ADVERTISEMENT

ಕಪ್ಪು ಹಣ ವಾಪಸ್: ಬಿಜೆಪಿ ಭರವಸೆ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2014, 10:14 IST
Last Updated 25 ನವೆಂಬರ್ 2014, 10:14 IST

ನವದೆಹಲಿ(ಪಿಟಿಐ): ಕಪ್ಪು ಹಣ ವಾಪಸ್ ತರಿಸುವ ಕುರಿತು ವಿರೋಧ ಪಕ್ಷಗಳು ಸಂಸತ್ ನಲ್ಲಿ ಧ್ವನಿ ಎತ್ತಿದ್ದು, ಕಪ್ಪು ಹಣ ವಾಪಸ್ ತರುವ ಮೂಲಕ ತಾನು ನೀಡಿದ್ದ ಮಾತನ್ನು ಉಳಿಸಿಕೊಳ್ಳುವುದಾಗಿ ಆಡಳಿತಾರೂಢ ಬಿಜೆಪಿ ಪಕ್ಷ ಮತ್ತೊಮ್ಮೆ ಭರವಸೆ ನೀಡಿದೆ.

ಚಳಿಗಾಲದ ಸಂಸತ್ ಅಧಿವೇಶನದ ಮೊದಲ ಕಾರ್ಯ ನಿರ್ವಹಣೆ ದಿನ ಮಂಗಳವಾರ ವಿರೋಧ ಪಕ್ಷ ತೃಣಮೂಲ ಕಾಂಗ್ರೆಸ್ ಸದಸ್ಯರು ಸದನದಲ್ಲಿ ‘ಕಪ್ಪು ಕೊಡೆ’ ಪ್ರದರ್ಶಿಸಿ ‘ಕಪ್ಪು ಹಣ ವಾಪಸ್ ತರಿಸಿ’ ಎಂದು ಘೋಷಣೆ ಕೂಗಿದರು.

ತೃಣಮೂಲ ಕಾಂಗ್ರೆಸ್ ಈ ಕುರಿತು ಧ್ವನಿ ಎತ್ತುತ್ತಿದ್ದಂತೆ ಕಾಂಗ್ರೆಸ್, ಆರ್ ಜೆಡಿ, ಎಎಪಿ ಹಾಗೂ ಸಮಾಜವಾದಿ ಪಾರ್ಟಿಯ ಸದಸ್ಯರು ಘೋಷಣೆ ಕೂಗಿ ಧ್ವನಿಗೂಡಿಸಿದರು. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಕ್ರಿಯಿಸಬೇಕು ಎಂದು ಒತ್ತಾಯಿಸಿದರು.

ಸ್ಪೀಕರ್ ಸುಮಿತ್ರಾ ಮಹಾಜನ್ ಅವರು, ಸದನದಲ್ಲಿ ಕಪ್ಪು ಕೊಡೆ ಪ್ರದರ್ಶಿಸಿ, ಘೋಷಣೆ ಕೂಗಿದ ಸದಸ್ಯರಿಗೆ ಎಚ್ಚರಿಕೆ ನೀಡಿದರು.
ಪ್ರಶ್ನೋತ್ತರ ವೇಳೆಯಲ್ಲಿ ಕಪ್ಪು ಹಣ ಕುರಿತು ಸ್ಪೀಕರ್ ಅವರು ಅವಕಾಶ ಮಾಡಿಕೊಡದೇ ಇರುವ ಕ್ರಮಕ್ಕೆ ವಿರೋಧ ಪಕ್ಷದ ಮುಖಂಡ ಮಲ್ಲಿಕಾರ್ಜುನ ಖರ್ಗೆ ಹಾಗೂ ಮುಲಾಯಂ ಸಿಂಗ್ ಯಾದವ್ ಅವರು ಆಕ್ಷೇಪಿಸಿದರು. ಈ ವೇಳೆ ಸ್ಪೀಕರ್, ಕಪ್ಪು ಹಣ ಕುರಿತು ಚರ್ಚಿಸಲು ಮುಂದೆ ಅವಕಾಶ ಮಾಡಿಕೊಡುವುದಾಗಿ ಸದನಕ್ಕೆ ತಿಳಿಸಿದರು.

ಸದನಲ್ಲಿ ಕಪ್ಪು ಹಣ ಕುರಿತು ಪರಸ್ಪರ ಮಾತು ನಡೆಯುತ್ತಿದ್ದಂತೆ 40 ನಿಮಿಷ ಕಾಲ ಸದನದ ಕಲಾಪವನ್ನು ಮುಂದೂಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.