‘ನಾನು ಮೈಸೂರಿಗೆ ಹೋಗಿದ್ದೆ. ಅಲ್ಲಿ ಪೌರಕಾರ್ಮಿಕರ ಸಂಕಷ್ಟದ ಬಗ್ಗೆ ಅರಿತೆ. ಅವರ ಸಮಸ್ಯೆಗಳನ್ನು ತೆರೆಯ ಮೇಲೆ ತರಲು ಹೊರಟಿದ್ದೇನೆ’ ಎಂದು ಮಾತಿಗಿಳಿದರು ನಟ ಹುಚ್ಚ ವೆಂಕಟ್. ಈ ಚಿತ್ರಕ್ಕೆ ಅವರು ‘ತಿಕ್ಲ ಹುಚ್ಚ ವೆಂಕಟ್’ ಎಂದು ಹೆಸರಿಟ್ಟಿದ್ದಾರೆ. ಈಗಾಗಲೇ, ಚಿತ್ರದ ಶೇ 35ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆಯಂತೆ.
ಚಿತ್ರಕ್ಕೆ ನಾಯಕಿ ಯಾರು? ಎಂಬ ಪ್ರಶ್ನೆಗೆ ವೆಂಕಟ್ ನೀಡಿದ ಉತ್ತರ ನಗೆಯುಕ್ಕಿಸಿತು. ‘ಈ ಚಿತ್ರಕ್ಕೆ ಇಬ್ಬರು ನಾಯಕಿಯರು. ಆದರೆ, ಇನ್ನೂ ಚಿತ್ರದ ನಾಯಕಿಯರ ಆಯ್ಕೆ ಪೂರ್ಣಗೊಂಡಿಲ್ಲ. ನಾಯಕಿಯರ ಭಾಗದ ಚಿತ್ರೀಕರಣ ಬಾಕಿ ಇದೆ’ ಎಂದರು. ಕಥೆ, ಚಿತ್ರಕಥೆ, ನಿರ್ದೇಶನದ ಹೊಣೆಯನ್ನು ಅವರೇ ಹೊತ್ತಿದ್ದಾರೆ.
‘ಸರ್ಕಾರ ಗುತ್ತಿಗೆ ಪೌರಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಅವರು ಸೇವಾ ಭದ್ರತೆ ಇಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಚಿತ್ರದಲ್ಲಿ ಹೇಳಿದ್ದೇನೆ. ಎಲ್ಲ ಕ್ಷೇತ್ರದಲ್ಲೂ ಖಾಸಗೀಕರಣ ತಳವೂರಿದೆ. ಇದರಿಂದ ಅಪಾಯ ಹೆಚ್ಚುತ್ತಿದೆ. ಪ್ರೀತಿ, ಪ್ರೇಮದ ಎಳೆಯೂ ಚಿತ್ರದಲ್ಲಿದೆ’ ಎಂದರು.
ಚಿತ್ರದಲ್ಲಿ ಐದು ಹಾಡುಗಳಿವೆ. ವೆಂಕಟ್ ಅವರೇ ಎಲ್ಲ ಹಾಡುಗಳನ್ನು ಬರೆದಿದ್ದಾರೆ. ಜತೆಗೆ, ಅವರೊಟ್ಟಿಗೆ ಅನುರಾಧಾ ಭಟ್, ಅನನ್ಯಾ ಭಟ್, ವಾಣಿ ಹಾಡುಗಳಿಗೆ ಧ್ವನಿಗೂಡಿಸಿದ್ದಾರೆ. ಚವಾಣ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಬೆಂಗಳೂರು ಮತ್ತು ಹೈದರಾಬಾದ್ನಲ್ಲಿ ಒಂದೇ ಹಂತದಲ್ಲಿ ಚಿತ್ರೀಕರಣ ಪೂರ್ಣಗೊಳಿಸಲು ಚಿತ್ರತಂಡ ನಿರ್ಧರಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.