ADVERTISEMENT

ಗ್ರೆನೇಡ್‌ ದಾಳಿ: ಮೂವರು ಸಾವು

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2017, 19:30 IST
Last Updated 21 ಸೆಪ್ಟೆಂಬರ್ 2017, 19:30 IST

ಶ್ರೀನಗರ: ಉಗ್ರರು ನಡೆಸಿದ ಗ್ರೆನೇಡ್‌ ದಾಳಿಯಲ್ಲಿ ದಕ್ಷಿಣ ಕಾಶ್ಮೀರದ ಟ್ರಾಲ್‌ ಪಟ್ಟಣದಲ್ಲಿ ಮೂವರು ನಾಗರಿಕರು ಮೃತಪಟ್ಟಿದ್ದಾರೆ. ಭದ್ರತಾ ಸಿಬ್ಬಂದಿಯೂ ಸೇರಿ 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಪೀಪಲ್ಸ್‌ ಡೆಮಾಕ್ರಟಿಕ್‌ ಪಾರ್ಟಿ (ಪಿಡಿಪಿ) ಸಚಿವ ನಯೀಮ್‌ ಅಕ್ತರ್‌ ಅವರು ಕಾರ್ಯಕ್ರಮ ಉದ್ಘಾಟನೆಗಾಗಿ ಟ್ರಾಲ್‌ಗೆ ಗುರುವಾರ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿಯೇ ದಾಳಿ ನಡೆದಿದೆ.

ಸಚಿವರ ಭೇಟಿ ನಿಮಿತ್ತ ಪಟ್ಟಣದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ಆದರೂ, ಭದ್ರತಾ ಪಡೆಗಳ ಕಣ್ಣು ತಪ್ಪಿಸಿ ಮೆರವಣಿಗೆ ಸಾಗುವ ಹಾದಿಯಲ್ಲಿ ಉಗ್ರರು ಗ್ರೆನೇಡ್‌ನ್ನು ಹುದುಗಿಸಿಟ್ಟಿದ್ದರು ಎಂದು ವರದಿಯಾಗಿದೆ.

ADVERTISEMENT

ಸಚಿವ ಅಕ್ತರ್‌ ಅವರು ಅಪಾಯದಿಂದ ಪಾರಾಗಿದ್ದು, ಅವರ ಚಾಲಕ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಸಚಿವ ಅಕ್ತರ್‌ ಅವರನ್ನು ಗುರಿಯಾಗಿಸಿಯೇ ಈ ದಾಳಿ ನಡೆಸಲಾಗಿದೆ’ ಎಂದು ರಾಜ್ಯ ಪೊಲೀಸ್‌ ಮುಖ್ಯಸ್ಥ ಶೆಹ ಪಾಲ್‌ ವಾಯಿದ್‌ ಅವರ ಹೇಳಿಕೆಯನ್ನು ಉಲ್ಲೇಖಿಸಿ ಸ್ಥಳೀಯ ಟಿ.ವಿ ಮಾಧ್ಯಮ ವರದಿ ಮಾಡಿದೆ.

ಇದುವರೆಗೆ ಯಾವುದೇ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.