ಉದಕಮಂಡಲ: ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಸತ್ಯರಾಜ್ ಸೇರಿದಂತೆ ಒಟ್ಟು ಎಂಟು ಜನ ತಮಿಳು ನಟರ ವಿರುದ್ಧ ಇಲ್ಲಿನ(ಊಟಿ) ಮ್ಯಾಜಿಸ್ಟ್ರೇಟ್ ಕೋರ್ಟ್ ಜಾಮೀನು ರಹಿತ ಬಂಧನಕ್ಕೆ ಆದೇಶ ಹೊರಡಿಸಿದೆ.
2009ರ ಅಕ್ಟೋಬರ್ 7ರಂದು ಚೆನ್ನೈನಲ್ಲಿ ನಡೆದಿದ್ದ ದಕ್ಷಿಣ ಭಾರತ ಸಿನಿಮಾ ನಟರ ಸಂಘದ ಸಭೆಯ ವೇಳೆ ಶಿಕ್ಷೆಯ ಆದೇಶಕ್ಕೆ ಗುರಿಯಾಗಿರುವ ನಟರು ತಮ್ಮ ಭಾಷಣದಲ್ಲಿ, ತಮಿಳು ಪತ್ರಿಕೆಯೊಂದರಲ್ಲಿ ನಟರ ಬಗ್ಗೆ ಕೀಳು ಮಟ್ಟದ ಲೇಖನವನ್ನು ಪ್ರಕಟಿಸಲಾಗಿದೆ ಎಂದು ಆರೋಪಿಸಿ ಹರಿಹಾಯ್ದಿದ್ದರು.
ಈ ಕುರಿತು ಪತ್ರಕರ್ತ ಎಮ್.ರೊಜಾರಿಯೋ ಅವರು, ‘ತಮ್ಮ ಬಗ್ಗೆ ಕೀಳಾಗಿ ಬರೆಯಲಾಗಿದೆ ಎನ್ನಲಾದ ನಿರ್ದಿಷ್ಟ ಪತ್ರಿಕೆಯನ್ನು ದೂರುವ ಬದಲು, ಚಿತ್ರ ನಟರು ಎಲ್ಲಾ ಪತ್ರಕರ್ತರನ್ನೂ ಗುರಿಮಾಡಿ ಸಭೆಯಲ್ಲಿ ಅವಹೇಳನ ಮಾಡಿದ್ದಾರೆ’ ಎಂದು ಉಲ್ಲೇಖಿಸಿ ಊಟಿ ಮ್ಯಾಜಿಸ್ಟ್ರೇಟ್ ಕೋರ್ಟ್ನಲ್ಲಿ ದೂರು ದಾಖಲಿಸಿದ್ದರು.
(ಸೂರ್ಯ, ಶರತ್ಕುಮಾರ್)
ಹೀಗಾಗಿ ಪ್ರಕರಣ ಸಂಬಂಧ ನಟ ಸೂರ್ಯ, ಸತ್ಯರಾಜ್, ಶರತ್ಕುಮಾರ್, ಸುಪ್ರಿಯಾ, ವಿಜಯ್ ಕುಮಾರ್, ಅರುಣ್ ವಿಜಯ್, ವಿವೇಕ್ ಹಾಗೂ ಚೇರನ್ಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ 2011ರ ಡಿಸೆಂಬರ್ 19ರಂದು ನ್ಯಾಯಾಲಯ ಸೂಚಿಸಿತ್ತು.
ಕೋರ್ಟ್ಗೆ ಹಾಜರಾಗಲು ನಿರಾಕರಿಸಿದ ಅವರು ತಾವು ನೇರವಾಗಿ ಕೋರ್ಟ್ಗೆ ಹಾಜರಾಗದೆ ವಿಚಾರಣೆಯಲ್ಲಿ ಭಾಗವಹಿಸಲು ಅವಕಾಶ ಕೇಳಿ ಮದ್ರಾಸ್ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಕೋರ್ಟ್ ಅವರ ಅರ್ಜಿಯನ್ನು ವಜಾ ಮಾಡಿತ್ತು.
ಬಳಿಕ 2017ರ ಮೇ 15ರಂದು ಪ್ರಕರಣದ ವಿಚಾರಣೆ ಮತ್ತೆ ಆರಂಭವಾಗಿತ್ತು. ಪುನಃ ನ್ಯಾಯಾಲಯಕ್ಕೆ ಯಾರೊಬ್ಬರೂ ಹಾಜರಾಗಿರಲಿಲ್ಲ. ಹಾಗಾಗಿ ನ್ಯಾಯಾಧೀಶ ಸೆಂಥಿಲ್ಕುಮಾರ್ ರಾಜವೇಲ್ ಎಲ್ಲಾ ಎಂಟು ನಟರ ವಿರುದ್ಧ ಮಂಗಳವಾರ ಜಾಮೀನು ರಹಿತ ಬಂಧನಕ್ಕೆ ಆದೇಶ ಹೊರಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.