ADVERTISEMENT

ಎಸ್ಐ ಹುದ್ದೆ ಆಮಿಷ, ವಂಚನೆ: ನಾಲ್ವರು ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2015, 19:30 IST
Last Updated 27 ಮಾರ್ಚ್ 2015, 19:30 IST

ಗದಗ: ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್‌ ಹುದ್ದೆ ಕೊಡಿಸುವುದಾಗಿ ಅಭ್ಯರ್ಥಿಗ ಳಿಂದ ಹಣ ಪಡೆದು ವಂಚಿಸಿದ್ದ ನಾಲ್ವರು ಆರೋಪಿಗಳನ್ನು ಜಿಲ್ಲಾ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಮೈಸೂರು ಜಿಲ್ಲೆಯ ಎಚ್‌.ಡಿ. ಕೋಟೆ ತಾಲ್ಲೂಕಿನ ಸರಗೂರಿನ ಎಸ್‌.ವಿ. ವೆಂಕಟೇಶ, ಗದಗ ಜಿಲ್ಲೆ ರೋಣ ತಾಲ್ಲೂಕಿನ ಹೊಳೆಮಣ್ಣೂರು ಗ್ರಾಮದ ದತ್ತಾತ್ರೇಯ ಜಿ.ಪಾಟೀಲ, ಕುಂಟೋಜಿ ಗ್ರಾಮದ ಶರಣಪ್ಪ ಟಿ.ಕತ್ತಿ ಹಾಗೂ ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಮದನ ತಾಂಡಾದ ರಾಮದಾಸ್‌ ಟಿ. ನಾಯ್ಕ ಎಂಬುವರನ್ನು ಬಂಧಿಸಿ, ₨17 ಲಕ್ಷ ನಗದು, ಐದು ಮೊಬೈಲ್‌ ಸೆಟ್‌ಗಳು, ಕಾರು, ಚೆಕ್‌ಗಳನ್ನು ವಶಪಡಿಸಿಕೊಳ್ಳ ಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಟಿ.ಬಾಲಕೃಷ್ಣ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

‘ಬೆಂಗಳೂರಿನಲ್ಲಿರುವ ಪರಿಚಯಸ್ಥರ ಮೂಲಕ ಸಬ್‌ಇನ್ಸ್‌ಪೆಕ್ಟರ್‌ ಕೆಲಸ ಕೊಡಿಸುವುದಾಗಿ ಶರಣಪ್ಪ ಎಂಬಾತ ರಾಯಚೂರಿನ ಸಿಂಧನೂರ ತಾಲ್ಲೂಕಿನ ಮಲ್ಲಪ್ಪ ಎಂಬುವರಿಗೆ ₨ 35 ಲಕ್ಷ ಕೊಡುವಂತೆ ಕೇಳಿದ್ದ. ನಂತರ  ₨ 15 ಲಕ್ಷ ಮುಂಗಡ ನೀಡುವಂತೆ ಒತ್ತಾಯಿಸ ತೊಡಗಿದ್ದ. ಇದರಿಂದ ಅನುಮಾನ ಗೊಂಡ ಮಲ್ಲಪ್ಪ, ಪೊಲೀಸರಿಗೆ ದೂರು ನೀಡಿದರು. ಅವರ ಬಳಿ ಅಷ್ಟು ಹಣ ಇಲ್ಲದಿದ್ದರಿಂದ ಪೊಲೀಸರು ಮೇಲ್ಗಡೆ ಅಸಲಿ ಮತ್ತು ಒಳಗಡೆ ನಕಲಿ ನೋಟು ಗಳುಳ್ಳ ₨ 15 ಲಕ್ಷ ಮೊತ್ತದ ಬಂಡಲ್‌ ಮಾಡಿಕೊಂಡು, ಶರಣಪ್ಪ ಜತೆ ಬೆಂಗಳೂರಿಗೆ ಹೋಗಿ, ಮಧ್ಯವರ್ತಿ ಗಳಾದ ದತ್ತಾತ್ರೇಯ ಮತ್ತು ರಾಮದಾಸ್‌ ಜತೆ ಮಾತುಕತೆ ನಡೆಸಿ, ಹಣ ಕೊಡುವ ವೇಳೆ ಇಬ್ಬರನ್ನು ಬಂಧಿಸ ಲಾಯಿತು’ ಎಂದು ಅವರು ವಿವರಿಸಿದರು.

‘ಎಸ್‌ಐ ಹುದ್ದೆ ನೇಮಕಾತಿ ಪರೀಕ್ಷೆ ಬರೆದಿದ್ದ ಬಾಗಲಕೋಟೆಯ ಬಸವರಾಜ ಹೂಗಾರ ಅವರಿಂದ ₨ 9 ಲಕ್ಷ ಮತ್ತು ವಿಜಯಪುರದ ಲಾಲ್‌ಸಾಬ್‌ ಯಲಿಗಾರ ಅವರಿಂದ ₨ 8 ಲಕ್ಷ ಪಡೆದು, ಸಾಮಾ ಜಿಕ ಕಾರ್ಯಕರ್ತ ಬೆಂಗಳೂರಿನ ಎಸ್‌.ವಿ. ವೆಂಕಟೇಶ್‌ಗೆ ನೀಡಿರುವುದಾಗಿ ಆರೋಪಿಗಳಿಬ್ಬರು ವಿಚಾರಣೆ ವೇಳೆ ಒಪ್ಪಿ ಕೊಂಡಿದ್ದಾರೆ’ ಎಂದರು.
‘ಎಸ್‌ಐ ಹುದ್ದೆಗಳ ನೇಮಕಾತಿ ಪಾರ ದರ್ಶಕವಾಗಿ ನಡೆಯುತ್ತಿದ್ದು, ಅಭ್ಯರ್ಥಿ ಗಳು ಯಾರಿಗೂ ಹಣ ನೀಡ ಬಾ ರದು’ ಎಂದು ಅವರು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.