ಜಮ್ಮು: ‘ಭಾರತವನ್ನು ಇನ್ನೂ ಎಷ್ಟು ಭಾಗಗಳಾಗಿ ತುಂಡರಿಸುವಿರಿ? ಧರ್ಮದ ಆಧಾರದಲ್ಲಿ ದೇಶ ಒಡೆಯುವ ಕೆಲಸವನ್ನು ಯಾವಾಗ ನಿಲ್ಲಿಸುತ್ತೀರಿ’ ಎಂದು ನ್ಯಾಶನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಶನಿವಾರ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.
‘ಈಗಾಗಲೇ ದೇಶವನ್ನು ಇಬ್ಭಾಗ ಮಾಡಿ ಒಂದು ಪಾಕಿಸ್ತಾನ ನಿರ್ಮಿಸಿಯಾಗಿದೆ. ಇನ್ನೂ ಎಷ್ಟು ಪಾಕಿಸ್ತಾನಗಳನ್ನು ನಿರ್ಮಿಸಬೇಕು ಎಂದುಕೊಂಡಿದ್ದೀರಿ?’ ಎಂದು ಅವರು ಸಮಾರಂಭವೊಂದರಲ್ಲಿ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
‘ಹೌದು, ಪಾಕ್ ಆಕ್ರಮಿತ ಕಾಶ್ಮೀರ ಪಾಕಿಸ್ತಾನಕ್ಕೆ ಸೇರಿದ್ದು ಎಂದು ನಾನು ಹೇಳಿದ್ದು ನಿಜ. ಪಾಕಿಸ್ತಾನದವರು ಏನು ಬಳೆ ತೊಟ್ಟಿದ್ದಾರೆಯೇ. ಅವರ ಬಳಿಯೂ ಅಣುಬಾಂಬ್ಗಳಿವೆ ಎನ್ನುವುದು ಗೊತ್ತಿರಲಿ. ಅವುಗಳಿಗೆ ನಮ್ಮನ್ನು ಬಲಿ ಕೊಡಬೇಡಿ. ಅರಮನೆಗಳಲ್ಲಿ ಹಾಯಾಗಿರುವ ನೀವು ಎಂದಾದರೂ ಗಡಿಯಲ್ಲಿರುವ ಬಡವರು, ಜನಸಾಮಾನ್ಯರ ಬಗ್ಗೆ ಯೋಚಿಸಿದ್ದೀರಾ? ಅವರು ಪ್ರತಿ ನಿತ್ಯವೂ ಬಾಂಬ್ಗಳನ್ನು ಎದುರಿಸಿ ಬದುಕುತ್ತಿದ್ದಾರೆ’ ಎಂದು ಫಾರೂಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಉತ್ತರ ಪ್ರದೇಶದಲ್ಲಿ ಬಿಜೆಪಿ ನಾಯಕರೊಬ್ಬರು ತಮ್ಮ ಪಕ್ಷಕ್ಕೆ ಮತ ಹಾಕುವಂತೆ ಮುಸ್ಲಿಮರಿಗೆ ಬಹಿರಂಗವಾಗಿ ಬೆದರಿಕೆ ಹಾಕಿದ್ದಾರೆ. ದೇಶ ಎಲ್ಲ ಧರ್ಮದವರಿಗೂ ಸೇರಿದ್ದು. ತಮಗೆ ಇಷ್ಟದ ಪಕ್ಷಕ್ಕೆ ಮತ ಹಾಕುವ ಸ್ವಾತಂತ್ರ್ಯ ಮತ್ತು ಸಂವಿಧಾನದತ್ತ ಹಕ್ಕು ಅವರಿಗಿದೆ. ಯಾರ ಮೇಲಾದರೂ ಒತ್ತಡ ಹೇರುವುದು, ಬೆದರಿಕೆ ಒಡ್ಡುವುದು ಎಷ್ಟು ಸರಿ’ ಎಂದು ಅವರು ಪ್ರಶ್ನಿಸಿದ್ದಾರೆ.
**
ಫಾರೂಕ್, ರಿಷಿ ಕಪೂರ್ ವಿರುದ್ಧ ದೂರು
ಜಮ್ಮು: ಪಾಕ್ ಆಕ್ರಮಿತ ಕಾಶ್ಮೀರ ಪಾಕಿಸ್ತಾನಕ್ಕೆ ಸೇರಿದ್ದು ಎಂಬ ಹೇಳಿಕೆ ಸಂಬಂಧ ನ್ಯಾಶನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಮತ್ತು ಅವರ ಅಭಿಪ್ರಾಯ ಬೆಂಬಲಿಸಿದ್ದ ಬಾಲಿವುಡ್ ನಟ ರಿಷಿ ಕಪೂರ್ ಅವರ ವಿರುದ್ಧ ದೂರು ದಾಖಲಾಗಿದೆ.
ಸಾಮಾಜಿಕ ಕಾರ್ಯಕರ್ತ ಸುಕೇಶ್ ಖಜುರಿಯಾ ಎಂಬುವವರು ಈ ದೂರು ನೀಡಿದ್ದಾರೆ. ಇಬ್ಬರ ವಿರುದ್ಧ ‘ದೇಶದ್ರೋಹ’ ಪ್ರಕರಣ ದಾಖಲಿಸಿಕೊಳ್ಳುವಂತೆಯೂ ಅವರು ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.