ADVERTISEMENT

ಆಂಧ್ರಪ್ರದೇಶದ ರಾಜಧಾನಿ ವಿಜಯವಾಡಕ್ಕೆ

​ಪ್ರಜಾವಾಣಿ ವಾರ್ತೆ
Published 27 ಜೂನ್ 2016, 22:30 IST
Last Updated 27 ಜೂನ್ 2016, 22:30 IST
ಆಂಧ್ರಪ್ರದೇಶದ ರಾಜಧಾನಿ ವಿಜಯವಾಡಕ್ಕೆ
ಆಂಧ್ರಪ್ರದೇಶದ ರಾಜಧಾನಿ ವಿಜಯವಾಡಕ್ಕೆ   

ಹೈದರಾಬಾದ್‌: ರಾಜ್ಯ ವಿಭಜನೆಯ ಎರಡು ವರ್ಷಗಳ ಬಳಿಕ ಆಂಧ್ರ ಪ್ರದೇಶ ಸರ್ಕಾರ ತನ್ನ ಆಡಳಿತ ಯಂತ್ರವನ್ನು ಹೈದರಾಬಾದ್‌ನಿಂದ ವಿಜಯವಾಡ, ಗುಂಟೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಸ್ಥಳಾಂತರಿಸಿದೆ.

ಆಂಧ್ರ ಪ್ರದೇಶದ ನೂತನ ರಾಜಧಾನಿ ಅಮರಾವತಿ ಅಸ್ತಿತ್ವಕ್ಕೆ ಬರಲು ಇನ್ನೂ ಕೆಲವು ವರ್ಷಗಳು ಬೇಕು. ಹೊಸ ರಾಜಧಾನಿ ತಲೆಎತ್ತುವವರೆಗೆ ಸರ್ಕಾರಿ ಕಚೇರಿಗಳು ವಿಜಯವಾಡ ಮತ್ತು ಗುಂಟೂರಿನಲ್ಲಿರುವ ಖಾಸಗಿ ಹಾಗೂ ಸರ್ಕಾರಿ ಕಟ್ಟಡಗಳಿಂದ ಕಾರ್ಯ ನಿರ್ವಹಿಸಲಿವೆ.

ಜೂನ್‌ 27 ರ ಒಳಗೆ ಹೈದರಾಬಾದ್‌ನಿಂದ ಸ್ಥಳಾಂತರಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು  ಗಡುವು ವಿಧಿಸಿದ್ದರು. ಸಚಿವಾಲಯ ಹೊರತುಪಡಿಸಿ ಸರ್ಕಾರದ ಉಳಿದ ಎಲ್ಲ ಇಲಾಖೆಗಳ ಸ್ಥಳಾಂತರ ಪ್ರಕ್ರಿಯೆ ಕೊನೆಗೊಂಡಿದೆ.

ಸಚಿವಾಲಯದಲ್ಲಿದ್ದ 115 ನಿರ್ದೇಶನಾಲಯಗಳು ಮತ್ತು ಕಮಿಷನರ್‌ ಕಚೇರಿಗಳು ಹಾಗೂ 32 ಇಲಾಖೆಗಳು, ಸುಮಾರು 25 ಸಾವಿರ ಸಿಬ್ಬಂದಿ ಮತ್ತು ಅವರ ಕುಟುಂಬದ ಸದಸ್ಯರು ಹೊಸ ತಾಣಕ್ಕೆ ಸ್ಥಳಾಂತರಗೊಂಡಿದ್ದಾರೆ.

ಸಚಿವಾಲಯ ಸೇರಿದಂತೆ ಸರ್ಕಾರದ ಕಚೇರಿಗಳು ಸ್ಥಳಾಂತರಗೊಳ್ಳಬೇಕಾದರೆ ಸುಮಾರು 50 ಲಕ್ಷ ಚದರ ಅಡಿ ಸ್ಥಳದ ಅವಶ್ಯಕತೆಯಿದೆ ಎಂದು ಸರ್ಕಾರ ನೇಮಿಸಿದ್ದ ಸಮಿತಿ ಅಂದಾಜು ಮಾಡಿತ್ತು.

ಮುಖ್ಯಮಂತ್ರಿ, ವಿಧಾನ ಸಭೆ, ವಿಧಾನ ಪರಿಷತ್ತು ಮತ್ತು ಸಚಿವಾಲಯದ ಸಿಬ್ಬಂದಿ ವಿಜಯವಾಡದಿಂದ ಸುಮಾರು 15 ಕಿ.ಮೀ. ದೂರದಲ್ಲಿರುವ ವೇಲಗಾಪುಡಿ ಎಂಬ ಗ್ರಾಮದಲ್ಲಿ 4 ಲಕ್ಷ ಚದರ ಅಡಿ ಜಾಗದಲ್ಲಿ ಕಟ್ಟಿರುವ ತಾತ್ಕಾಲಿಕ ಸಚಿವಾಲಯ ಕಟ್ಟಡದಿಂದ ದೈನಂದಿನ ಕೆಲಸ ನಿರ್ವಹಿಸಲಿದ್ದಾರೆ.

ಮೀನುಗಾರಿಕೆ, ಜಾರಿ ನಿರ್ದೇಶನಾಲಯ, ಪಂಚಾಯಿತಿ ರಾಜ್‌ ಮತ್ತು ತಾಂತ್ರಿಕ ಶಿಕ್ಷಣ ಸೇರಿದಂತೆ ಹಲವು ಇಲಾಖೆಗಳು ವಿಜಯವಾಡದಲ್ಲಿರುವ ಖಾಸಗಿ ಹಾಗೂ ಸರ್ಕಾರಿ ಕಟ್ಟಡಗಳಿಗೆ ಸ್ಥಳಾಂತರಗೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.