ADVERTISEMENT

‘ಮಳೆಕಾಡಿ’ನ ಕಲಾವಿದ

ಮಂಜುಶ್ರೀ ಎಂ.ಕಡಕೋಳ
Published 26 ಆಗಸ್ಟ್ 2016, 19:30 IST
Last Updated 26 ಆಗಸ್ಟ್ 2016, 19:30 IST
‘ಹೋಮೇಜ್‌ ಟು ದಿ ರೇನ್‌ ಫಾರೆಸ್ಟ್’ ಚಿತ್ರ ಪ್ರದರ್ಶನ: ಸ್ಥಳ: ಗ್ಯಾಲರಿ ಸುಮುಖ, ಬಿಟಿಎಸ್ ಡಿಪೊ ರಸ್ತೆ, ವಿಲ್ಸನ್‌ ಗಾರ್ಡನ್. ಶನಿವಾರ ಬೆಳಿಗ್ಗೆ 10.30ರಿಂದ ಸಂಜೆ 6.30ರ ತನಕ.
‘ಹೋಮೇಜ್‌ ಟು ದಿ ರೇನ್‌ ಫಾರೆಸ್ಟ್’ ಚಿತ್ರ ಪ್ರದರ್ಶನ: ಸ್ಥಳ: ಗ್ಯಾಲರಿ ಸುಮುಖ, ಬಿಟಿಎಸ್ ಡಿಪೊ ರಸ್ತೆ, ವಿಲ್ಸನ್‌ ಗಾರ್ಡನ್. ಶನಿವಾರ ಬೆಳಿಗ್ಗೆ 10.30ರಿಂದ ಸಂಜೆ 6.30ರ ತನಕ.   

* ನಿಮ್ಮದು ಮೂಲತಃ ರಾಜಕೀಯ ಕುಟುಂಬ. ಚಿತ್ರಕಲೆಯೊಂದಿಗೆ ನಿಮ್ಮ ನಂಟು ಬೆಳೆದಿದ್ದು ಹೇಗೆ?
ಹೌದು. ನಮ್ಮದು ರಾಜಕೀಯ ಕುಟುಂಬ. ಆದರೆ, ಏಳು ವರ್ಷದವನಿದ್ದಾಗಲೇ ನಾನು ಚಿತ್ರ ರಚಿಸಲು ಆರಂಭಿಸಿದ್ದೆ. ಶಾಲೆಯಲ್ಲಿ ನನ್ನ ಚಿತ್ರಕಲೆಯ ಆಸಕ್ತಿ ಅನಾವರಣವಾಯಿತು.

ಲಾಶಿಕ್ಷಕಿ ಪ್ರಾಣಿ–ಪಕ್ಷಿಗಳ ಚಿತ್ರ ರಚಿಸಲು ಪ್ರೋತ್ಸಾಹಿಸುತ್ತಿದ್ದರು. ಅಲ್ಲಿಂದ ನನ್ನ ಚಿತ್ರಕಲೆಯ ನಂಟು ಶುರುವಾಯಿತು. ನನ್ನ ಆಸಕ್ತಿಗೆ ತಂದೆ–ತಾಯಿ ಕೂಡಾ ಪ್ರೋತ್ಸಾಹಿಸಿದರು. ಅವರಿಗೆ ನಾನು ರಾಜಕೀಯಕ್ಕಿಳಿಯುವುದು ಇಷ್ಟವಿರಲಿಲ್ಲ. ನನ್ನ ಮನದಿಂಗಿತವೂ ಅದೇ ಆಗಿದ್ದರಿಂದ ಚಿತ್ರಕಲೆಯತ್ತ ಆಸಕ್ತಿ ತಳೆದೆ.

* ಅಮೆರಿಕದ ಯೇಲ್ ವಿಶ್ವವಿದ್ಯಾಲಯದ ಕಲಾ ಪದವೀಧರ  ನೀವು. ಅಲ್ಲಿನ ಅನುಭವ ಹೇಗಿತ್ತು?
ಯೇಲ್ ವಿಶ್ವವಿದ್ಯಾಲಯ ನನ್ನ ಜೀವನದಲ್ಲಿ ಹಲವು ಮರೆಯಲಾರದ ಅನುಭವಗಳನ್ನು ಕೊಟ್ಟಂಥ ಸ್ಥಳ. ಚಿತ್ರಕಲೆ ಬಗ್ಗೆ ಸಾಂಪ್ರದಾಯಿಕ ಶಿಕ್ಷಣವನ್ನು ನೀಡಿದ್ದೇ ಯೇಲ್ ವಿ.ವಿ, ಅಲ್ಲಿ ಕಲೆಯ ಇತಿಹಾಸವನ್ನು ಅರಿತೆ.

ಅಷ್ಟೇ ಅಲ್ಲ ಮೊದಲ ಬಾರಿಗೆ ಅನೇಕ ಚಿತ್ರಕಲಾವಿದರೊಂದಿಗೆ ಬೆರೆಯುವ, ಕಲಿಯುವ ಅವಕಾಶವೂ ದೊರೆಯಿತು. ವೃತ್ತಿಪರ ಚಿತ್ರಕಲಾವಿದನಾಗಿ ಬೆಳೆಯಲು ವಿ.ವಿ. ನನಗೆ ಸಹಾಯ ಮಾಡಿದೆ.

* ನಿಮ್ಮ ಪೇಂಟಿಂಗ್‌ಗೆ ಮುಖ್ಯ ಉದ್ದೇಶವೇನು?
ಕಲೆಯ ಮೂಲಕ ಸಮುದಾಯದೊಂದಿಗೆ ಸಂವಹನ ಮಾಡುವುದೇ ನನ್ನ ಪೇಂಟಿಂಗ್‌ನ ಮುಖ್ಯ ಉದ್ದೇಶ.

* ‘ರೇನ್ ಫಾರೆಸ್ಟ್‌’ ಚಿತ್ರಕಲಾ ಸರಣಿಯ ಹಿಂದಿನ ಸ್ಫೂರ್ತಿ, ವಿಶೇಷತೆ ಏನು?
ಪ್ರಪಂಚದ ಅಳಿವಿನ ಅಂಚಿನಲ್ಲಿರುವ ಮಳೆಕಾಡುಗಳ ಸಂರಕ್ಷಣೆಯೇ ‘ರೇನ್ ಫಾರೆಸ್ಟ್‌’ ಚಿತ್ರಸರಣಿ ಹಿಂದಿರುವ ಮುಖ್ಯ ಉದ್ದೇಶ. ಮಳೆಕಾಡಿನ ಮೋಹಕ ಸೌಂದರ್ಯವೇ ಇದಕ್ಕೆ ಸ್ಫೂರ್ತಿ. ಪ್ರಾಣಿಗಳು, ಬಗೆಬಗೆಯ ಹೂಗಳ ಚಿತ್ರಣ ಈ ಪೇಂಟಿಂಗ್‌ನ ವಿಶೇಷತೆ.

* ‘ರೇನ್‌ ಫಾರೆಸ್ಟ್‌’ ಚಿತ್ರಗಳ ಮೂಲಕ ಏನನ್ನು ಹೇಳಲು ಬಯಸಿರುವಿರಿ?
20 ವರ್ಷಗಳ ಹಿಂದೆ ನನ್ನ ಸಂಬಂಧಿಕರೊಬ್ಬರ ಜತೆ ಲಂಕಾದ ಮಳೆಕಾಡುಗಳಿಗೆ ಭೇಟಿ ಕೊಟ್ಟಾಗ ನನಗೆ ಪರಿಸರ ಸಂರಕ್ಷಣೆಯ ಮಹತ್ವದ ಅರಿವಾಯಿತು.
ಬ್ರಿಟಿಷ್ ವಸಾಹತುಷಾಹಿ ಕಾಲದಲ್ಲಿ ಟೀ ಎಸ್ಟೇಟ್‌ಗಳಿಗಾಗಿ ಲಂಕಾದ ಶೇ 70ರಷ್ಟು ಮಳೆಕಾಡುಗಳನ್ನು ನಾಶ ಮಾಡಲಾಯಿತು.

ಎಸ್ಟೇಟ್‌ಗಳ  ಎತ್ತರದ ಸ್ಥಳದಲ್ಲಿ ಮಾತ್ರ ತುಸು ಕಾಡುಗಳನ್ನು ಉಳಿಸಲಾಯಿತು ಅದೂ ಮಳೆಗಾಗಿ! ಆದರೆ, ಇಂದು ಅಲ್ಲಿ ಮಳೆಯೂ ಇಲ್ಲ, ಕಾಡೂ ಇಲ್ಲ. ಇದು ನನ್ನನ್ನು ಬಹುವಾಗಿ ಕಾಡಿತು. ಅದರ ಪರಿಣಾಮವೇ ಮಳೆಕಾಡಿನ ಚಿತ್ರಸರಣಿ.

ಶ್ರೀಲಂಕಾದ ಮಳೆಕಾಡಿನ ಸಂತಸದ ಚಿತ್ರಣಗಳನ್ನು ನನ್ನ ಚಿತ್ರಕಲೆಯಲ್ಲಿ ಹಿಡಿದಿಡಲು ಯತ್ನಿಸಿದ್ದೇನೆ. ಈ ಮೂಲಕ  ಜನರಲ್ಲಿ ಮಳೆಕಾಡಿನ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶ ನನ್ನದು.

* ಹೊಸ ಕಲಾವಿದರಿಗೆ ನಿಮ್ಮ ಕಿವಿಮಾತೇನು?
‘ಯಾವುದನ್ನೇ ಆಗಲಿ ಪ್ರಯೋಗ ಮಾಡುವ ಮೊದಲು ಮೂಲಶೈಲಿ ಮತ್ತು ಮಾಧ್ಯಮಗಳನ್ನು ಕಲಿಯಿರಿ. ನೀವು ಏನು ಮಾಡುತ್ತಿರುವಿರೋ ಅದರಲ್ಲಿ ನಿಮಗೆ ನಂಬಿಕೆ ಇರಲಿ’ ಇದುವೇ ಹೊಸ ಕಲಾವಿದರಿಗೆ ನನ್ನ ಕಿವಿಮಾತು.

**
‘ಹೋಮೇಜ್‌ ಟು ದಿ ರೇನ್‌ ಫಾರೆಸ್ಟ್’ ಚಿತ್ರ ಪ್ರದರ್ಶನ
ಸ್ಥಳ: ಗ್ಯಾಲರಿ ಸುಮುಖ, ಬಿಟಿಎಸ್ ಡಿಪೊ ರಸ್ತೆ, ವಿಲ್ಸನ್‌ ಗಾರ್ಡನ್. ಶನಿವಾರ ಬೆಳಿಗ್ಗೆ 10.30ರಿಂದ ಸಂಜೆ 6.30ರ ತನಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.