ADVERTISEMENT

ಹಾಡ ಕೇಳ ಹೋಗಿ...

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2014, 19:30 IST
Last Updated 21 ನವೆಂಬರ್ 2014, 19:30 IST

ಹಾಡುಗಳ ಸಿ.ಡಿ.ಯನ್ನು ಬಿಡುಗಡೆ ಮಾಡಲು ಹಿರಿಯ ನಿರ್ದೇಶಕ ಟಿ.ಎಸ್‌. ನಾಗಾಭರಣ ಅವರು ಡಬ್ಬಿ ತೆರೆದಾಗ ಅದರಲ್ಲಿ ಕಂಡಿದ್ದು ಮಿರ್ಚಿ! ಅದರ ಜತೆಗೇ ಸಿ.ಡಿ ಕೂಡ ಇದ್ದವು. ಮಿರ್ಚಿ ಮೆಲ್ಲುತ್ತಲೇ ಸಿ.ಡಿ ಹಿಡಿದುಕೊಂಡು ಎಲ್ಲರೂ ಫೋಟೋಗೆ ಪೋಸ್ ನೀಡಿದರು.
ಸಿನಿಮಾದ ಹೆಸರೇ ‘ಮಿರ್ಚಿ ಮಂಡಕ್ಕಿ ಕಡಕ್‌ಚಾಯ್’. ಹಾಡುಗಳ ಸಿ.ಡಿ ಬಿಡುಗಡೆ ಸಮಾರಂಭಕ್ಕೆ ಬಂದವರು ಈ ಮೂರನ್ನೂ ಸವಿಯುವ ಅವಕಾಶ ಕಲ್ಪಿಸಲಾಗಿತ್ತು.

ಮೂರು ಚಿತ್ರಗಳಿಗೆ ಸಹ ನಿರ್ದೇಶಕಿಯಾಗಿ ಅನುಭವ ಪಡೆದುಕೊಂಡ ಸಂಜೋತಾ, ಬಹು ಮಹತ್ವಾಕಾಂಕ್ಷೆಯಿಂದ ಈ ಚಿತ್ರ ಮಾಡಿದ್ದಾರೆ. ಎಂಜಿನಿಯರಿಂಗ್ ಪದವಿ ಪಡೆದು, ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲವು ವರ್ಷ ಕೆಲಸ ಮಾಡಿ, ಅದನ್ನು ತೊರೆದು ಚಿತ್ರರಂಗಕ್ಕೆ ಬಂದವರು ಸಂಜೋತಾ. ‘ಸಿನಿಮಾ ನಿರ್ದೇಶನ ನನ್ನ ಕನಸು. ಹೊಸ ಪ್ರತಿಭೆಗಳನ್ನು ಹಾಕಿಕೊಂಡು ಮಿರ್ಚಿ ಮಂಡಕ್ಕಿ ಚಿತ್ರ ಮಾಡಿದ್ದೇನೆ’ ಎಂದರು. ಮಹಿಳೆಯರು ನಿರ್ದೇಶನ ಕ್ಷೇತ್ರಕ್ಕೆ ಬಂದರೆ ಹೇಗೆ ಇರುತ್ತದೋ ಎಂಬ ಅಳುಕಿನಿಂದಲೇ ಬಣ್ಣದ ಲೋಕಕ್ಕೆ ಬಂದಿದ್ದ ಅವರಿಗೆ ಮಹೇಶ ರಾವ್, ಶಶಾಂಕ್ ಹಾಗೂ ಪ್ರಶಾಂತ್ ಅವರ ಬಳಿ ಸಿಕ್ಕ ತರಬೇತಿ ಆತ್ಮವಿಶ್ವಾಸ ಹೆಚ್ಚಿಸಿತು. ಅದರ ಮುಂದಿನ ಹೆಜ್ಜೆಯೇ ‘ಮಿರ್ಚಿ... ಮಂಡಕ್ಕಿ’ ತಯಾರಿ.

‘ಯೂಟ್ಯೂಬ್‌’ನಲ್ಲಿ ಹಾಡುಗಳು ಹೆಚ್ಚು ಜನಪ್ರಿಯತೆ ಪಡೆದಿರುವ ಸಂತಸ ಹಂಚಿಕೊಂಡಿದ್ದು, ಸಂಗೀತ ನಿರ್ದೇಶಕ ಹರಿಕಾವ್ಯ. ಕರ್ನಾಟಕ ಸಂಗೀತ ಕಲಿತಿರುವ ಅವರಿಗೆ ಮೊದಲ ಬಾರಿಗೆ ಸಂಗೀತದ ಮಾಧುರ್ಯವನ್ನು ಈ ಚಿತ್ರದಲ್ಲಿ ಅಳವಡಿಸುವ ತವಕ. ನಾಲ್ಕು ಹಾಡುಗಳಿಗೆ ಅವರು ಸಂಗೀತ ಹೊಸೆದಿದ್ದಾರೆ. ಶಿಷ್ಯೆಯ ಸಾಧನೆಯನ್ನು ಮೆಚ್ಚಿ, ಅಭಿನಂದಿಸಿದ ನಿರ್ದೇಶಕ ಶಶಾಂಕ್, ‘ಮೊದಲ ಸಿನಿಮಾದ ನಿರ್ಮಾಣ ಹಾಗೂ ನಿರ್ದೇಶನದ ಹೊಣೆ ಹೊತ್ತ ಸಂಜೋತಾ ಗುರುವನ್ನು ಮೀರಿಸಿದ್ದಾರೆ’ ಎಂದು ಶ್ಲಾಘಿಸಿದರು.

‘ನಿರ್ದೇಶಕ ಅಥವಾ ನಿರ್ದೇಶಕಿ ಎಂಬ ತಾರತಮ್ಯ ಗುರುತಿಸದೇ, ಒಟ್ಟಾಗಿ ನಿರ್ದೇಶನ ಎಂಬ ಕಲೆಯನ್ನು ಗುರುತಿಸಬೇಕು. ನಿರ್ದೇಶನ ಮಾಡುವವರ ಶ್ರದ್ಧೆ, ಕಲಿಕೆ, ಆಸಕ್ತಿಯನ್ನು ಗಮನಿಸಬೇಕು’ ಎಂದು ನಾಗಾಭರಣ ಸಲಹೆ ಮಾಡಿದರು. ಒಂದು ಹಾಡು ಬರೆಯಲು ಕಷ್ಟಪಟ್ಟ ಘಟನೆಯನ್ನು ಕೆ. ಕಲ್ಯಾಣ್ ನೆನಪಿಸಿಕೊಂಡರು. ನಾಯಕರಾದ ಪ್ರದೀಪ್, ಸಚಿನ್, ವಿಶಾಲ್, ನಾಯಕಿಯರಾದ ನಮೃತಾ, ಅಪೂರ್ವ, ನಿಮಿಷಾ, ಗಾಯಕ ವಿಜಯಪ್ರಕಾಶ್ ಮಾತನಾಡಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.