ADVERTISEMENT

ಕಪ್ಪುಹಣ: ಜೇಟ್ಲಿಗೆ ಕಾಂಗ್ರೆಸ್‌ ಸವಾಲು

ಸಂಪೂರ್ಣ ಮಾಹಿತಿ ಬಹಿರಂಗಗೊಳಿಸಿ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2014, 11:04 IST
Last Updated 23 ಅಕ್ಟೋಬರ್ 2014, 11:04 IST

ನವದೆಹಲಿ (ಪಿಟಿಐ): ಅಕ್ರಮ ವಿದೇಶಿ ಖಾತೆಗಳನ್ನು ಹೊಂದಿದವರ ಪಟ್ಟಿಯಲ್ಲಿರುವ ಹೆಸರುಗಳನ್ನು ಬಹಿರಂಗ ಪಡಿಸಿದರೆ ವಿರೋಧ ಪಕ್ಷಕ್ಕೆ ಮುಜುಗರವಾಗಲಿದೆ ಎಂಬ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ಟೀಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ‘ಅರ್ಧ ಸತ್ಯ’ ಹಾಗೂ ‘ಆಯ್ಕೆ ಸೋರಿಕೆ’ಯ ಬದಲಿಗೆ ಸಂಪೂರ್ಣ ಮಾಹಿತಿಯನ್ನು ಬಹಿರಂಗ ಪಡಿಸುವಂತೆ ಸವಾಲು ಹಾಕಿದೆ.

‘ಯಾವುದೇ ಬೆದರಿಕೆಗಳ ಮೂಲಕ ಕಾಂಗ್ರೆಸ್್ ಬ್ಲ್ಯಾಕ್‌ಮೇಲ್‌ ಮಾಡುತ್ತಿಲ್ಲ. ಕಾಂಗ್ರೆಸ್‌ ಪಕ್ಷವು ವೈಯಕ್ತಿಕ ವ್ಯಕ್ತಿಗಳಿಗಿಂತಲೂ ಎತ್ತರದಲ್ಲಿದೆ. ಇದರಲ್ಲಿ ಪಾಲ್ಗೊಂಡವರು ಯಾರೆ ಆಗಿರಲಿ ಅವರ ವಿರುದ್ಧ ಸಾಧ್ಯವಿರುವ ಕಠಿಣ ಕ್ರಮ ಜರುಗಿಸಬೇಕು. ಆದರೆ ಅದು ತೇಜೋವಧೆ ಹಾಗೂ ಅರ್ಧ ಸತ್ಯ ಆಗಿರಬಾರದು’ ಎಂದು ಎಐಸಿಸಿ ಸಂವಹನ ವಿಭಾಗದ ಮುಖ್ಯಸ್ಥ ಅಜಯ್‌ ಮಾಕೇನ್‌ ಅವರು ಸುದ್ದಿಗಾರರಿಗೆ ತಿಳಿಸಿದರು.

ಕಪ್ಪುಹಣ ವಿವಾದವು ಆಡಳಿತಾರೂಢ ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್‌  ನಡುವೆ ಆರೋಪ–ಪ್ರತ್ಯಾರೋಪಗಳಿಗೆ ಗ್ರಾಸ ಒದಗಿಸಿದೆ.

ADVERTISEMENT

ಯುಪಿಎ ಸರ್ಕಾರ ಈ ಹಿಂದೆ ತೆಗೆದುಕೊಂಡಂತೆ ಸ್ವೀಸ್‌ ಬ್ಯಾಂಕ್‌ ಖಾತೆದಾರರ ಹೆಸರನ್ನು ಬಹಿರಂಗ ಪಡಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರ ಇತ್ತೀಚೆಗೆ ಹೇಳಿತ್ತು. ಆದರೆ, ಕಪ್ಪು ಹಣದ ವಿಷಯವಾಗಿ ಬಿಜೆಪಿ ಸರ್ಕಾರವು ‘ಬೂಟಾಟಿಕೆಯಲ್ಲಿ ತೊಡಗಿದೆ’ ಎಂದು ಕಾಂಗ್ರೆಸ್ ಆರೋಪಿಸಿತ್ತು.

ಇದಕ್ಕೆ ಪ್ರತಿಕ್ರಿಯಿಸಿದ್ದ ಜೇಟ್ಲಿ, ‘ಕಪ್ಪು ಹಣದ ಪಟ್ಟಿಯಲ್ಲಿರುವ ಹೆಸರುಗಳನ್ನು ಶೀಘ್ರವೇ ಬಹಿರಂಗ ಪಡಿಸಲಾಗುವುದು. ಎಲ್ಲಾ ಹೆಸರುಗಳನ್ನು ಬಹಿರಂಗ ಪಡಿಸಿದ ಬಳಿಕ ನನಗೇನೂ (ಬಿಜೆಪಿ) ಮುಜುಗರವಾಗದು. ಆದರೆ ಆ ಹೆಸರುಗಳಿಂದ ಕಾಂಗ್ರೆಸ್‌ ಪಕ್ಷಕ್ಕೆ  ಸ್ವಲ್ಪ ಮುಜುಗರವಾಗಲಿದೆ’ ಎಂದು ತಿರುಗೇಟು ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.