‘ಜಾತಿಭೇದ ಇಲ್ಲ, ಜಗಳನೂ ಇಲ್ಲ, ಗಾಳಿ ಕೊಡ್ತೀರಾ, ಇಲ್ಲೇ ಹುಟ್ಟಿ ಇಲ್ಲೇ ಸಾಯ್ತೀರಾ. ಆದರೆ ನಾವು ಮನುಷ್ಯರು ನಡಿಯೋಕೆ ಕಾಲ್ ಇದೆ ಅಂತ ಹೊಯ್ತಾ ಇರ್ತಿವೀ’ ಹೀಗೆ ಪ್ರಕೃತಿ- ಮನುಷ್ಯನ ನಡುವೆ ಇರುವ ಸರಳ ಸತ್ಯಗಳನ್ನು ತನ್ನದೇ ಆದ ಭಾಷೆಯಲ್ಲಿ ಹೇಳಿಕೊಳ್ಳುತ್ತಾ ನಮ್ಮ ನಿಮ್ಮ ನಡುವೆ ಬದುಕುತ್ತಿರುವವನು ‘ಹುಲಿರಾಯ’.
‘ಹುಲಿರಾಯ’ ಸಿನಿಮಾದ ಎರಡನೇ ಟ್ರೇಲರ್ ಯುಟ್ಯೂಬ್ನಲ್ಲಿ ಬಿಡುಗಡೆಯಾಗಿದೆ. ಮೂರು ನಿಮಿಷದ ಈ ಟ್ರೇಲರ್ನಲ್ಲಿ ಇಂಥ ಮಾತುಗಳೇ ಹೆಚ್ಚಿದ್ದು ಭಾವನಾತ್ಮಕವಾಗಿ ಕಲಕುತ್ತವೆ. ಬದುಕಿನ ಮಾರ್ಮಿಕ ವಿಚಾರಗಳನ್ನು ಸರಳವಾಗಿ ಹೇಳುವ ಪರಿ ‘ಹುಲಿರಾಯ’ ಸಿನಿಮಾದ ಶಕ್ತಿ. ಹಿನ್ನೆಲೆ ನಿರೂಪಣೆಯಲ್ಲಿ ಹುಲಿರಾಯ ಯಾರು ಎಂಬ ಪರಿಚಯವಿದೆ. ಕೊನೆಗೆ ಇವನು ಯಾರೋ ಹೊರಗಿನವನಲ್ಲ ನಮ್ಮೊಳಗೆ, ನಮ್ಮ ಬದುಕಿನ ಭಾಗವೇ, ನಮ್ಮ ಕಷ್ಟಸುಖವನ್ನು ಇವನೂ ಉಂಡವನೇ ಎನಿಸುತ್ತದೆ.
ಕಾಡಿನ ನಾಡಿಯಾಗಿ ಬೆಳೆದ ಹುಲಿರಾಯ ಪಟ್ಟಣಕ್ಕೆ ಉದ್ಯೋಗ ಅರಸುತ್ತಾ ಬರುತ್ತಾನೆ. ಮನುಷ್ಯನ ದ್ವಿಮುಖ ಗುಣದ ಪರಿಚಯವಾಗುತ್ತದೆ. ನಡುವೆ ಹಸಿರಾದ ಪ್ರೇಮಕಥೆಯೊಂದಿದೆ. ಆತ ಆಕೆಯನ್ನು ಮೆಚ್ಚುವ ಪರಿ, ನಾಚಿಕೆ, ಮೋಹವೆಲ್ಲವೂ ಗಮನ ಸೆಳೆಯುತ್ತವೆ. ಕಾಡಿನ ಹುಲಿಯ ಒರಟುತನವಿಲ್ಲದೆ ಆಕೆಯನ್ನು ಜಿಂಕೆಗೆ ಹೋಲಿಸಿ ಮೋಹಿಸುವುದು ತಾಜಾ ಎನಿಸುತ್ತದೆ.
ಸಿನಿಮಾವನ್ನು ಅರವಿಂದ ಕೌಶಿಕ್ ನಿರ್ದೇಶಿಸಿದ್ದಾರೆ. ಬಾಲು ನಾಗೇಂದ್ರ, ದಿವ್ಯಾ, ಚಿರಶ್ರೀ ಅಭಿನಯಿಸಿದ್ದಾರೆ. ಸಿನಿಮಾ ಅ.6ಕ್ಕೆ ಬಿಡುಗಡೆಯಾಗಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.