ಶ್ರೀ ಶಾರದಾ ಶಂಕರ ಜ್ಯೋತಿ ಪ್ರೊಡಕ್ಷನ್ ಹೌಸ್ ಮೊಟ್ಟ ಮೊದಲ ಬಾರಿಗೆ ಜಗದ್ಗುರು ಆದಿ ಶಂಕರಾಚಾರ್ಯರ ಬದುಕು ಮತ್ತು ಸಾಧನೆ ಕುರಿತಂತೆ ಕನ್ನಡದಲ್ಲಿ ಕಿರುತೆರೆಯಲ್ಲಿ ಮೆಗಾ ಧಾರಾವಾಹಿಯನ್ನು ನಿರ್ಮಿಸುತ್ತಿದೆ.
ದಕ್ಷಿಣಾಮ್ಯಾಯ ಶೃಂಗೇರಿ ಶಾರದಾಪೀಠದ ಜಗದ್ಗುರುಗಳಾದ ಭಾರತೀತೀರ್ಥ ಸ್ವಾಮೀಜಿ ಅವರ ಆಶೀರ್ವಾದದೊಂದಿಗೆ ಇದೇ ತಿಂಗಳು ಚಿತ್ರೀಕರಣ ಪ್ರಾರಂಭಗೊಂಡಿದೆ.
ಧಾರಾವಾಹಿಯನ್ನು ಡಾ. ಬಿ.ಎನ್.ವಿ.ಸುಬ್ರಹ್ಮಣ್ಯ ಅವರು ಪ್ರಸ್ತುತ ಪಡಿಸಲಿದ್ದು, ಲಲಿತಾ ರವೀ (ಕೆ.ಎಸ್.ಎಲ್.ಸ್ವಾಮಿ) ಅವರು ನಿರ್ದೇಶಿಸಲಿದ್ದಾರೆ. ಪಂಡಿತ್ ಪ್ರವೀಣ್ ಗೋಡ್ಖಿಂಡಿ ಅವರ ಸಂಗೀತ, ಜಿ.ಎಸ್.ಭಾಸ್ಕರ್ ಅವರ ಕ್ಯಾಮೆರಾ, ಸುರೇಶ್ ಅರಸ್ ಅವರ ಸಂಕಲನ, ಪಿ.ಕೃಷ್ಣಮೂರ್ತಿ, ರಮೇಶ್ ಚಂದ್ರ ಮತ್ತು ಧನಲಕ್ಷ್ಮಿ ಅವರು ಕಲೆ ಮತ್ತು ಪ್ರಸಾದನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಲೇಖಕ ವೆಂಕಟ ಸುಬ್ಬರಾವ್ ಅವರು ಕತೆ ಮತ್ತು ಸಂಭಾಷಣೆ ಬರೆದಿದ್ದು, ರವಿ ಸುಬ್ರಹ್ಮಣ್ಯ ನಿರ್ಮಾಣದ ವಿನ್ಯಾಸ ರೂಪಿಸುತ್ತಿದ್ದಾರೆ.
ಕ್ರಿ.ಶ. 686ರ ಸುಮಾರಿನಲ್ಲಿ ಕೇರಳದ ಮಲಬಾರ್ ಪ್ರಾಂತ್ಯದ ಕಾಲಡಿ ಗ್ರಾಮದ ಬ್ರಾಹ್ಮಣರ ಕುಟುಂಬದಲ್ಲಿ ಜನಿಸಿದ ಶಂಕರಾಚಾರ್ಯರ ಸುತ್ತ ಹೆಣೆದುಕೊಂಡಿರುವ ಸ್ವಾರಸ್ಯಕರ ಕತೆಗಳಿಗೆ ಈ ಧಾರಾವಾಹಿಯಲ್ಲಿ ಜೀವ ನೀಡಲಾಗಿದೆ. ಶಂಕರರ ಬಾಲ್ಯ, ಸನ್ಯಾಸ, ಅದ್ವೈತ ಸಿದ್ಧಾಂತದ ಮೇಲೆ ರೂಪುಗೊಂಡ ವೇದಾಂತ ಸಿದ್ಧಾಂತಗಳು, ಅವರು ಮಾಡಿದ ಕಾರ್ಯಗಳ ಬಗ್ಗೆ ಬೆಳಕು ಚೆಲ್ಲಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.