ಚೆನ್ನೈ: ಆರ್ಎಸ್ಎಸ್ ಭಾರತವನ್ನು ಹಿಂದೂ, ಹಿಂದಿ, ಹಿಂದೂಸ್ತಾನವನ್ನಾಗಿಸಲು ಯತ್ನಿಸುತ್ತಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಚೆನ್ನೈನಲ್ಲಿ ವಿದುತಲೈ ಚಿರುತಗಳ್ ಕಾಟ್ಚಿ (ವಿಸಿಕೆ) ಆಯೋಜಿಸಿದ ರಾಜ್ಯ ಸ್ವಾಯುತ್ತತೆ ಸಮಾವೇಶದಲ್ಲಿ ಮಾತನಾಡಿದ ಪಿಣರಾಯಿ ಆರ್ಎಸ್ಎಸ್, ಸಂಘ ಪರಿವಾರ ಮತ್ತು ಇದೆಲ್ಲದಕ್ಕೂ ನಿರ್ದೇಶನ ನೀಡುತ್ತಿರುವ ಬಿಜೆಪಿ ಒಕ್ಕೂಟವಾದ (ಫೆಡರಲಿಸಂ)ನ ಉದ್ದೇಶವನ್ನೇ ಒಡೆಯಲು ಯತ್ನಿಸುತ್ತಿದೆ ಎಂದಿದ್ದಾರೆ.
ಆರ್ಎಸ್ಎಸ್ ರಾಜ್ಯ ಸರ್ಕಾರಗಳನ್ನು ದುರ್ಬಲವಾಗಿಸಲು ಯತ್ನಿಸುತ್ತಿವೆ. ಇದಕ್ಕಾಗಿ ಅವರು ಒಕ್ಕೂಟವಾದವನ್ನು ಒಡೆದು ಹಿಂದಿ, ಹಿಂದೂ, ಹಿಂದೂಸ್ತಾನವನ್ನಾಗಿಸುವ ಉದ್ದೇಶವನ್ನು ಹೇರುತ್ತಿದ್ದಾರೆ. ಬಿಜೆಪಿಯೂ ಇದೇ ರೀತಿ ಮಾಡುತ್ತಿದ್ದು ಅವರ ಈ ಯತ್ನವನ್ನು ವಿಫಲಗೊಳಿಸಬೇಕಿದೆ. ಬಿಜೆಪಿಯ ಈ ಕೃತ್ಯಗಳು ಹಲವಾರು ಬಾರಿ ಬಯಲಾಗಿವೆ.
ಸಂಘ ಮತ್ತು ಬಿಜೆಪಿಯ ವಿರುದ್ಧ ಹರಿಹಾಯ್ದ ಪಿಣರಾಯಿ, ಭಾರತ ದೇಶದಲ್ಲಿ ಬಹು ಭಾಷಿಗರು ಮತ್ತು ಬಹು ಸಂಸ್ಕೃತಿ ಇದೆ ಎಂಬುದನ್ನು ಆರ್ಎಸ್ಎಸ್ ಮರೆತಂತಿದೆ. ಹಾಗಾಗಿ ಅವರು ಒಂದೇ ಸಂಸ್ಕೃತಿ ಮತ್ತು ಒಂದು ಭಾಷೆಯನ್ನು ಹೇರಲು ಯತ್ನಿಸುತ್ತಿದ್ದಾರೆ. ಆರ್ಎಸ್ಎಸ್ ಮತ್ತು ಬಿಜೆಪಿ ಒಕ್ಕೂಟ ವ್ಯವಸ್ಥೆಯನ್ನು ಒಡೆಯುವುದಕ್ಕಾಗಿ ರಾಷ್ಟ್ರೀಯ ಅಜೆಂಡಾವೊಂದನ್ನು ಕೈಗೆತ್ತಿಕೊಂಡಿದೆ ಎಂದು ಆರೋಪಿಸಿದ್ದಾರೆ.
1959ರಲ್ಲಿ ಕೇರಳದಲ್ಲಿ ಅಧಿಕಾರಕ್ಕೇರಿದ ಕಮ್ಯೂನಿಸ್ಟ್ ಸರ್ಕಾರನ್ನು ವಜಾ ಮಾಡುವ ಮೂಲಕ ಮೊದಲ ಬಾರಿ ಕಾಂಗ್ರೆಸ್ ಒಕ್ಕೂಟ ವ್ಯವಸ್ಥೆ ಮೇಲೆ ದಾಳಿ ಮಾಡಿತ್ತು. ಇದೀಗ ಬಿಜೆಪಿ ಅದರ ಪರಿಧಿಗಳನ್ನು ವಿಸ್ತರಿಸುತ್ತಿದೆ. ನಮ್ಮ ಸಂವಿಧಾನವೇ ಒಕ್ಕೂಟ ವ್ಯವಸ್ಥೆಗೆ ಹೆಚ್ಚು ಒತ್ತು ನೀಡಿದ್ದು, ಈ ವ್ಯವಸ್ಥೆಯನ್ನು ದೃಢಪಡಿಸಬೇಕಿದೆ.
ನಾವು ನಮ್ಮ ಸಂವಿಧಾನವನ್ನು ಬಲಪಡಿಸಬೇಕು. ಒಕ್ಕೂಟವಾದದ ಪುನರ್ವಿಮರ್ಶೆ ಮತ್ತು ರಾಜ್ಯ-ಕೇಂದ್ರ ಸರ್ಕಾರದ ಸಂಬಂಧಗಳು ಒಂದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅತ್ಯಗತ್ಯ ಎಂದು ಪಿಣರಾಯಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.