ADVERTISEMENT

ಕೆಸಿಆರ್‌, ವಿಜಯಶಾಂತಿ ವಿರುದ್ಧ ಸಿಬಿಐ ತನಿಖೆ

ಆದಾಯ ಮೀರಿದ ಆಸ್ತಿ ಪ್ರಕರಣದಲ್ಲಿ ಕೋರ್ಟ್‌ ಆದೇಶ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2014, 19:30 IST
Last Updated 25 ಏಪ್ರಿಲ್ 2014, 19:30 IST

ಹೈದರಾಬಾದ್‌ (ಐಎಎನ್‌ಎಸ್‌): ಟಿಆರ್‌ಎಸ್‌ ಮುಖ್ಯಸ್ಥ ಕೆ. ಚಂದ್ರಶೇಖರ್‌ ರಾವ್‌ (ಕೆಸಿಆರ್‌), ಅವರ ಸೋದರಳಿಯ ಮತ್ತು ಪಕ್ಷದ ಮುಖಂಡ ಟಿ. ಹರೀಶ್‌ ರಾವ್‌, ಮೇಡಕ್‌ ಸಂಸದೆ ಎಂ. ವಿಜಯ­ಶಾಂತಿ ಅವರ ಆಸ್ತಿ ಬಗ್ಗೆ ತನಿಖೆ ನಡೆಸುವಂತೆ ವಿಶೇಷ ನ್ಯಾಯಾಲಯವೊಂದು ಸಿಬಿಐಗೆ ನಿರ್ದೇಶನ ನೀಡಿದೆ.

ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸುವಂತೆ ಸಿಬಿಐ ಪ್ರಕರಣಗಳ ಪ್ರಧಾನ ವಿಶೇಷ ನ್ಯಾಯಾಲಯ  ಶುಕ್ರ­ವಾರ ಸಿಬಿಐನ ಭ್ರಷ್ಟಾಚಾರ ತಡೆ ಘಟಕಕ್ಕೆ ಸೂಚಿಸಿತು.

ಈ ಮೂವರೂ ನಾಯಕರು ಆದಾಯವನ್ನು ಮೀರಿದ ಆಸ್ತಿಯನ್ನು ಹೊಂದಿದ್ದಾರೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ವಕೀಲ ವಿ. ಬಾಲಾಜಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶ ಎನ್‌.ಬಾಲ­ಯೋಗಿ ಈ ನಿರ್ದೇಶನ ನೀಡಿದರು. ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ಹೆಸರಿನಲ್ಲಿ 2001ರಿಂದಲೇ ಟಿಆರ್‌ಎಸ್‌ ನಾಯಕರು ಅಪಾರ ಪ್ರಮಾಣದ ಆಸ್ತಿ ಸಂಗ್ರಹಿಸಿದ್ದಾರೆ ಎಂದು ಬಾಲಾಜಿ ಆರೋಪಿಸಿದ್ದಾರೆ.

ವಿಜಯಶಾಂತಿ ಹಿಂದೆ ಟಿಆರ್‌ಎಸ್‌­ನಲ್ಲಿದ್ದರು. ಈಗ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಮೇಡಕ್‌ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.
ಸಿಬಿಐಯ ಹೈದರಾಬಾದ್‌ ಕಚೇರಿಯು ನ್ಯಾಯಾಲಯದ ಆದೇಶವನ್ನು ಕೇಂದ್ರ ಕಚೇರಿಗೆ ಕಳುಹಿಸಿದೆ. ಸಿಬಿಐ ತನಿಖೆ ನಡೆಸುವಂತೆ ಆದೇಶ ನೀಡುವ ಅಧಿಕಾರ ಸಿಬಿಐ ನ್ಯಾಯಾಲಯಕ್ಕೆ ಇಲ್ಲ. ಹೈಕೋರ್ಟ್‌ ಮಾತ್ರ ಇಂತಹ ಆದೇಶ ನೀಡಲು ಸಾಧ್ಯ ಎಂದು ಮೂಲಗಳು ಹೇಳಿವೆ.

ವಿಲೀನ ಅಥವಾ ಮೈತ್ರಿಗೆ ನಿರಾಕರಿಸಿದ್ದಕ್ಕಾಗಿ ಟಿಆರ್‌ಎಸ್‌ ನಾಯಕರ ವಿರುದ್ಧ ಸಿಬಿಐಯನ್ನು ಕಾಂಗ್ರೆಸ್‌ ಬಳಸಿಕೊಳ್ಳುತ್ತಿದೆ ಎಂದು ಹರೀಶ್‌ ರಾವ್ ಆರೋಪಿಸಿದ್ದಾರೆ. ಏಪ್ರಿಲ್‌ 30ರಂದು ತೆಲಂಗಾಣದಲ್ಲಿ ವಿಧಾನಸಭೆ ಮತ್ತು ಲೋಕಸಭೆಗೆ ಮತದಾನ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.