ಮನೆ ಮುಂದೆ ಬಂದ ಕೋಲೆ ಬಸವ, ಕಟಾವಿನ ಕಾರ್ಯದಲ್ಲಿ ತೊಡಗಿರುವ ರೈತರು, ಇತಿಹಾಸ ಪ್ರಸಿದ್ಧ ದೇವಸ್ಥಾನಗಳು ರಂಗೋಲಿ ಮೆಟ್ರೊ ಆರ್ಟ್ ಗ್ಯಾಲರಿಗೆ ಬಂದಿದ್ದವು!
ಅದು ಹೇಗೆ ಅಂದುಕೊಂಡ್ರಾ? ಇವು ಚಿಂಚಣಿ ಮೂಲದ ಕಲಾವಿದ ಸುನಿಲ್ ವಿ. ಮಠದ್ ಅವರ ಕಲಾಕೃತಿಗಳು. ಕಲಾಕೃತಿಗಳ ಪ್ರದರ್ಶನ ಏ.22ರವರೆಗೆ ನಡೆಯಲಿದೆ. ಮಠದ್ ಅವರು ಗ್ರಾಮ ಜೀವನದ ಗಾಢ ಮೋಹಿ. ಅವರು ಆಡುವ ಮಾತುಗಳೇ ಇದಕ್ಕೆ ಸಾಕ್ಷಿ.
‘ಭಾರತೀಯ ಸಂಸ್ಕೃತಿ, ಹಳ್ಳಿ ಸೊಬಗು ನನ್ನನ್ನು ಯಾವಾಗಲೂ ಕಾಡುವ ಅಂಶಗಳು. ಚಿಕ್ಕಂದಿನಿಂದಲೂ ಹಳ್ಳಿಯಲ್ಲೇ ಇರುವುದರಿಂದ, ಅಲ್ಲಿನ ರೈತಾಪಿ ಜನ, ಕೂಲಿಕಾರ್ಮಿಕರು, ಅಲ್ಲಿನ ಪರಿಸರ, ಸೂರ್ಯನ ಬೆಳಕು, ರಂಗೋಳಿ ಹಾಕುವುದು, ಹುಡುಗರು ಗಾಲಿ ಆಡುವ ಸಂಗತಿಗಳು ನನ್ನನ್ನು ಬಹುವಾಗಿ ಆವರಿಸಿವೆ. ಆದ್ದರಿಂದ ಇವೇ ನನ್ನ ಕಲಾಕೃತಿಗಳ ಮೂಲ ವಿಷಯ ವಸ್ತು. ಜತೆಗೆ ಐತಿಹಾಸಿಕ ಸ್ಥಳಗಳು, ಹಂಪಿ, ಬಾದಾಮಿಯ ದೇವಸ್ಥಾನಗಳು ಇವುಗಳನ್ನು ನನ್ನ ಕಲಾಕೃತಿಗಳಲ್ಲಿ ನೋಡಬಹುದು. ನನ್ನ ಕಲಾಕೃತಿಗಳ ಜೀವಂತಿಕೆ ಇರುವುದು ಹಳ್ಳಿ ಸೊಬಗಿನಲ್ಲಿ ಎಂದು ನನ್ನ ನಂಬುಗೆ.
‘ಚುನಾವಣೆಗಳು ನಡೆಯುವ ಸಂದರ್ಭದಲ್ಲಿ ಫ್ಲೆಕ್ಸ್ಗಳನ್ನು ಮಾಡುವುದು ಸಾಮಾನ್ಯ. ಈಗೆಲ್ಲಾ ಕಂಪ್ಯೂಟರ್ ಬಂದಿದೆ. ಆದರೆ, ಆಗ ಚಿತ್ರ ಬಿಡಿಸಬೇಕಾಗುತ್ತಿತ್ತು. ನಾನು ಸಣ್ಣವನಿದ್ದಾಗ, ಈ ಕೆಲಸ ಮಾಡುತ್ತಿದ್ದೆ. ಚಿತ್ರಕಲೆಯ ಬಗ್ಗೆ ಆಸಕ್ತಿಗೂ ಇದ್ದಿದ್ದರಿಂದ ಈ ಕೆಲಸಗಳಲ್ಲಿ ನನ್ನನ್ನು ತೊಡಗಿಸಿಕೊಳ್ಳುತ್ತಿದ್ದೆ. ನನ್ನ ಕಲಾ ಜೀವನ ಆರಂಭವಾಗಿದ್ದು ಹಾಗೆ. ನಾನು ತೈಲವರ್ಣ, ಅಕ್ರೆಲಿಕ್, ಜಲವರ್ಣಗಳಲ್ಲಿ ಚಿತ್ರ ಬಿಡಿಸುತ್ತೇನೆ. ಮುಂದಿನ ದಿನಗಳಲ್ಲಿ ಬೇರೆ ವಿಷಯ ವಸ್ತುಗಳನ್ನು ಇಟ್ಟುಕೊಂಡು ಚಿತ್ರ ಬಿಡಿಸಬೇಕೆಂದಿದ್ದೇನೆ’ ಎನ್ನುತ್ತಾರೆ ಮಠದ್.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.