ADVERTISEMENT

ರವಿ ಕೈಲಿ ಇಂದ್ರಜಿತ್‌ ಸ್ಟೆಥಾಸ್ಕೋಪ್

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2014, 19:30 IST
Last Updated 28 ಸೆಪ್ಟೆಂಬರ್ 2014, 19:30 IST

ಪತ್ರಕರ್ತ, ಸಿನಿಮಾ ನಿರ್ದೇಶಕ, ನಟ ಹೀಗೆ ಹಲವು ವಿಭಾಗಗಳಲ್ಲಿ ಕೈಯಾಡಿಸಿರುವ ಇಂದ್ರಜಿತ್ ಲಂಕೇಶ್ ತಮ್ಮ ಹುಟ್ಟುಹಬ್ಬ ಹಾಗೂ ಹೊಸ ಸಿನಿಮಾದ ಘೋಷಣೆ ನೆಪದಲ್ಲಿ ಮಾಧ್ಯಮದೆದುರು ಹಾಜರಾಗಿದ್ದರು. ಅಲ್ಲದೇ ಹುಟ್ಟುಹಬ್ಬದ ಪ್ರಯುಕ್ತ ಮೈಸೂರು ಮೃಗಾಲಯದಲ್ಲಿನ ನವಿಲೊಂದನ್ನು ದತ್ತು ಪಡೆದ ಖುಷಿಯೂ ಅವರ ಸಂಭ್ರಮಕ್ಕೆ ಕಾರಣವಾಗಿತ್ತು.

45ನೇ ವಸಂತಕ್ಕೆ ಕಾಲಿಟ್ಟ ಇಂದ್ರಜಿತ್ ನವಿಲಿನಾಕೃತಿಯ ಕೇಕ್ ಕತ್ತರಿಸಿ, ತಮ್ಮ ಹೊಸ ಚಿತ್ರದ ಕುರಿತು ಮಾಹಿತಿ ನೀಡಿದರು. ಸದ್ಯ ಗೆಲ್ಲುವ ಕುದುರೆಗಳಾದ ಯಶ್, ದಿಗಂತ್ ಅವರ ಜೊತೆ ಇಂದ್ರಜಿತ್‌ ಹೊಸ ಚಿತ್ರ ಮಾಡಲಿದ್ದಾರೆ ಎಂಬ ಊಹಾಪೋಹಗಳು ಚಾಲ್ತಿಯಲ್ಲಿದ್ದವು. ಆದರೆ ಮಾಧ್ಯಮಗಳೆದುರು ಅವರು ಇಂತಹ ಊಹಾಪೋಹಕ್ಕೆ ತೆರೆ ಎಳೆದರು.

‘ಯಶ್, ದಿಗಂತ್ ಜೊತೆ ಚಿತ್ರ ಮಾಡುವುದು ದಿಟವಾದರೂ ತಕ್ಷಣಕ್ಕೆ ಅವರು ತುಂಬಾ ಬ್ಯೂಸಿ ಆಗಿದ್ದಾರೆ. ಹೀಗಾಗಿ ಅವರೊಟ್ಟಿಗೆ ಸಿನಿಮಾ ಮಾಡುವುದು ಮುಂದಿನ ವರ್ಷ ಕೈಗೂಡಬಹುದು’ ಎಂದ ಅವರು, ಈಗ ಕ್ರೇಜಿಸ್ಟಾರ್ ವಿ.ರವಿಚಂದ್ರನ್ ಅವರೊಂದಿಗೆ ಹೊಸ ಚಿತ್ರಕ್ಕೆ ಮುಂದಾಗಿದ್ದಾರೆ. ರವಿಚಂದ್ರನ್‌ಗೆ ಜೊತೆಯಾಗಿ ಖ್ಯಾತ ನಟಿ ಭೂಮಿಕಾ ಚಾವ್ಲಾ ಆಯ್ಕೆಯಾಗಿದ್ದಾರೆ. ಅಲ್ಲದೇ ಹೊಸದೊಂದು ಜೋಡಿಯನ್ನು ತೆರೆ ಮೇಲೆ ಪರಿಚಯಿಸುವ ಪ್ಲಾನ್ ಮಾಡಿದ್ದಾರೆ ಇಂದ್ರಜಿತ್. ಅದಕ್ಕಾಗಿ ಹುಡುಕಾಟ ನಡೆಸಿದ್ದಾರೆ.

‘ದೇವ್ ಸನ್ ಆಫ್ ಮುದ್ದೇಗೌಡ’ ನಂತರ ಇಂದ್ರಜಿತ್ ಮತ್ತೆ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ಚಿತ್ರಕ್ಕಿನ್ನೂ ಹೆಸರು ಫೈನಲ್ ಆಗಿಲ್ಲ. ತಮ್ಮದೇ ವಿಭಿನ್ನ ಚಿತ್ರಭಾಷೆ ರೂಢಿಸಿಕೊಂಡಿರುವ ರವಿಚಂದ್ರನ್ ಹಾಗೂ ಇಂದ್ರಜಿತ್ ಕಾಂಬಿನೇಷನ್ನಿನಲ್ಲಿ ಬರುತ್ತಿರುವ ಚಿತ್ರ ಕುತೂಹಲ ಹುಟ್ಟುಹಾಕಿದೆ. ಕ್ರೇಜಿಸ್ಟಾರ್ ಇದೇ ಮೊದಲಬಾರಿ ಡಾಕ್ಟರ್ ಆಗಿ ಕಾಣಿಸಿಕೊಳ್ಳುತ್ತಿರುವುದು ಚಿತ್ರದ ವಿಶೇಷ. ಅಷ್ಟಲ್ಲದೇ ಚಿತ್ರಕ್ಕೆ ಹಣ ಹರಿದುಬರುತ್ತಿರುವುದು ಅಮೆರಿಕದಿಂದ. ಅಂದರೆ ಚಿತ್ರ ಅದ್ದೂರಿಯಾಗಿರುವುದರಲ್ಲಿ ಅನುಮಾನವೇ ಇಲ್ಲ.

ಜೆಸ್ಸಿ ಗಿಫ್ಟ್ ಸಂಗೀತ, ಸಂತೋಷ್ ರೈ ಪಾತಾಜೆ ಛಾಯಾಗ್ರಹಣವಿರುವ ಈ ಚಿತ್ರದ ಹೆಚ್ಚಿನ ವಿವರಗಳಿಗಾಗಿ ಅಭಿಮಾನಿಗಳು ಇನ್ನು ಹದಿನೈದು ದಿವಸ ಕಾಯಬೇಕು. ಸಂಭ್ರಮದ ಸಮಾರಂಭದಲ್ಲಿ ಇಂದ್ರಜಿತ್ ಪತ್ನಿ ಅರ್ಪಿತಾ, ಮಕ್ಕಳಾದ ಸಮರ್‌ಜಿತ್ ಹಾಗೂ ಸಮಯ್‌ಜಿತ್ ಮತ್ತು ಇಂದ್ರಜಿತ್ ತಾಯಿ ಇಂದಿರಾ ಲಂಕೇಶ್ ಹಾಜರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.