ADVERTISEMENT

ಇಂದು ಕಲಾಂ ಅಂತ್ಯಕ್ರಿಯೆ

ರಾಮೇಶ್ವರದಲ್ಲಿ ಕಂಬನಿಯ ಮಹಾಪೂರ

​ಪ್ರಜಾವಾಣಿ ವಾರ್ತೆ
Published 29 ಜುಲೈ 2015, 19:30 IST
Last Updated 29 ಜುಲೈ 2015, 19:30 IST

ರಾಮೇಶ್ವರ (ತಮಿಳುನಾಡು), (ಪಿಟಿಐ): ಎ.ಪಿ.ಜೆ ಅಬ್ದುಲ್‌ ಕಲಾಂ ಅವರ ಪಾರ್ಥಿವ ಶರೀರವನ್ನು ವಿಶೇಷ  ವಿಮಾನದ ಮೂಲಕ ಬುಧವಾರ  ದೆಹಲಿಯಿಂದ ಹುಟ್ಟೂರು ರಾಮೇಶ್ವರಕ್ಕೆ ತರಲಾಯಿತು.

ಬೆಳಿಗ್ಗೆ 8.15ಕ್ಕೆ ದೆಹಲಿಯ ಪಾಲಂ ವಿಮಾನ ನಿಲ್ದಾಣದಿಂದ ಹೊರಟ ವಿಶೇಷ ವಿಮಾನವು ಮದುರೆಗೆ ಬಂತು.  ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಹಾಗೂ ರಕ್ಷಣಾ ಸಚಿವ ಮನೋಹರ್‌ ಪರಿಕ್ಕರ್‌ ಅವರು ವಿಶೇಷ ವಿಮಾನದಲ್ಲಿ   ಇದ್ದರು. ಮದುರೆಯಿಂದ  ವಾಯುಪಡೆ ಹೆಲಿಕಾಪ್ಟರ್‌ ಮೂಲಕ ರಾಮೇಶ್ವರಕ್ಕೆ ತರಲಾಯಿತು. 

ಇಲ್ಲಿಂದ12 ಕಿ.ಮೀ ದೂರ ಇರುವ ಮಂಡಪಮ್‌್ ಬಳಿಯ ಪಕರಂಬುವಿನಲ್ಲಿ ಗುರುವಾರ ಬೆಳಿಗ್ಗೆ 11 ಗಂಟೆಗೆ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ.

ಜಯಾ ಗೈರು: ಅನಾರೋಗ್ಯದ ಕಾರಣ ಮುಖ್ಯಮಂತ್ರಿ ಜಯಲಲಿತಾ ಕಲಾಂ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಿಲ್ಲ.  ತಮ್ಮ ಪರವಾಗಿ ಅವರು  ಸಂಪುಟದ ಏಳು ಸದಸ್ಯರನ್ನು ಕಳಿಸುತ್ತಿದ್ದಾರೆ.

ಜನಸಾಗರ: ಕಲಾಂ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯುವುದಕ್ಕೆ ಜನಸಾಗರವೇ ಹರಿದು ಬಂತು. ಸಚಿವರು, ಗಣ್ಯರು, ವಿದ್ಯಾರ್ಥಿಗಳು ಹಾಗೂ ಮಕ್ಕಳು ನಮನ ಸಲ್ಲಿಸಿದರು. ಕಲಾಂ ಸಮಾಧಿಗೆ ರಾಜ್ಯ ಸರ್ಕಾರವು ಎರಡು ಎಕರೆ ಜಮೀನು ಮಂಜೂರು ಮಾಡಿದೆ.

ಸಿ.ಎಂ ಭಾಗಿ
ಬೆಂಗಳೂರು: ರಾಮೇಶ್ವರದಲ್ಲಿ ನಡೆಯುವ ಮಾಜಿ ರಾಷ್ಟ್ರಪತಿ ಕಲಾಂ ಅಂತ್ಯಸಂಸ್ಕಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲ್ಗೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.