ADVERTISEMENT

ಅಮಿತ್‌ ಷಾ ವಿರುದ್ಧ ಎಫ್‌ಐಆರ್‌

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2014, 19:30 IST
Last Updated 12 ಏಪ್ರಿಲ್ 2014, 19:30 IST

ಮುಜಫ್ಫರ್‌ನಗರ (ಪಿಟಿಐ): ಉತ್ತರ ಪ್ರದೇಶದ ಬಿಜೆಪಿ ಉಸ್ತುವಾರಿಯಾಗಿ­ರುವ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಮಿತ್‌ ಷಾ ಅವರ ವಿರುದ್ಧ ಚುನಾವಣಾ ನೀತಿಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಶನಿ­ವಾರ ಮತ್ತೆರಡು ಮೊಕದ್ದಮೆಗಳು ದಾಖಲಾಗಿವೆ.

ಚುನಾವಣಾ ಆಯೋಗದ ಸೂಚನೆ­ಯಂತೆ ಷಾ ಅವರ ವಿರುದ್ಧ ಭಾರ­ತೀಯ ದಂಡ ಸಂಹಿತೆ (ಐಪಿಸಿ) 188 ಕಲಂ (ಸರ್ಕಾರಿ ಅಧಿಕಾರಿ ಕಾನೂನಿ­ನ್ವಯ ನೀಡಿದ ಆದೇಶ ಪಾಲಿಸದಿರು­ವುದು), ಪ್ರಜಾಪ್ರತಿನಿಧಿ ಕಾಯ್ದೆಯ 123 (3) ಕಲಂ (ಅಭ್ಯರ್ಥಿಯ ಧರ್ಮ, ಜಾತಿ– ಜನಾಂಗ, ಸಮು­ದಾಯ– ಭಾಷೆ­ಯನ್ನು ಆಧರಿಸಿ ಮತ ನೀಡುವಂತೆ ಕೋರು­ವುದು) ಅನ್ವಯ ಕಕ್ರೋಲಿ ಮತ್ತು ಹೊಸ­ಮಂಡಿ ಠಾಣೆ­ಗಳಲ್ಲಿ ಪ್ರಕರಣಗಳು ದಾಖ­­ಲಾಗಿವೆ ಎಂದು ಹೆಚ್ಚುವರಿ ಜಿಲ್ಲಾ­ಧಿಕಾರಿ ಇಂದ್ರಾಮಣಿ ತ್ರಿಪಾಠಿ ತಿಳಿಸಿದ್ದಾರೆ.

ಮುಜಫ್ಫರ್‌ನಗರ ಜಿಲ್ಲೆಯ ಬಡ್ವಾರ್‌ ಗ್ರಾಮದಲ್ಲಿ ಏ. 4ರಂದು ನಡೆದ ರ್‍್ಯಾಲಿಯಲ್ಲಿ ಷಾ ಅವರು, ‘ಮೋದಿ ಅವರ ಸರ್ಕಾರ ಅಧಿಕಾರಕ್ಕೆ ಬಂದರೆ, ಮುಲ್ಲಾ ಮುಲಾಯಂ ಅವರ ಸರ್ಕಾರ ಪತನವಾಗಲಿದೆ’ ಎಂದಿದ್ದರು.‌

ಆಯೋಗಕ್ಕೆ ಷಾ ಮನವಿ: ನವದೆಹಲಿ: ಉತ್ತರಪ್ರದೇಶದಲ್ಲಿ ಬಹಿ­ರಂಗ ಪ್ರಚಾರ ಕೈಗೊಳ್ಳದಂತೆ ತಮ್ಮ ಮೇಲೆ ಹೇರಿದ ನಿರ್ಬಂಧವನ್ನು ಪುನರ್‌­ಪರಿಶೀಲಿಸುವಂತೆ ಅಮಿತ್‌ ಷಾ ಚುನಾ­ವಣಾ ಆಯೋಗಕ್ಕೆ ಶನಿ­ವಾರ ಮನವಿ ಮಾಡಿಕೊಂಡಿದ್ದಾರೆ.

ಆಯೋಗ ಕ್ರಮ ದುಃಖಕರ: ಬಿಜೆಪಿ
ಅಹಮದಾಬಾದ್‌: ಗುಜರಾತ್‌ನ ಮಾಜಿ ಗೃಹ ಸಚಿವ ಅಮಿತ್‌ ಷಾ ಅವರ ವಿರುದ್ಧ ಚುನಾವಣಾ ಆಯೋಗ ಜರುಗಿ­ಸಿರುವ ಕ್ರಮ ಅತ್ಯಂತ ದುಃಖಕರ ಎಂದು ಬಿಜೆಪಿ ಶನಿವಾರ ಹೇಳಿದೆ.

‘ಷಾ ಅವರ ವಿರುದ್ಧ ತೆಗೆದು­ಕೊಂಡಿ­ರುವ ಕ್ರಮದ ಬಗ್ಗೆ ಕಾನೂನಿನ ಅಭಿಪ್ರಾಯ ಪಡೆದುಕೊಳ್ಳಲಾಗು­ವುದು’ ಎಂದು ಪಕ್ಷದ ಮಾಧ್ಯಮ ಮುಖ್ಯ ಸಮನ್ವಕಾರ ರವಿಶಂಕರ್ ಪ್ರಸಾದ್‌ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಅವರು ಹಿಂಸಾ­ಚಾರ, ಉದ್ವಿಗ್ನ ಸ್ಥಿತಿ ಬಗ್ಗೆ ಯಾವುದೇ ಮಾತುಗಳ­ನ್ನಾ­ಡಿಲ್ಲ. ಸಮಾಜವಾದಿ ಪಕ್ಷ, ಕಾಂಗ್ರೆಸ್‌ ನಿಮ್ಮನ್ನು (ಜನತೆ) ಸಂಕಟಕ್ಕೆ, ಶೋಷ­ಣೆಗೆ ದೂಡಿದ್ದರೆ ಆ ಪಕ್ಷಗಳ ವಿರುದ್ಧ ಮತ ಚಲಾಯಿಸಿ ಎಂದಿದ್ದರು’ ಎಂದು ಷಾ ಅವರನ್ನು ಸಮರ್ಥಿಸಿಕೊಂಡರು.

ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮ ಕೂಡ ಓಹಿಯೊದಲ್ಲಿ ನಡೆದಿದ್ದ ಪ್ರಚಾರ ಸಭೆಯಲ್ಲಿ ‘ಮತಚಲಾವಣೆ ಮೂಲಕ ಪ್ರತೀಕಾರ ತೀರಿಸಿಕೊಳ್ಳಿ’ ಎನ್ನುವ ಮಾತನ್ನು ಆಡಿದ್ದರು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT