ಮೆನ್ಪುರಿ/ಯುಪಿ (ಪಿಟಿಐ): ಗೋ ಹತ್ಯೆ ನಡೆದಿದೆ ಎಂಬ ವದಂತಿ ಹರಡಿದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಮೆನ್ಪುರಿ ಜಿಲ್ಲೆಯ ಗ್ರಾಮವೊಂದರಲ್ಲಿ ಶುಕ್ರವಾರ ರಾತ್ರಿಯಿಂದ ಉದ್ವಿಗ್ನ ಸ್ಥಿತಿ ತಲೆದೂರಿದ್ದು, ಪೊಲೀಸರು ಮುಂಜಾಗ್ರತೆ ಕ್ರಮವಾಗಿ 21 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
ಗೋ ಹತ್ಯೆ ನಡೆದಿದೆ ಎಂದು ಶಂಕಿಸಲಾದ ನಗರಿಯಾ ಗ್ರಾಮದಲ್ಲಿ ಹಲವು ಅಂಗಡಿಗಳಿಗೆ ಮತ್ತು ಪೊಲೀಸ್ ಜೀಪೊಂದಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ.
ಗ್ರಾಮದ ಹೊಲದಲ್ಲಿ ಮೇಯುತ್ತಿದ್ದ ಹಸು ಇದ್ದಕ್ಕಿಂದಂತೆ ಕಣ್ಮರೆಯಾಯಿತು ಮತ್ತು ಅದೇ ಹಸುವನ್ನು ಮನೆಯೊಂದರಲ್ಲಿ ಕೊಂದು ಚರ್ಮ ಸುಲಿಯಲಾಗುತ್ತಿತ್ತು, ವಿಷಯ ತಿಳಿದು ಅಲ್ಲಿಗೆ ಧಾವಿಸಿದೆವು ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.
‘ಅಸಲಿಗೆ ಆ ಮನೆಯಲ್ಲಿ ಗೋ ಹತ್ಯೆ ನಡೆಯಿತೇ ಅಥವಾ ಸತ್ತ ಹಸುವಿನ ಚರ್ಮವನ್ನು ಸುಲಿಯಲಾಗುತ್ತಿತ್ತೇ ಎನ್ನುವುದು ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ದೃಢಪಡಬೇಕಿದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಗ್ರಾಮದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.