ADVERTISEMENT

ಆರ್ಟ್ ಆಫ್ ಲಿವಿಂಗ್ ಸಾಂಸ್ಕೃತಿಕ ಉತ್ಸವದಿಂದ ಯಮುನಾ ನದಿ ತೀರದ ಪರಿಸರಕ್ಕೆ ಹಾನಿ: ಎನ್‌ಜಿಟಿ ಸಮಿತಿ

ಪಿಟಿಐ
Published 12 ಏಪ್ರಿಲ್ 2017, 12:10 IST
Last Updated 12 ಏಪ್ರಿಲ್ 2017, 12:10 IST
ರವಿಶಂಕರ್ ಗುರೂಜಿ
ರವಿಶಂಕರ್ ಗುರೂಜಿ   

ನವದೆಹಲಿ: ರವಿಶಂಕರ್ ಗುರೂಜಿ ಅವರ ಆರ್ಟ್ ಆಫ್ ಲಿವಿಂಗ್‌ ಸಂಸ್ಥೆ ಯಮುನಾ ನದಿ ತೀರದಲ್ಲಿ ಕಳೆದ ವರ್ಷ ಆಯೋಜಿಸಿದ್ದ ವಿಶ್ವ ಸಂಸ್ಕೃತಿ ಉತ್ಸವದಿಂದಾಗಿ ಆ ಪ್ರದೇಶದ ಪರಿಸರಕ್ಕೆ ಗಂಭೀರ ಹಾನಿಯಾಗಿದ್ದು, ಅದನ್ನು ಸರಿಪಡಿಸಲು ₹ 13.29 ಕೋಟಿ ಖರ್ಚಾಗಲಿದೆ ಎಂದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ (ಎನ್‌ಜಿಟಿ) ತಜ್ಞರ ತಂಡ ಹೇಳಿದೆ.

ಜಲಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿ ಶಶಿ ಶೇಖರ್ ನೇತೃತ್ವದ ತಜ್ಞರ ಸಮಿತಿ ಹಸಿರು ನ್ಯಾಯ ಮಂಡಳಿಗೆ ಮಾಹಿತಿ ನೀಡಿದ್ದು, ಪರಿಸರಕ್ಕಾದ ಹಾನಿ ಸರಿಪಡಿಸುವ ಪ್ರಕ್ರಿಯೆಗೆ ಸುಮಾರು 10 ವರ್ಷ ಬೇಕಾಗಬಹುದು ಎಂದೂ ಹೇಳಿದೆ.

‘ಯಮುನಾ ನದಿಯ ಪಶ್ಚಿಮದ 120 ಹೆಕ್ಟೇರ್ ತೀರ ಪ್ರದೇಶ ಮತ್ತು ಪೂರ್ವದ 50 ಹೆಕ್ಟೇರ್ ತೀರ ಪ್ರದೇಶಕ್ಕೆ ಗಂಭೀರ ಹಾನಿಯಾಗಿದೆ’ ಎಂದು ತಂಡ ಮಾಹಿತಿ ನೀಡಿದೆ.

ADVERTISEMENT

ಮೂರು ದಿನಗಳ ವಿಶ್ವ ಸಂಸ್ಕೃತಿ ಉತ್ಸವ ಆಯೋಜಿಸಲು ಕಳೆದ ವರ್ಷ ಹಸಿರು ನ್ಯಾಯ ಮಂಡಳಿ ಅನುಮತಿ ನೀಡಿತ್ತು. ಉತ್ಸವಕ್ಕೆ ನಿಷೇಧ ಹೇರಲು ಅಸಹಾಯಕವಾಗಿರುವುದಾಗಿ ಆ ಸಂದರ್ಭ ಮಂಡಳಿ ಹೇಳಿತ್ತು.

ಆದಾಗ್ಯೂ, ಉತ್ಸವದಿಂದ ಪರಿಸರಕ್ಕೆ ಆಗಬಹುದಾದ ಹಾನಿಯ ಮಧ್ಯಂತರ ಪರಿಹಾರವಾಗಿ ₹ 5 ಕೋಟಿ ನೀಡುವಂತೆ ಆರ್ಟ್ ಆಫ್ ಲಿವಿಂಗ್‌ ಸಂಸ್ಥೆಗೆ ಸೂಚಿಸಿತ್ತು.

ಈ ಹಿಂದೆ ನಾಲ್ಕು ಸದಸ್ಯರ ಸಮಿತಿ, ನದಿ ತೀರದ ಪುನರ್‌ನಿರ್ಮಾಣ ವೆಚ್ಚವಾಗಿ ₹ 100ರಿಂದ 120 ಕೋಟಿ ನೀಡಲು ಆರ್ಟ್ ಆಫ್ ಲಿವಿಂಗ್‌ಗೆ ಸೂಚಿಸುಂತೆ ಶಿಫಾರಸು ಮಾಡಿತ್ತು. ನಂತರ, ಏಳು ಸದಸ್ಯರ ಮತ್ತೊಂದು ಸಮಿತಿ, ಸಂಸ್ಕೃತಿ ಉತ್ಸವದಿಂದಾಗಿ ನದಿ ತೀರ ಸಂಪೂರ್ಣ ಹಾನಿಗೊಳಗಾಗಿದೆ ಎಂದು ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.