ADVERTISEMENT

ಕಾಂಗ್ರೆಸ್‌ ಉಸ್ತುವಾರಿ ಬದಲು

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2017, 19:30 IST
Last Updated 29 ಏಪ್ರಿಲ್ 2017, 19:30 IST
ವೇಣುಗೋಪಾಲ್‌
ವೇಣುಗೋಪಾಲ್‌   

ನವದೆಹಲಿ: ಕೇರಳದ ಆಲಪ್ಪುಳ ಕ್ಷೇತ್ರದ ಸಂಸದ ಕೆ.ಸಿ. ವೇಣುಗೋಪಾಲ್‌ ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಿರುವ ಎಐಸಿಸಿ, ಕರ್ನಾಟಕದ ಉಸ್ತುವಾರಿಯ ಜವಾಬ್ದಾರಿಯನ್ನೂ ನೀಡಿದೆ.

ಕರ್ನಾಟಕ ಮತ್ತು ಗೋವಾ ಉಸ್ತುವಾರಿಯಾಗಿದ್ದ ದಿಗ್ವಿಜಯ್‌ ಸಿಂಗ್‌ ಅವರ ಕಾರ್ಯವೈಖರಿಯು ಇತ್ತೀಚೆಗೆ ನಡೆದಿದ್ದ ಪಂಚ ರಾಜ್ಯಗಳ ಚುನಾವಣೆ ನಂತರ ಸಾಕಷ್ಟು ಟೀಕೆಗೆ ಒಳಗಾಗಿದ್ದರಿಂದ ಈ ಬದಲಾವಣೆ ಮಾಡಲಾಗಿದೆ. ಆದರೆ, ಸಿಂಗ್‌ ಅವರಿಗೆ ನೀಡಲಾಗಿರುವ ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳ ಉಸ್ತುವಾರಿಯನ್ನು ಮುಂದುವರಿಸಲಾಗಿದೆ.

ಪಕ್ಷವು ಗೋವಾದಲ್ಲಿ ಅಧಿಕಾರದ ಹತ್ತಿರ ಬಂದರೂ ಸರ್ಕಾರ ರಚಿಸುವಲ್ಲಿ ವಿಫಲರಾಗಿದ್ದ ಸಿಂಗ್‌ ಅವರನ್ನು ಬದಲಿಸಿ ಅಲ್ಲಿನ ಉಸ್ತುವಾರಿಯನ್ನು ಡಾ.ಎ.ಚಲ್ಲಕುಮಾರ್‌ ಅವರಿಗೆ ವಹಿಸಲಾಗಿದೆ.

ADVERTISEMENT

ಮುಂದಿನ ವರ್ಷ ರಾಜ್ಯ ವಿಧಾನಸಭೆಗೆ ನಡೆಯಲಿರುವ ಚುನಾವಣೆಗೆ ಪಕ್ಷವನ್ನು ಸನ್ನದ್ಧಗೊಳಿಸಲು ಈ ಕ್ರಮ ಕೈಗೊಂಡಿರುವ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಶೀಘ್ರವೇ ಕೆಪಿಸಿಸಿ ಅಧ್ಯಕ್ಷರನ್ನೂ ಬದಲಿಸುವ ಸಾಧ್ಯತೆಗಳಿವೆ.

ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರಿಗೆ ಆಪ್ತರಾಗಿರುವ ವೇಣುಗೋಪಾಲ್‌ ಅವರಿಗೆ ಸಹಾಯಕರನ್ನಾಗಿ ತಮಿಳುನಾಡಿನ ಮಾಣಿಕ್ಯಂ ಟ್ಯಾಗೋರ್‌, ಕೇರಳದ ಪಿ.ಸಿ. ವಿಶ್ವನಾಥ, ತೆಲಂಗಾಣದ ಮಧು ಯಕ್ಷಿ ಗೌಡ ಹಾಗೂ ಆಂಧ್ರದ ಡಾ. ಸಾಕೆ ಶೈಲಜನಾಥ್‌ ಅವರನ್ನು ನೇಮಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.