ನವದೆಹಲಿ/ತಿರುವನಂತಪುರ: ‘ಕೇರಳದ 13 ಮತ್ತು ಕರ್ನಾಟಕದ ಒಂದು ಮಳೆ ಮಾಪನ ಕೇಂದ್ರದಲ್ಲಿ 2 ದಿನಗಳ ಅವಧಿಯಲ್ಲಿ 2.5 ಮಿ.ಮಿ ಮಳೆ ದಾಖಲಾಗಿದೆ. ಇದರ ಆಧಾರದಲ್ಲಿ ಮುಂಗಾರು ಕಾಲಿಟ್ಟಿರುವುದನ್ನು ಘೋಷಿಸಿದ್ದೇವೆ’ ಎಂದು ಭಾರತೀಯ ಹವಾಮಾನ ಇಲಾಖೆಯ (ಐಎಂಡಿ) ಪ್ರಧಾನ ನಿರ್ದೇಶಕ ಎಲ್.ಎಸ್. ರಾಥೋಡ್ ಶುಕ್ರವಾರ ತಿಳಿಸಿದರು.
ಮುಂಗಾರು ಸಂಪೂರ್ಣವಾಗಿ ಕೇರಳವನ್ನು ಆವರಿಸಿಕೊಳ್ಳಲಿದೆ. ಲಕ್ಷದ್ವೀಪದ ಕೆಲವು ಭಾಗಗಳಲ್ಲಿ ಮಳೆಯಾಗಿದೆ. ‘ಕೆಲ ಸಲ ಮುಂಗಾರು ಪ್ರವೇಶದೊಂದಿಗೆ ಭಾರಿ ಮಳೆ ಆರಂಭವಾಗುತ್ತದೆ. ಕೆಲವು ಬಾರಿ ಆರಂಭದಲ್ಲಿ ಸಾಧಾರಣ ಮಳೆಯಾಗಿ ನಂತರ ತೀವ್ರಗೊಳ್ಳುತ್ತದೆ. ಇದು ಸಾಧಾರಣ ಪ್ರಕ್ರಿಯೆ’ ಎಂದು ತಿರುವನಂತಪುರದ ಹವಾಮಾನ ಇಲಾಖೆಯ ಹಿರಿಯ ಅಧಿಕಾರಿ ತಿಳಿಸಿದರು.
ಸೋಮವಾರದವರೆಗೆ ಕೇರಳದ ಹಲವೆಡೆ ಮಳೆಯಾಗಲಿದೆ. ಒಂದೆರಡು ದಿನಗಳಲ್ಲಿ ತೀವ್ರ ಸ್ವರೂಪ ಪಡೆದುಕೊಂಡು ರಾಜ್ಯದಾದ್ಯಂತ ಆವರಿಸಿಕೊಳ್ಳಲಿದೆ. ಕಳೆದ ನಾಲ್ಕು ವರ್ಷಗಳಲ್ಲಿ ದೇಶದಾದ್ಯಂತ ಸಾಧಾರಣ ಮತ್ತು ಸಾಧಾರಣಕ್ಕಿಂತ ಹೆಚ್ಚು ಮಳೆಯಾಗಿದ್ದು, ಈ ಬಾರಿ ಮುಂಗಾರು ಮಳೆ ಸಾಧಾರಣಕ್ಕಿಂತ ಸ್ವಲ್ಪ ಕಡಿಮೆಯಾಗುವ ಸಾಧ್ಯತೆ ಇದೆ. ಶೇ 95ರಷ್ಟು ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಅಂದಾಜಿಸಿದೆ.
ಲಕ್ಷಣಗಳು
ಪಶ್ಚಿಮದಿಂದ ಪ್ರತಿ ಗಂಟೆಗೆ 30ರಿಂದ 40 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವಿಕೆ ಮತ್ತು 48 ಗಂಟೆ ನಿರಂತರವಾಗಿ ಮಳೆ ಸುರಿಯುವುದು ಮುಂಗಾರು ಬಂದಿರುವುದರ ಲಕ್ಷಣಗಳಾಗಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.