ಲಖನೌ: ಅಯೋಧ್ಯೆಯ ರಾಮಮಂದಿರ–ಬಾಬರಿ ಮಸೀದಿ ವಿವಾದಕ್ಕೆ ಸಂಬಂಧಿಸಿದ ಎಲ್ಲ ಸಮಸ್ಯೆಗಳಿಗೆ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಬಹುದು ಎಂದು ಆರ್ಟ್ ಆಫ್ ಲಿವಿಂಗ್ನ ಶ್ರೀ ಶ್ರೀ ರವಿಶಂಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಫರಂಗಿ ಮಹಲ್ ಇಸ್ಲಾಮಿಕ್ ಸೆಂಟರ್ ಆಫ್ ಇಂಡಿಯಾದ ಮೌಲಾನಾ ಖಾಲಿದ್ ರಶೀದ್ ಫರಂಗಿಮಹ್ಲಿ ಮತ್ತು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್ಬಿ) ಮುಖಂಡರೊಂದಿಗೆ ಶುಕ್ರವಾರ ಮಾತುಕತೆ ನಡೆಸಿದರು.
‘ನ್ಯಾಯಾಲಯಗಳ ಬಗ್ಗೆ ತಮಗೆ ಗೌರವವಿದೆ. ಅವುಗಳು ನೀಡುವ ತೀರ್ಪು ನೂರಾರು ವರ್ಷಗಳ ನಂತರವೂ ಉಳಿಯಬಹುದು. ಆದರೆ, ಹೃದಯಗಳನ್ನು ಬೆಸೆಯಲಾರವು. ಹೃದಯದಿಂದ ಕಂಡುಕೊಳ್ಳುವ ಪರಿಹಾರ ಚಿರಸ್ಥಾಯಿಯಾಗಿರುತ್ತದೆ’ ಎಂದು ಅವರು ತಮ್ಮ ಯತ್ನವನ್ನು ಸಮರ್ಥಿಸಿಕೊಂಡಿದ್ದಾರೆ.
‘ನ್ಯಾಯಾಲಯದ ಹೊರಗೆ ವಿವಾದ ಬಗೆಹರಿಸುವ ನಮ್ಮ ಈ ಯತ್ನ ಸ್ವಲ್ಪ ತಡವಾಗಿ ಆರಂಭವಾಗಿದೆ ಎಂಬುವುದನ್ನು ಒಪ್ಪಿಕೊಳ್ಳುತ್ತೇನೆ. ಖಂಡಿತ ಈ ಯತ್ನ ಫಲ ನೀಡುತ್ತದೆ ಎಂಬ ವಿಶ್ವಾಸವಿದೆ. ನಮಗೆ ನಿರ್ದಿಷ್ಟ ಕಾರ್ಯಸೂಚಿ ಮತ್ತು ತರಾತುರಿ ಎರಡೂ ಇಲ್ಲ. ಎರಡೂ ಕಡೆಯ ಮುಖಂಡರು ಮಾತುಕತೆ ಮೂಲಕ ಒಮ್ಮತಕ್ಕೆ ಬರಲಿ ಎನ್ನುವುದಷ್ಟೇ ನಮ್ಮ ಆಶಯ’ ಎಂದು ಶ್ರೀ ಶ್ರೀ ಹೇಳಿದ್ದಾರೆ.
**
ಅಯೋಧ್ಯೆ ವಿವಾದ ಸಂಧಾನಕಾರ ಶ್ರೀ ಶ್ರೀ ವಿಶ್ವಾಸಾರ್ಹತೆಯ ಬಗ್ಗೆಯೇ ಸಂದೇಹವಿದೆ.
– ಜಾವೇದ್ ಅನ್ಸಾರಿ, ಹಿರಿಯ ರಾಜಕೀಯ ವಿಶ್ಲೇಷಕ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.