ADVERTISEMENT

ಇಸ್ಲಾಂ ಧರ್ಮಕ್ಕೆ 6 ತಿಂಗಳಲ್ಲಿ ಮತಾಂತರವಾಗಿ, ಇಲ್ಲವೇ ಕೈಕಾಲು ಕಳೆದುಕೊಳ್ಳಲು ಸಿದ್ಧರಾಗಿ: ಕೇರಳ ಲೇಖಕರಿಗೆ ಬೆದರಿಕೆ ಪತ್ರ

ಏಜೆನ್ಸೀಸ್
Published 22 ಜುಲೈ 2017, 9:10 IST
Last Updated 22 ಜುಲೈ 2017, 9:10 IST
ಇಸ್ಲಾಂ ಧರ್ಮಕ್ಕೆ 6 ತಿಂಗಳಲ್ಲಿ ಮತಾಂತರವಾಗಿ, ಇಲ್ಲವೇ ಕೈಕಾಲು ಕಳೆದುಕೊಳ್ಳಲು ಸಿದ್ಧರಾಗಿ: ಕೇರಳ ಲೇಖಕರಿಗೆ ಬೆದರಿಕೆ ಪತ್ರ
ಇಸ್ಲಾಂ ಧರ್ಮಕ್ಕೆ 6 ತಿಂಗಳಲ್ಲಿ ಮತಾಂತರವಾಗಿ, ಇಲ್ಲವೇ ಕೈಕಾಲು ಕಳೆದುಕೊಳ್ಳಲು ಸಿದ್ಧರಾಗಿ: ಕೇರಳ ಲೇಖಕರಿಗೆ ಬೆದರಿಕೆ ಪತ್ರ   

ತಿರುವನಂತಪುರಂ: ‘ಆರು ತಿಂಗಳಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರವಾಗಬೇಕು. ಇಲ್ಲವಾದರೆ ಕೈಕಾಲು ಕಳೆದುಕೊಳ್ಳಲು ಸಿದ್ಧನಾಗಿರು’ ಎಂದು ಮಲಯಾಳಂ ಖ್ಯಾತ ಲೇಖಕ ಕೆ.ಪಿ.ರಾಮನುಣ್ಣಿ ಅವರಿಗೆ ಪತ್ರ ಮುಖೇನ ಬೆದರಿಕೆಯೊಡ್ಡಲಾಗಿದೆ.

ಮಲ್ಲಾಪುರಂನ ಮಂಜೇರಿಯಿಂದ ರವಾನೆಯಾಗಿರು ಪತ್ರದಲ್ಲಿ ಲೇಖಕ ರಾಮನುಣ್ಣಿಗೆ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಾಯಿಸಲಾಗಿದೆ. 6 ತಿಂಗಳಲ್ಲಿ ಇಸ್ಲಾಂ ಧರ್ಮವನ್ನು ಒಪ್ಪಿಕೊಳ್ಳದಿದ್ದರೆ ಬಲಗೈ ಹಾಗೂ ಎಡಗಾಲು ಕಳೆದುಕೊಳ್ಳಬೇಕಾಗುತ್ತದೆ ಎಂದು ಬೆದರಿಕೆ ಸಂದೇಶ ಕಳುಹಿಸಲಾಗಿದೆ.

ಈ ಕುರಿತು ಕೋಝಿಕೋಡ್‌ ನಗರ ಪೊಲೀಸ್‌ ಆಯುಕ್ತರಲ್ಲಿ ರಾಮನುಣ್ಣಿ ಶುಕ್ರವಾರ ದೂರು ದಾಖಲಿಸಿದ್ದಾರೆ.

ADVERTISEMENT

‘ಇತ್ತೀಚೆಗೆ ಬರೆದಿರುವ ಲೇಖನಗಳು ಮುಸ್ಲಿಂ ಯುವಕರ ಹಾದಿ ತಪ್ಪಿಸುವಂತಿದೆ. ಮುಸ್ಲಿಮರ ಧಾರ್ಮಿಕತೆಗೆ ಧಕ್ಕೆ ಉಂಟಾಗುವಂತೆ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿದ್ದ ಪ್ರೊ.ಟಿ.ಜೆ.ಜೋಸೆಫ್‌ ಬಲಗೈ ಕಳೆದುಕೊಂಡಂತೆ ನಿಮ್ಮಗತಿಯೂ ಆಗಲಿದೆ. ಜತೆಗೆ ಎಡಗಾಲನ್ನೂ ಕಳೆದುಕೊಳ್ಳುವಿರಿ’ ಎಂದು ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ ಎಂದು ರಾಮನುಣ್ಣಿ ತಿಳಿಸಿದ್ದಾರೆ.

ರಾಮನುಣ್ಣಿ ಅವರ ಮುಸ್ಲಿಂ ಯುವಕ ಹಾಗೂ ಹಿಂದು ಯುವತಿ ನಡುವಿನ ಪ್ರೇಮ ಕಥೆಯನ್ನು ಒಳಗೊಂಡ ‘ಸೂಫಿ ಪರಂಜ ಕಥಾ’ ಕಾದಂಬರಿಯು ಸಿನಿಮಾ ಆಗಿದೆ. ಕಾದಂಬರಿಗಾರ, ಸಣ್ಣಕಥೆಗಾರನಾಗಿ ಗುರುತಿಸಿಕೊಂಡಿರುವ ಇವರಿಗೆ ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗೂ ವಯಲಾರ್‌ ಪ್ರಶಸ್ತಿಗಳು ಸಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.