ಬರ್ವಾಲಾ/ಹರಿಯಾಣ (ಪಿಟಿಐ): ಸ್ವಯಂಘೋಷಿತ ‘ದೇವಮಾನವ’ ರಾಮ್ಪಾಲ್ ಅವರ ಬಂಧನವಾಗುತ್ತಿದ್ದಂತೆಯೇ ಅವರ ಸಾವಿರಾರು ಬೆಂಬಲಿಗರು ಆಶ್ರಮದಿಂದ ನಿಟ್ಟುಸಿರುಬಿಡುತ್ತ ಹೊರಗೆ ಬಂದರು. ತಾವು ಆಶ್ರಮ ಬಿಟ್ಟು ಕದಲದಂತೆ ರಾಮ್ಪಾಲ್್ ಅವರ ‘ಖಾಸಗಿ ಕಮಾಂಡೊಗಳು’ ತಮ್ಮ ಮೇಲೆ ಒತ್ತಡ ಹಾಕಿದ್ದರು ಎಂದು ಬೆಂಬಲಿಗರು ಹೇಳಿದ್ದಾರೆ.
‘ಕೆಲವು ದಿನಗಳ ಹಿಂದೆ ಸತ್ಸಂಗಕ್ಕಾಗಿ ನಾವು ಇಲ್ಲಿಗೆ ಬಂದಿದ್ದೆವು. ನಂತರದಲ್ಲಿ ನಮಗೆ ಇಲ್ಲಿಯೇ ಇರುವಂತೆ ಹೇಳಲಾಯಿತು. ಆಶ್ರಮ ಬಿಟ್ಟು ಹೋಗದಂತೆ ನಮ್ಮನ್ನು ತಡೆಯಲಾಯಿತು. ನೀವು ಆಶ್ರಮದಲ್ಲಿ ಸುರಕ್ಷಿತವಾಗಿರುತ್ತೀರಿ. ನಿಮಗೆ ಇಲ್ಲಿ ಆಹಾರ ಪೂರೈಕೆ ಮಾಡಲಾಗುತ್ತದೆ. ನಿಮ್ಮ ಕಾಳಜಿ ತೆಗೆದುಕೊಳ್ಳಲಾಗುತ್ತದೆ ಎಂದು ರಾಮ್ಪಾಲ್್ ಖಾಸಗಿ ಕಮಾಂಡೊಗಳು ನಮಗೆ ಹೇಳಿದ್ದರು’ ಎಂದು ಹೇಳಿಕೊಂಡಿದ್ದಾರೆ.
ತನಿಖೆಗೆ ಸಮಿತಿ ನೇಮಕ
ನವದೆಹಲಿ: ರಾಮ್ಪಾಲ್ ಆಶ್ರಮದಲ್ಲಿ ಪೊಲೀಸರ ಲಾಠಿ ಪ್ರಹಾರಕ್ಕೆ ಮಾಧ್ಯಮಪ್ರತಿನಿಧಗಳು ಗಾಯಗೊಂಡಿರುವ ಪ್ರಕರಣವನ್ನು ತನಿಖೆಗೆ ಒಳಪಡಿಸುವುದಕ್ಕೆ ಭಾರತೀಯ ಪತ್ರಿಕಾ ಮಂಡಳಿಯು (ಪಿಸಿಐ) ಸತ್ಯ ಶೋಧನಾ ಸಮಿತಿ ರಚಿಸಿದೆ. ‘ರಾಮ್ಪಾಲ್ ಆಶ್ರಮದಲ್ಲಿ ನಡೆದ ಸಂಘರ್ಷದಲ್ಲಿ ಕೆಲವು ಮಾಧ್ಯಮಪ್ರತಿನಿಧಿಗಳ ಮೇಲೆ ಪೊಲೀಸ್ ಸಿಬ್ಬಂದಿ ಹಲ್ಲೆ ಮಾಡಿರುವ ಕುರಿತು ಬಂದ ವರದಿಯನ್ನು ನಾನು ಪರಿಶೀಲಿಸಿದ್ದೇನೆ’ ಎಂದು ಪಿಸಿಐ ಅಧ್ಯಕ್ಷ ನ್ಯಾ.ಮಾರ್ಕಂಡೇಯ ಕಟ್ಜು ಹೇಳಿದ್ದಾರೆ.
‘ಇದು ಮೂಲಭೂತ ಸ್ವಾತಂತ್ರ್ಯದ ಉಲ್ಲಂಘನೆ ಎಂದು ಮೇಲ್ನೋಟಕ್ಕೆ ಕಂಡುಬರುತ್ತದೆ’ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ. ಸಂದೀಪ್ ಶಂಕರ್, ಕೊಸುರಿ ಅಮರ್ನಾಥ್, ರಾಜೀವ್ ರಂಜನ್ ನಾಗ್ ಹಾಗೂ ಕೃಷ್ಣಪ್ರಸಾದ್ ಅವರು ಸತ್ಯಶೋಧನಾ ಸಮಿತಿ ಸದಸ್ಯರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.