ನಿರೂಪಣೆ: ಕಲಾವತಿ ಬೈಚಬಾಳ
ಪ್ರಕೃತಿ ಅಂದ್ರೆ ನಂಗೆ ಪ್ರಾಣ. ನಾನು ಎಲ್ಲಿಗೇ ಹೋದರೂ ಅಲ್ಲಿರುವ ಪ್ರಾಕೃತಿಕ ದೃಶ್ಯಗಳನ್ನು ಕುತೂಹಲದಿಂದ ಗಮನಿಸ್ತೀನಿ. ಇತರ ಕಲಾವಿದರು ಬಿಡಿಸಿದ ಚಿತ್ರಗಳನ್ನೂ ಆಸಕ್ತಿಯಿಂದ ಗಮನಿಸ್ತೀನಿ. ಅದೇ ಥರದ ಚಿತ್ರಗಳನ್ನು ನಾನೂ ಬಿಡಿಸಬೇಕು ಅಂತ ಪ್ರಯತ್ನಿಸ್ತೀನಿ. ನಾನು ಚಿಕ್ಕವಳಿದ್ದಾಗ ನಮ್ಮ ಟೀಚರ್ ಒಬ್ಬರು ಡ್ರಾಯಿಂಗ್ ಪುಸ್ತಕ ಕೊಟ್ಟು, ಚಿತ್ರ ಬಿಡಿಸಿ, ಬಣ್ಣ ತುಂಬಲು ಹೇಳ್ತಿದ್ರು. ನಾನು ಆ ಕೆಲಸವನ್ನು ಇಷ್ಟಪಟ್ಟು ಮಾಡ್ತಿದ್ದೆ. ಹಾಗೇ ಚಿತ್ರಕಲೆಯಲ್ಲಿ ಆಸಕ್ತಿ ಬೆಳೆಯಿತು.
ಪ್ರಾಣಿ, ಪಕ್ಷಿ, ಬೆಟ್ಟ, ದೇವರ ಚಿತ್ರ, ಕಾರ್ಟೂನ್ ಎಲ್ಲಾ ಬಿಡಿಸ್ತೀನಿ. ಮನೆ ಮುಂದಿನ ಹೂ ಗಿಡಗಳು, ಬಾಗಿಲ ಪರದೆ, ದಿಂಬು, ಹೊದಿಕೆ ಮೇಲೆ ಬರೆದ ಚಿತ್ರಗಳನ್ನು ನೋಡಿ ನಾನು ಅದರಂತೆ ಚಿತ್ರ ಬರೆಯೋಕೆ ಪ್ರಯತ್ನ ಪಡ್ತೀನಿ. ಮನುಷ್ಯ ದೇಹದ ಚಿತ್ರ ಬಿಡಿಸಲು ಸಾಕಷ್ಟು ಸಲ ಪ್ರಯತ್ನಿಸಿದ್ದೀನಿ. ಏನಾದ್ರೂ ಒಂದು ತಪ್ಪಾಗುತ್ತೆ. ಆದ್ರೂ ಬಿಡಲ್ಲ, ಪ್ರಯತ್ನ ಮಾಡ್ತಾನೇ ಇದ್ದೀನಿ.
ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಚಿತ್ರಕಲೆ, ಭಕ್ತಿಗೀತೆ, ಜೇಡಿಮಣ್ಣಿನ ಮಾದರಿ ರೂಪಿಸುವ ಸ್ಪರ್ಧೆಗಳಲ್ಲಿ ಹಲವು ಬಹುಮಾನಗಳನ್ನು ಗೆದ್ದಿದ್ದೀನಿ. ಹಾಡು ಹೇಳೋದು ನನಗೆ ಇಷ್ಟ. ಹಾಗಂತ ಸಂಗೀತ ಪಾಠಕ್ಕೆ ಹೋಗಿಲ್ಲ. ಮನೆಯಲ್ಲೇ ಕಲಿತಿದ್ದೀನಿ. ಈ ಸಲ ಮನೆಲೀ ನಾನು ಮಾಡಿದ ಮಣ್ಣಿನ ಗಣಪತಿ ಮೂರ್ತಿಯನ್ನೇ ಪ್ರತಿಷ್ಠಾಪಿಸಿ ಪೂಜೆ ಮಾಡಿದ್ವಿ. ಆಗಾಗ ಕಿವಿಯೋಲೆಗಳನ್ನೂ ಮಾಡ್ತೀನಿ.
ದೊಡ್ಡೋಳಾದ ಮೇಲೆ ಫ್ಯಾಷನ್ ಡಿಸೈನರ್ ಅಥವಾ ಚಿತ್ರಕಲಾವಿದೆ ಆಗಬೇಕು ಅಂತ ಆಸೆ ಇದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.