ನವದೆಹಲಿ(ಐಎಎನ್ಎಸ್): ಲೋಕಸಭೆ ಚುನಾವಣೆಗೆ ಎರಡನೇ ಹಂತದಲ್ಲಿ ಅರುಣಾಚಲ ಪ್ರದೇಶ, ಮಣಿಪುರ, ಮೇಘಾಲಯ, ಮಿಜೋರಾಂ ಮತ್ತು ನಾಗಾಲ್ಯಾಂಡ್ ರಾಜ್ಯಗಳ ಏಳು ಕ್ಷೇತ್ರಗಳಲ್ಲಿ ಬುಧವಾರ ಮತದಾನ ನಡೆಯಲಿದೆ.
ಅರುಣಾಚಲ ಪ್ರದೇಶ ವಿಧಾನಸಭೆಗೆ ಏ. 9ರಂದು ಮತದಾನ ನಡೆಯಲಿದೆ. ವಿಧಾನಸಭೆಯ 60 ಕ್ಷೇತ್ರಗಳ ಪೈಕಿ 11 ಕ್ಷೇತ್ರಗಳಿಗೆ ಅವಿರೋಧ ಆಯ್ಕೆ ನಡೆದಿದೆ. ಅವಿರೋಧ ಆಯ್ಕೆಯಾಗಿರುವವರಲ್ಲಿ ಮುಖ್ಯಮಂತ್ರಿ ನಬಮ್ ಟುಕಿ ಸೇರಿದ್ದಾರೆ.ಅರುಣಾಚಲ ಪ್ರದೇಶದಲ್ಲಿ ಒಟ್ಟು 7,59,498 ಮತದಾರರು ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಲಿದ್ದಾರೆ.
ನಾಗಾಲ್ಯಾಂಡ್ನಲ್ಲಿ ಲೋಕಸಭೆ ಚುನಾವಣೆಗಾಗಿ 2,059 ಮತಗಟ್ಟೆಗಳನ್ನು ತೆರೆಯಲಾಗಿದ್ದು, ಮುಖ್ಯಮಂತ್ರಿ ನೆಯಿಪ್ಯು ರಿಯೊ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಮಣಿಪುರದಲ್ಲಿ ಎರಡು ಸ್ಥಾನಗಳಿಗೆ ಏ. 9 ಮತ್ತು 17ರಂದು ಮತದಾನ ನಡೆಯಲಿದೆ. 899626 ಮತದಾರರು ಮತದಾನ ಮಾಡಲು ಅರ್ಹತೆ ಪಡೆದಿದ್ದಾರೆ. ಮಿಜೋರಾಂನಲ್ಲಿ 7,02189 ಮತದಾರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ರಾಜ್ಯದಾದ್ಯಂತ ಒಟ್ಟು 1129 ಮತಗಟ್ಟೆಗಳನ್ನು ತೆರೆಯಲಾಗಿದೆ.
ಶಾಂತಿಯುತ ಮತದಾನಕ್ಕಾಗಿ ಈ ಐದು ರಾಜ್ಯಗಳಲ್ಲಿ ಬಿಗಿ ಭದ್ರತೆ ಮಾಡಲಾಗಿದೆ. ಗಡಿ ಭದ್ರತಾ ಪಡೆ, ಕೇಂದ್ರೀಯ ಮೀಸಲು ಪೊಲೀಸ್ ಪಡೆ ಮತ್ತು ಅಸ್ಸಾಂ ರೈಫಲ್ಸ್ ಪಡೆಯ ಯೋಧರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ ಎಂದು ಚುನಾವಣಾ ಆಯೋಗದ ಅಧಿಕಾರಿ ತಿಳಿಸಿದ್ದಾರೆ.
‘ಚುನಾವಣಾ ಕಾರ್ಯಕ್ಕೆ ಹೆಲಿಕಾಪ್ಟರ್ಗಳನ್ನು ಬಳಸಲಾಗಿದೆ. ಸಂಚಾರಿ ಕಣ್ಗಾವಲು ಪಡೆ ಚುನಾವಣಾ ಕಾರ್ಯದ ಮೇಲ್ವಿಚಾರಣೆ ನಡೆಸುತ್ತಿದೆ’ ಎಂದು ಅವರು ಹೇಳಿದ್ದಾರೆ.
ಮತಗಟ್ಟೆಗೆ ತೆರಳಿದ ಸಿಬ್ಬಂದಿ ತಂಡ ಐಜಾಲ್ ವರದಿ: ಸರ್ಕಾರೇತರ ಸೇವಾ ಸಂಸ್ಥೆಗಳ ಸಮನ್ವಯ ಸಮಿತಿ 72 ಗಂಟೆಗಳ ಮಿಜೋರಾಂ ಬಂದ್ಗೆ ಕರೆ ನೀಡಿದ್ದರೂ ಮಿಜೋರಾಂನ ಏಕೈಕ ಲೋಕಸಭಾ ಸ್ಥಾನದ ಚುನಾವಣೆ ನಡೆಸಲು 157 ಮತಗಟ್ಟೆ ಸಿಬ್ಬಂದಿಯ ತಂಡಗಳು ತಮಗೆ ನಿಗದಿಪಡಿಸಿದ ಮತಗಟ್ಟೆಗಳಿಗೆ ತೆರಳಿವೆ. ತ್ರಿಪುರಾದಲ್ಲಿಯ ಆರು ನಿರಾಶ್ರಿತರ ಶಿಬಿರಗಳಲ್ಲಿ 11 ಸಾವಿರ ಜನರಿಗೆ ಅಂಚೆ ಮತದಾನಕ್ಕೆ ಅವಕಾಶ ಮಾಡಿಕೊಟ್ಟಿರುವ ಚುನಾವಣಾ ಆಯೋಗದ ಕ್ರಮವನ್ನು ಪ್ರತಿಭಟಿಸಿ ಸರ್ಕಾರೇತರ ಸೇವಾ ಸಂಸ್ಥೆಗಳ ಸಮನ್ವಯ ಸಮಿತಿಯು ಬಂದ್ಗೆ ಕರೆ ನೀಡಿದೆ.
ಬಹಿರಂಗ ಪ್ರಚಾರ ನಾಳೆ ಕೊನೆ
ಮುಂಬೈ ವರದಿ: ವಿದರ್ಭದ ಹತ್ತು ಲೋಕಸಭಾ ಕ್ಷೇತ್ರಕ್ಕೆ ಏ. 10ರಂದು ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಬಹಿರಂಗ ಪ್ರಚಾರಕ್ಕೆ ಮಂಗಳವಾರ ತೆರೆ ಬೀಳಲಿದೆ.10 ಕ್ಷೇತ್ರಗಳಿಗೆ 201 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. 1,21,75, 662 ಮಂದಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.