ನವದೆಹಲಿ: ‘ಯಾರೂ ಅಜೇಯರಲ್ಲ. ಚುನಾವಣೆಗಳಲ್ಲಿ ನಾವೂ ಸೋಲಬಹುದು ಎಂಬ ಪಾಠವನ್ನು ಗೋರಖಪುರ ಫಲಿತಾಂಶ ನಮಗೆ ಕಲಿಸಿತು’ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಉತ್ತರಪ್ರದೇಶದ ಗೋರಖಪುರ ಫೂಲ್ಪುರ ಲೋಕಸಭಾ ಕ್ಷೇತ್ರಗಳ ಉಪ ಚುನಾವಣೆಗಳಲ್ಲಿ ಸೋತ ಬಳಿಕ ಇದೇ ಮೊದಲ ಬಾರಿಗೆ ಬಿಜೆಪಿಯ ರಾಷ್ಟ್ರೀಯ ನಾಯಕರೊಬ್ಬರು ಆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
‘ಅತಿಯಾದ ಆತ್ಮವಿಶ್ವಾಸ ಮತ್ತು ಬಿಎಸ್ಪಿ–ಎಸ್ಪಿಗಳ ಚುನಾವಣಾ ಪೂರ್ವ ಮೈತ್ರಿಯ ಶಕ್ತಿಯನ್ನು ಅರ್ಥಮಾಡಿಕೊಳ್ಳಲು ವಿಫಲವಾದದ್ದೇ ಈ ಸೋಲಿಗೆ ಕಾರಣ’ ಎಂದು ಶನಿವಾರ ಇಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಹೇಳಿದ್ದಾರೆ.
‘ಕಾಶ್ಮೀರ ಪ್ರತ್ಯೇಕ ಅಸಾಧ್ಯ’
ನವದೆಹಲಿ: ವಿಶ್ವದ ಯಾವುದೇ ಶಕ್ತಿಯೂ ಕಾಶ್ಮೀರವನ್ನು ಭಾರತದಿಂದ ಪ್ರತ್ಯೇಕಿಸಲು ಸಾಧ್ಯವಿಲ್ಲ. ಅಗತ್ಯ ಬಿದ್ದರೆ ಕಾಶ್ಮೀರದ ರಕ್ಷಣೆಗಾಗಿ ಗಡಿಯಾಚೆ ಸೇನಾ ಕಾರ್ಯಾಚರಣೆ ನಡೆಸಲೂ ಸಿದ್ಧ ಎಂದು ರಾಜನಾಥ್ ಸಿಂಗ್ ಗುಡುಗಿದ್ದಾರೆ.
‘ಕಾಶ್ಮೀರ ಹಿಂದೆಯೂ, ಇಂದಿಗೂ ಮತ್ತು ಮುಂದೆಯೂ ನಮ್ಮದೇ ಆಗಿರುತ್ತದೆ. ಯಾರೂ ಅದನ್ನು ನಮ್ಮಿಂದ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಕಾಶ್ಮೀರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು ನಮ್ಮ ಆದ್ಯತೆ’ ಎಂದರು.
‘ಭಯೋತ್ಪಾದಕರಿಗೆ ನೆರವು ನೀಡುವುದನ್ನು ನಿಲ್ಲಿಸಿದಲ್ಲಿ ಪಾಕಿಸ್ತಾನದ ಜತೆ ಉತ್ತಮ ಬಾಂಧವ್ಯ ಹೊಂದಲು ಭಾರತ ಬಯಸುತ್ತದೆ’ ಎಂದರು.
**
ಅತಿಯಾದ ಆತ್ಮಿವಿಶ್ವಾಸ ಮತ್ತು ಬಿಎಸ್ಪಿ–ಎಸ್ಪಿಗಳ ಚುನಾವಣಾ ಪೂರ್ವ ಮೈತ್ರಿಯ ಶಕ್ತಿಯನ್ನು ಅರ್ಥಮಾಡಿಕೊಳ್ಳಲು ವಿಫಲವಾದದ್ದೇ ಈ ಸೋಲಿಗೆ ಕಾರಣ
- ರಾಜನಾಥ್ ಸಿಂಗ್, ಕೇಂದ್ರ ಗೃಹ ಸಚಿವ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.