮುಖರು. ಕೆಲವು ವರ್ಷಗಳ ಹಿಂದೆ ಪ್ರಕಟವಾಗಿದ್ದ ‘ದೀವಟಿಗೆಗಳು’ ಮತ್ತು ‘ದೀಪ್ತಿಮಂತರು’ ಕೃತಿಗಳ ಮೂಲಕ ಒಟ್ಟು 15 ಜನರ ಬದುಕನ್ನು ಕಟ್ಟಿಕೊಡಲು ಯತ್ನಿಸಿದ್ದರು. ಇದೀಗ ಪ್ರಕಟವಾಗುತ್ತಿರುವ ‘ದೀಪ್ತಶೃಂಗಗಳು’ ಕೃತಿ ವ್ಯಕ್ತಿಚಿತ್ರಣ ಸರಣಿಯಲ್ಲಿ ಮೂರನೆಯದು.

ADVERTISEMENT

172 ಪುಟಗಳ ಈ ಕೃತಿಯಲ್ಲಿ ವಿದ್ವಾಂಸರಾದ ಎನ್‌. ರಂಗನಾಥಶರ್ಮ, ಎಸ್‌.ಕೆ. ರಾಮಚಂದ್ರರಾವ್, ಅಧ್ಯಾತ್ಮವಿದ್ಯಾ ಪ್ರಸಾರಕ ವೇದಾಂತ ಸುಬ್ಬಯ್ಯ, ಸೇವಾಸಾಮ್ರಾಜ್ಯ ನಿರ್ಮಿಸಿದ ಬೆಳಗೆರೆ ಕೃಷ್ಣಶಾಸ್ತ್ರೀ, ಸಂಗೀತಕಲಾಪ್ರವರ್ತಕ ಎಸ್‌.ವಿ. ನಾರಾಯಣಸ್ವಾಮಿರಾವ್, ಸಮಾಜ ಸೇವಕ ಟಿ.ಆರ್. ಶಾಮಣ್ಣ, ಗ್ರಂಥಾಲಯ ವಿಜ್ಞಾನ ಪಿತಾಮಹ ಎಸ್.ಆರ್. ರಂಗನಾಥನ್ ಅವರ ವ್ಯಕ್ತಿತ್ವವನ್ನು ಸ್ಮರಿಸಲಾಗಿದೆ. ಪುಸ್ತಕದ ಬೆಲೆ ₹135.

ವ್ಯಕ್ತಿತ್ವ ಕಟ್ಟಿಕೊಡುವ ಈ ಬರಹಕ್ಕೆ ಜೀವನ ಚರಿತ್ರೆಯ ಭಾರ ಇಲ್ಲ. ಸಾಧಕರ ಬದುಕು ಕಟ್ಟಿಕೊಡುವ ಪ್ರಯತ್ನದಲ್ಲಿ ಆ ಕಾಲದ ಸಮಾಜ, ವ್ಯಕ್ತಿತ್ವ ರೂಪುಗೊಳ್ಳಲು ಕಾರಣವಾದ ಅಂಶಗಳು, ಕುಟುಂಬದ ಪರಿಚಯವೂ ಇದೆ. ಇದು ಬರಹಕ್ಕೆ ಆಪ್ತತೆಯ ಸ್ಪರ್ಶ ನೀಡಿದೆ. ಇವರು ಬರೆಯುವ ವ್ಯಕ್ತಿಚಿತ್ರಣಗಳನ್ನು ಕೆಲವರು ಡಿವಿಜಿ ಅವರ ‘ಜ್ಞಾಪಕ ಚಿತ್ರಶಾಲೆ’ಗೆ ಹೋಲಿಸುತ್ತಾರೆ.⇒v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.