ADVERTISEMENT

ಮಕ್ಕಳ ಜ್ಞಾನ ವಿಕಾಸಕ್ಕೆ ವಾರಾಂತ್ಯ ಚಿತ್ರ ಪ್ರದರ್ಶನ

ಭರತ್ ರಾವ್ ಎಂ.
Published 30 ಜನವರಿ 2015, 19:30 IST
Last Updated 30 ಜನವರಿ 2015, 19:30 IST

ಒಂದು ಕಾಲವಿತ್ತು. ಮಕ್ಕಳಿಗಾಗಿ ಒಂದಷ್ಟು ಸಿನಿಮಾಗಳಿದ್ದವು. ಈ ಸಿನಿಮಾಗಳು ಮಕ್ಕಳಿಗೆ ಮನರಂಜನೆ ನೀಡುವುದರ ಜತೆಗೆ ಸಂದೇಶವನ್ನು ನೀಡುತ್ತಿದ್ದವು. ಆದರೆ ಈಗ ಮಕ್ಕಳನ್ನು ಚಿತ್ರಮಂದಿರಗಳಿಗೆ ಕರೆದ್ಯೊಯಲು ಎರಡು ಬಾರಿ ಯೋಚಿಸುವ ಪರಿಸ್ಥಿತಿ ಎದುರಾಗಿದೆ.

ಅತ್ಯಾಚಾರ, ಕೊಲೆ, ದರೋಡೆ.. ಹೀಗೆ ಸಮಾಜದಲ್ಲಿ ನಡೆಯುವ ಅಪರಾಧಿ ಚಟುವಟಿಕೆಗಳನ್ನು ನಡೆಸಲು ಮಕ್ಕಳಿಗೆ ಇಂದಿನ ಸಿನಿಮಾಗಳು ಪರೋಕ್ಷವಾಗಿ ಸ್ಫೂರ್ತಿಯಾಗಿವೆ. ಅದು ಅಲ್ಲದೇ, ಈಗ ಮಕ್ಕಳ ಚಿತ್ರಗಳನ್ನು ನಿರ್ಮಿಸುವವರ ಸಂಖ್ಯೆಯೂ ದಿನೇ ದಿನೇ ಇಳಿಯುತ್ತಿದೆ ಎಂದು ಹಲವು ಸಮೀಕ್ಷೆಗಳು ಹೇಳುತ್ತಿವೆ.

ಫೇಸ್‌ಬುಕ್, ಕ್ಯಾಂಡಿಕ್ರಷ್‌, ವಿಡಿಯೊ ಗೇಮ್ಸ್‌ಗಳಲ್ಲಿ ಸಮಯ ಕಳೆಯುವ ಮಕ್ಕಳ ಚಿತ್ತವನ್ನು ಬೇರೆಡೆಗೆ ಸೆಳೆಯಬೇಕು. ಇದು ಸಿನಿಮಾದ ಮೂಲಕ ಸಾಧ್ಯವಾ ಗು ತ್ತದೆ. ಮಕ್ಕಳಿಗೆ ಮತ್ತು ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಸಿನಿಮಾಗಳು ಹೆಚ್ಚೆಚ್ಚು ನಿರ್ಮಾಣವಾಗಬೇಕು ಎಂಬುದು ಸಮೀಕ್ಷೆಗಳ ಅಭಿಪ್ರಾಯ.

ಈ ನಿಟ್ಟಿನಲ್ಲಿ ಬಾಲಭವನ ಸೊಸೈಟಿ ಮತ್ತು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಸಹಯೋಗದೊಂದಿಗೆ ಜ.31ರಿಂದ ಮಕ್ಕಳಿಗಾಗಿ ಬಣ್ಣದ ಚಿಟ್ಟೆಗಳ ಹೆಸರಿನಲ್ಲಿ ವಾರಾಂತ್ಯ ಚಿತ್ರಗಳ ಪ್ರದರ್ಶನಕ್ಕೆ ಮುಂದಾಗಿದೆ.

‘ವಿವಿಧ ದೇಶಗಳ ಮತ್ತು ರಾಜ್ಯಗಳ ಅಲ್ಲಿನ ಜನಜೀವನ ಮತ್ತು ಸಂಸ್ಕೃತಿಯನ್ನು ಚಲನಚಿತ್ರಗಳ ಮೂಲಕ ಮಕ್ಕಳಿಗೆ ತೋರಿಸಬೇಕು. ಮನರಂಜನೆಯ ಜತೆಜತೆಗೆ ಮಕ್ಕಳ ಜ್ಞಾನ ಭಂಡಾರವನ್ನು ಹೆಚ್ಚಿಸಬೇಕು ಎಂಬ ಉದ್ದೇಶದೊಂದಿಗೆ ಈ ಚಿತ್ರ ಪ್ರದರ್ಶನ ಆಯೋಜಿಸಲಾಗಿದೆ. ಜ.31ರಿಂದ ಬಣ್ಣದ ಚಿಟ್ಟೆಗಳ ಹೆಸರಿನಲ್ಲಿ ವಾರಾಂತ್ಯ ಮಕ್ಕಳ ಚಿತ್ರ ಪ್ರದರ್ಶನಗೊಳ್ಳಲಿದೆ.

ಈ ವಾರಾಂತ್ಯ ಚಿತ್ರ ಪ್ರದರ್ಶನವು 15 ವಾರಗಳಿಗೆ ಆಗುವಷ್ಟು ಚಿತ್ರಗಳ ಪ್ಯಾಕೇಜ್‌ ಸಿದ್ಧವಾಗಿವೆ. ಬ್ರೆಜಿಲ್, ಚೆಕ್‌ ರಿಪಬ್ಲಿಕ್, ಅಮೆರಿಕಾ, ಚೀನಾ, ಆಸ್ಟ್ರೇ ಲಿಯಾ ಹಾಗೂ ಭಾರತ ಸೇರಿದಂತೆ ವಿವಿಧ ದೇಶಗಳ ಅನೇಕ ಭಾಷೆಗಳ ಚಿತ್ರಗಳು ಪ್ರದರ್ಶನಗೊಳ್ಳಲಿವೆ.

ಪ್ರದರ್ಶನಗೊಳ್ಳಲಿರುವ ಎಲ್ಲ ಚಿತ್ರಗಳು ಇಂಗ್ಲಿಷ್ ಸಬ್‌ ಟೈಟಲ್‌ನಲ್ಲಿ ಮೂಡಿ ಬರಲಿವೆ. ಈ ಚಿತ್ರ ಪ್ರದರ್ಶನದಲ್ಲಿ ಕನ್ನಡದ ‘ಅಲೆ’ ಸಿನಿಮಾವು ಪ್ರದರ್ಶನಗೊ ಳ್ಳ ಲಿದೆ. ಇದರ ಜತೆಗೆ ಪ್ರತಿವಾರವು ಬೇರೆ ಬೇರೆ ರೀತಿ ಚಿತ್ರಗಳು ಪ್ರದರ್ಶನಗೊಂಡು ಮಕ್ಕಳಿಗೆ ಮನರಂಜನೆ ನೀಡಲಿವೆ.

‘ಮೊದಲ ವಾರಾಂತ್ಯದಲ್ಲಿ ಮಕ್ಕಳಿಗೆ ತೋರಿಸಲು ಈಗಾಗಲೇ ವಿವಿಧ ಭಾಷೆಗಳ 15 ಚಿತ್ರಗಳನ್ನು ಸಂಗ್ರಹಿಸಲಾಗಿದೆ. ಶನಿವಾರ ತೋರಿಸುವ ಚಿತ್ರಗಳನ್ನೇ ಭಾನುವಾರ ಮತ್ತೊಮ್ಮೆ ಪ್ರದರ್ಶಿಸಲಾಗುವುದು. ಏಕೆಂದರೆ ಎಲ್ಲ ಮಕ್ಕಳನ್ನು ತಲುಪುವ ಉದ್ದೇಶದೊಂದಿಗೆ ಈ ರೀತಿ ಮಾಡಲಾಗಿದೆ’ ಎಂದು ಬಾಲಭವನದ ಅಧ್ಯಕ್ಷೆ ಭಾವನಾ ವಿವರಿಸಿದರು.

‘ಚಿತ್ರರಂಗದಲ್ಲಿ ಗ್ರಹಣ ಬಡಿದಂತಿದೆ. ಮಕ್ಕಳ ಚಿತ್ರ ನಿರ್ಮಿಸುವವರ ಸಂಖ್ಯೆ ಇತ್ತೀಚೆಗೆ ಕಡಿಮೆ ಆಗುತ್ತಿದೆ. ಮಕ್ಕಳಿಗೆ ಶಿಸ್ತು, ಸಾಹಸ, ವಿಭಿನ್ನ ಸಂಸ್ಕೃತಿಗಳ ಪರಿಚಯಿಸುವುದರಿಂದ ಅವರಲ್ಲಿ ಜ್ಞಾನ ವಿಕಾಸಕ್ಕೆ ದಾರಿ ಮಾಡಿಕೊಡಲಿದೆ. ನಿರಂತರವಾಗಿ ವಾರಾಂತ್ಯ ಚಲನಚಿತ್ರಗಳ ಪ್ರದರ್ಶನವಾಗಬೇಕು’ ಎಂದು ಅಕಾಡೆಮಿ ಅಧ್ಯಕ್ಷ ರಾಜೇಂದ್ರ ಸಿಂಗ್ ಬಾಬು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.