ADVERTISEMENT

ಕೈಮಗ್ಗ ಶ್ರೀಮಂತಿಕೆಯ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2017, 19:30 IST
Last Updated 15 ಸೆಪ್ಟೆಂಬರ್ 2017, 19:30 IST
ಕೈಮಗ್ಗ ಶ್ರೀಮಂತಿಕೆಯ ಪ್ರದರ್ಶನ
ಕೈಮಗ್ಗ ಶ್ರೀಮಂತಿಕೆಯ ಪ್ರದರ್ಶನ   

ವಸ್ತ್ರವಿನ್ಯಾಸದಲ್ಲಿ ಹೊಸತನ ಬಂದಷ್ಟೂ ಫ್ಯಾಷನ್‌ ಪ್ರಿಯ ಮನಸ್ಸುಗಳು ಹಿಗ್ಗುತ್ತವೆ. ಸಾಂಪ್ರದಾಯಿಕ, ಪಾಶ್ಚಾತ್ಯ, ಇಂಡೋ ವೆಸ್ಟರ್ನ್‌ ಯಾವುದೇ ಶೈಲಿ ಇರಲಿ ವಿಶಿಷ್ಟ ವಿನ್ಯಾಸ ಇದ್ದಷ್ಟೂ ಜನರು ಆಕರ್ಷಿತರಾಗುತ್ತಾರೆ. ಹೀಗಾಗಿಯೇ ವಸ್ತ್ರ ವಿನ್ಯಾಸಕರು ಸದಾ ಹೊಸತನ ಮೆರೆಯಲು ಹವಣಿಸುತ್ತಾರೆ. ಅದರಲ್ಲೂ ಈಗ ಕೈಮಗ್ಗಕ್ಕೆ ವಿಶೇಷ ಪ್ರಾಧಾನ್ಯತೆ ನೀಡುವ ಕಾಲ.

ಕಾಲೇಜು ದಿನಗಳಿಂದಲೇ ಸ್ನೇಹಿತೆಯರಾಗಿದ್ದ ಪದ್ಮಜಾ ಭಂಡಾರಿ, ನೀಲಾ ಎಡ್ವರ್ಡ್‌ ಹಾಗೂ ಅಂಬಿಕಾ ಪಾರ್ಚೂರ್‌ ಕೂಡ ಅದೇ ದಾರಿಯಲ್ಲಿ ನಡೆದು 'ಬೆಂಗಲ್ಯೂರ್‌' ಎನ್ನುವ ಆನ್‌ಲೈನ್‌ ಮಳಿಗೆ ಆರಂಭಿಸಿದ್ದಾರೆ. ಕೈಮಗ್ಗ, ಕರಕುಶಲ ವಿನ್ಯಾಸಗಳಿಂದ ತಯಾರಿಸಲಾದ ಸೀರೆ, ಕುರ್ತಾ, ಬ್ಯಾಗ್‌ಗಳನ್ನು ಸಂಗ್ರಹವಿದ್ದು  ಬೆಳ್ಳಿ ಹಾಗೂ ಒಂದು ಗ್ರಾಂ ಚಿನ್ನದ ವಿಶಿಷ್ಟ ವಿನ್ಯಾಸದ ಆಭರಣಗಳೂ ಇಲ್ಲಿವೆ.

‘ಭಾರತೀಯ ಸಂಸ್ಕೃತಿ ಹಾಗೂ ಕಲಾ ಶ್ರೀಮಂತಿಕೆಯನ್ನು ಪ್ರಚುರಪಡಿಸುವ ಕೈಮಗ್ಗ ಸಂಸ್ಕೃತಿಯನ್ನು ಉತ್ತೇಜಿಸುವುದು ಹಾಗೂ ಅದರ ಪ್ರಾಮುಖ್ಯತೆಯನ್ನು ಯುವಮನಸ್ಸುಗಳಿಗೆ ತಿಳಿಸುವ ಅವಶ್ಯಕತೆ ಇದೆ. ಹೀಗಾಗಿ ಕೈಮಗ್ಗ ಪರಿಕಲ್ಪನೆಯಿಂದ ಸ್ಫೂರ್ತಿ ಪಡೆದು ನಮ್ಮದೇ ಆದ ಒಂದು ಮಳಿಗೆ ಪ್ರಾರಂಭಿಸಿದ್ದೇವೆ’ ಎನ್ನುತ್ತಾರೆ ಅಂಬಿಕಾ.

ADVERTISEMENT

ನೀಲಾ ಹಾಗೂ ಪದ್ಮಜಾ ಮೊದಲಿನಿಂದಲೂ ವಸ್ತ್ರವಿನ್ಯಾಸ ಕ್ಷೇತ್ರದಲ್ಲಿಯೇ ತೊಡಗಿಸಿಕೊಂಡವರು. ಶೈಕ್ಷಣಿಕ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ಅಂಬಿಕಾ ಕೂಡ ಸ್ನೇಹಿತೆಯರೊಂದಿಗೆ ಸೇರಿ ಬಗೆಬಗೆಯ ವಿನ್ಯಾಸ ಸೃಷ್ಟಿಸುತ್ತಾರೆ. ದೇಶದ ವಿವಿಧ ಭಾಗಗಳಿಂದ ರೇಷ್ಮೆ, ಕಾಟನ್‌, ನೈಲನ್‌ ಕಾಟನ್‌ ಮುಂತಾದ ನೈಸರ್ಗಿಕ ಫ್ಯಾಬ್ರಿಕ್‌ಗಳನ್ನು ಖರೀದಿಸಿ ಅದರ ಮೇಲೆ ವಿನ್ಯಾಸ ಮಾಡಿಸುತ್ತಾರೆ. ವಿನ್ಯಾಸ ಆಯ್ಕೆ, ವರ್ಣ ಸಂಯೋಜನೆಯನ್ನು ಮಾಡುವ ಇವರು ನಗರದ ವಿವಿಧ ಕುಶಲ ಕರ್ಮಿಗಳಿಂದ ಅಂತಿಮ ಉತ್ಪನ್ನವನ್ನು ತಯಾರಿಸುತ್ತಾರೆ.

ಸೀರೆ, ಕುರ್ತಾಗಳಷ್ಟೇ ಅಲ್ಲದೆ, ಮಂಡಲಂ ರಗ್‌ಗಳು, ಕುಶನ್‌ ಕವರ್‌, ಕರ್ಟನ್‌, ಕೈಯಿಂದ ಮಾಡಿದ ಹಾಗೂ ಮೆಷಿನ್‌ನಿಂದ ಮಾಡಿದ ಬ್ಯಾಗ್‌ಗಳೂ ಬೆಂಗಲ್ಯೂರ್‌ ಸಂಗ್ರಹದಲ್ಲಿದೆ. ಮಾಹಿತಿಗೆ– bangallure.com

ಇಂದು ಪ್ರದರ್ಶನ
ಮಹಿಳೆಯರ ಸೌಂದರ್ಯಕ್ಕೆ ಸಾಥ್‌ ನೀಡುವ ವಿಶೇಷ ವಿನ್ಯಾಸಗಳಿರುವ ಬೆಂಗಲ್ಯೂರ್‌ ಇದೇ ಮೊದಲ ಬಾರಿಗೆ ತನ್ನ ವಿನ್ಯಾಸದ ಉಡುಪುಗಳ ಪ್ರದರ್ಶನವನ್ನು ನಗರದಲ್ಲಿ ಏರ್ಪಡಿಸಿದೆ. ಭಾರತೀಯ ಸಾಂಪ್ರದಾಯಿಕ ವಿನ್ಯಾಸಗಳಿಂದ ಶ್ರೀಮಂತಗೊಂಡಿರುವ ಕೋಟಾ, ಕರೂರು, ಪೈಥನಿ ಮುಂತಾದ ಸೀರೆಗಳಿವೆ. ಕುರ್ತಾ, ಸ್ಕರ್ಟ್‌, ಡಿಸೈನರ್‌ ಬ್ಲೌಸ್‌, ಆಭರಣಗಳು ದೊರೆಯಲಿವೆ.

ಆಭರಣಗಳ ಬೆಲೆ ₹200ರಿಂದ ಪ್ರಾರಂಭ. ಸೀರೆ ₹3500, ಕುರ್ತಾ ₹700, ಮನೆ ಅಲಂಕಾರಿಕ ವಸ್ತುಗಳ ಬೆಲೆ ₹250ರಿಂದ ಆರಂಭ. ಪ್ರದರ್ಶನ ನಡೆಯುವ ಸ್ಥಳ– ಬೆಂಗಲ್ಯೂರ್‌, ನೆಲಮಹಡಿ, ಶ್ರಿಯಾಭಿರಾಮಿ ಅಪಾರ್ಟ್‌ಮೆಂಟ್, ನಂ 9, ಬಸಪ್ಪ ರಸ್ತೆ, ಶಾಂತಿನಗರ. ಬೆಳಿಗ್ಗೆ 10.30ರಿಂದ ಸಂಜೆ 6.30.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.