‘ಸರ್ವಸ್ವ’ ಚಿತ್ರದ ಮೂಲಕ ಸಿನಿಮಾ ಲೋಕದ ಅನುಭವಗಳನ್ನು ಹೇಳಲು ಸಿದ್ಧರಾಗುತ್ತಿದ್ದಾರೆ ನಿರ್ದೇಶಕ ಶ್ರೇಯಸ್ ಕಬಾಡಿ. ಈ ಚಿತ್ರಡ ಹಾಡುಗಳ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನಲ್ಲಿ ಈಚೆಗೆ ನಡೆಯಿತು. ಶ್ರೀಧರ್ ವಿ. ಸಂಭ್ರಮ್ ಅವರು ಇದಕ್ಕೆ ಸಂಗೀತ ನೀಡಿದ್ದಾರೆ.
‘ಚಿತ್ರೀಕರಣ ಪೂರ್ಣಗೊಂಡಿದೆ. ಇದು ಇಡೀ ಕುಟುಂಬಕ್ಕೆ ಮನರಂಜನೆ ನೀಡುವ ಚಿತ್ರ. ಇದರಲ್ಲಿ ನಾಲ್ಕು ಹಾಡುಗಳು ಇವೆ’ ಎಂದರು ನಟ ತಿಲಕ್. ಈ ಸಿನಿಮಾದಲ್ಲಿ ತಿಲಕ್ ಅವರದ್ದು ಸಿನಿಮಾ ನಿರ್ದೇಶಕನ ಪಾತ್ರವಂತೆ.
‘ಈ ಸಿನಿಮಾದಲ್ಲಿ ನಾಲ್ಕು ಪ್ರಮುಖ ಪಾತ್ರಗಳು ಇವೆ. ಅವುಗಳಲ್ಲಿ ಒಬ್ಬಳದ್ದು ಕುರುಡಿಯ ಪಾತ್ರ. ನಾಲ್ಕೂ ಪಾತ್ರಗಳಿಗೆ ಸಿನಿಮಾ ಕ್ಷೇತ್ರ ಪ್ರವೇಶಿಸುವ ಆಸೆ ಇರುತ್ತದೆ. ಇದು ಈ ಸಿನಿಮಾದ ಕಥಾಹಂದರ. ಸಿನಿಮಾ ವೀಕ್ಷಿಸಿದ ನಂತರ, ಜೀವನದ ಸರ್ವಸ್ವ ಏನು ಎಂಬ ಪ್ರಶ್ನೆ ವೀಕ್ಷಕರಲ್ಲಿ ಮೂಡುತ್ತದೆ’ ಎಂದರು ಶ್ರೇಯಸ್. ಇವರು ಎಂಜಿನಿಯರಿಂಗ್ನಲ್ಲಿ ಪದವಿ ಪಡೆದಿದ್ದಾರಂತೆ.
‘ನಾನು ಸಿನಿಮಾ ಕ್ಷೇತ್ರದಲ್ಲಿ ಎದುರಿಸಿದ ಸಮಸ್ಯೆಗಳನ್ನು ತಿಲಕ್ ಅವರ ಪಾತ್ರದ ಮೂಲಕ ಹೇಳುತ್ತಿದ್ದೇನೆ’ ಎಂದೂ ಶ್ರೇಯಸ್ ಹೇಳಿಕೊಂಡಿದ್ದಾರೆ.
ನಟಿ ಮೇಘನಾ ಅಪ್ಪಯ್ಯ ಅವರು ಈ ಸಿನಿಮಾ ಮೂಲಕ ‘ಸಾತ್ವಿಕಾ ಅಪ್ಪಯ್ಯ’ ಎಂದು ಹೆಸರು ಬದಲಿಸಿಕೊಳ್ಳುತ್ತಿದ್ದಾರೆ. ಪತ್ರಿಕಾಗೋಷ್ಠಿಯಲ್ಲೂ ಸಾತ್ವಿಕಾ ಕೂಡ ಇದ್ದರು. ‘ಈ ಸಿನಿಮಾಕ್ಕಾಗಿ ನಾನು ಎದ್ದೂ–ಬಿದ್ದೂ ಸ್ಕೇಟಿಂಗ್ ಕಲಿತಿದ್ದೇನೆ. ಪ್ರಬುದ್ಧವಾದ ಒಂದು ಆಯಾಮ ಕೂಡ ನನ್ನ ಪಾತ್ರಕ್ಕೆ ಇದೆ’ ಎಂದು ಅವರು ಹೇಳಿದರು. ಈ ಸಿನಿಮಾ ಅಕ್ಟೋಬರ್ನಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.
‘ಸರ್ವಸ್ವ’ ಚಿತ್ರದಲ್ಲಿ ಸಂಗೀತಕ್ಕೆ ಪ್ರಧಾನ ಸ್ಥಾನ ಇದೆಯಂತೆ. ಕರಾವಳಿಯ ಸುಂದರ ದೃಶ್ಯಗಳನ್ನು ತೋರಿಸುವ ಪ್ರಯತ್ನ ಕೂಡ ಇದರಲ್ಲಿ ಇದೆಯಂತೆ. ಈ ಸಿನಿಮಾಕ್ಕೆ ಛಾಯಾಗ್ರಹಣ ಮಾಡಿದವರು ಭೂಪಿಂದರ್ಪಾಲ್ ಸಿಂಗ್ ರೈನಾ. ವಿಮಲ್ ಮತ್ತು ವಾಮ್ದೇವ್ ಅವರು ಇದರ ನಿರ್ಮಾಪಕರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.