ನವದೆಹಲಿ (ಪಿಟಿಐ): ದೇಶದಲ್ಲಿ ಬಡತನ ನಿರ್ಮೂಲನೆಗೆ ಸುಧಾರಣೆ ಕ್ರಮಗಳು ಹಾಗೂ ಶೇಕಡ 8ರಿಂದ 10ರಷ್ಟು ಆರ್ಥಿಕ ಪ್ರಗತಿ ಅಗತ್ಯ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅಭಿಪ್ರಾಯ ಪಟ್ಟಿದ್ದಾರೆ.
ಈ ನಿಟ್ಟಿನಲ್ಲಿ ಸಂಸತ್ತಿನಲ್ಲಿ ಭೂಸ್ವಾಧೀನ ಹಾಗೂ ಸರಕು ಮತ್ತು ಸೇವಾ ತೆರಿಗೆ ಮಸೂದೆಗಳಿಗೆ ಅನುಮೋದನೆ ದೊರೆಯಬೇಕು ಎಂದಿದ್ದಾರೆ.
ಕಳೆದ ಮೂರು ದಿನಗಳ ಹಿಂದೆ ಬಿಡುಗಡೆಯಾದ ಸಾಮಾಜಿಕ, ಆರ್ಥಿಕ ಹಾಗೂ ಜಾತಿ ಗಣತಿ ವರದಿ ಗ್ರಾಮೀಣ ಭಾರತದ ಕರಾಳ ಚಿತ್ರಣದ ಮೇಲೆ ಬೆಳಕು ಚೆಲ್ಲಿತ್ತು. ಈ ಸಂಬಂಧ ಜೇಟ್ಲಿ ಅವರು ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.
‘ಕೆಲವು ನಿರ್ದಿಷ್ಟ ಯೋಜನೆಗಳಿಗಿಂತಲೂ ಅಭಿವೃದ್ಧಿ ಹಾಗೂ ಆರ್ಥಿಕ ಸುಧಾರಣೆಗಳು ಬಡವರಿಗೆ ನೆರವಾಗುತ್ತವೆ’ ಎಂದು ಈ ವರದಿಯು ಸ್ಪಷ್ಟಪಡಿಸಿದೆ ಎಂದು ಜೇಟ್ಲಿ ತಿಳಿಸಿದ್ದಾರೆ.
ಅಲ್ಲದೇ, ಇಂಥ ಪರಿಸ್ಥಿತಿಯನ್ನು ಸುಧಾರಿಸುವುದು ‘ಈ ಸರ್ಕಾರದ ಪ್ರಪ್ರಥಮ ಆದ್ಯತೆ’ ಎಂದು ಜೇಟ್ಲಿ ತಿಳಿಸಿದ್ದಾರೆ.
‘ಅಭಿವೃದ್ಧಿ ಅಥವಾ ಮರು ಹಂಚಿಕೆ? ಇಲ್ಲವೇ, ನೀತಿಗಳ ಸುಧಾರಣೆ ಅಥವಾ ಬಡತನ ನಿರ್ಮೂಲನೆಗೆ ನಿರ್ದಿಷ್ಟ ಯೋಜನೆಗಳು? ಹೀಗೆ ಪ್ರತಿಯೊಂದು ನಿರ್ದಿಷ್ಟ ಆಯ್ಕೆಯೂ ತಪ್ಪು ಎಂಬುದು ನಮ್ಮ ನಂಬಿಕೆ. ಬಡತನ ನಿರ್ಮೂಲನೆಗೆ ಎರಡೂ ಬೇಕು’ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಬಡತನ ನಿರ್ಮೂಲನೆ ನಿಟ್ಟಿನಲ್ಲಿ ‘ಎಲ್ಲಾ ಭಾರತೀಯರಿಗೆ ಉತ್ತಮ ಉದ್ಯೋಗಾವಕಾಶಗಳು ಸೃಷ್ಟಿಸಲು ಶೇಕಡ 8–10ರಷ್ಟು ಆರ್ಥಿಕ ಪ್ರಗತಿಯನ್ನು ತ್ವರಿತವಾಗಿ ಸಾಧಿಸಬೇಕಿದೆ. ಅದಕ್ಕಾಗಿಯೇ ಸರ್ಕಾರವು ಹೂಡಿಕೆಯನ್ನು ಉತ್ತೇಜಿಸುತ್ತಿದೆ’ ಎಂದಿದ್ದಾರೆ.
ಹೂಡಿಕೆ ಕ್ಷೇತ್ರ ಈಗ ಪ್ರಗತಿ ಪಥದತ್ತ ಹೊರಳುತ್ತಿದೆ ಎಂದು ಸಮೀಕ್ಷೆ ಹೇಳಿದ್ದು, ಈ ನಿಟ್ಟಿನಲ್ಲಿ ‘ಜಿಎಸ್ಟಿ ಜಾರಿ ಹಾಗೂ ಸುಧಾರಿತ ಭೂಸ್ವಾಧೀನ ಮಸೂದೆಯು ಅದಕ್ಕೆ ಮತ್ತಷ್ಟು ಪುಷ್ಟಿ ನೀಡಲಿದೆ’ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.