ಲಖನೌ: ಉತ್ತರ ಪ್ರದೇಶದಲ್ಲಿ ಶೀತಗಾಳಿಯ ತೀವ್ರತೆ ಮುಂದುವರಿದಿದ್ದು, ಚಳಿಯಿಂದಾಗಿ ಮತ್ತೆ 31 ಮಂದಿ ಮೃತಪಟ್ಟ ವರದಿಯಾಗಿದೆ. ಇದರಿಂದ ಸತ್ತವರ ಸಂಖ್ಯೆ 90ಕ್ಕೆ ಏರಿದೆ. ದಟ್ಟ ಮಂಜು ಮುಸುಕಿನ ವಾತಾವರಣದಿಂದಾಗಿ ಮಂಗಳವಾರ ರೈಲು ಸಂಚಾರ ವಿಳಂಬವಾಗಿತ್ತು. ಶಾಲೆಗಳಿಗೆ ಡಿ. 28ರವರೆಗೆ ರಜೆ ಘೋಷಿಸಲಾಗಿದೆ. ಮೈನಡುಗಿಸುವ ಚಳಿಯಿಂದಾಗಿ ವೃದ್ಧರು ಹೆಚ್ಚು ಸಂಕಷ್ಟಕ್ಕೆ ಸಿಲುಕಿದ್ದಾರೆ.
ರಾಜ್ಯದ ಪೂರ್ವ ಭಾಗದಲ್ಲಿ ಪ್ರತಿಕೂಲ ಹವಾಮಾನದಿಂದಾಗಿ ಸೋಮವಾರ ಎಂಟು ಮಂದಿ ಮೃತಪಟ್ಟಿದ್ದಾರೆ. ಅವಧ್ ಮತ್ತು ಅಲೀಗಡಗಳಲ್ಲಿ ತಲಾ ಆರು, ಮೊರದಾಬಾದ್ನಲ್ಲಿ ಏಳು ಮತ್ತು ಮೀರಠ್ ಹಾಗೂ ಕಾನ್ಪುರದಲ್ಲಿ ತಲಾ ಇಬ್ಬರನ್ನು ಚಳಿ ಬಲಿತೆಗೆದುಕೊಂಡಿದೆ.
ಮಂಜಿನಿಂದಾಗಿ ಮಾರ್ಗಗಳು ಅಸ್ಪಷ್ಟವಾಗಿರುವುದರಿಂದ ಸುಮಾರು 150 ರೈಲುಗಳ ಸಂಚಾರ 10–12 ಗಂಟೆಗಳಷ್ಟು ವಿಳಂಬವಾಗಿವೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಮಂಜಿನ ತೀವ್ರತೆಯಿಂದಾಗಿ ವಿಮಾನಗಳ ಹಾರಾಟಕ್ಕೂ ವ್ಯತ್ಯಯ ಉಂಟಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.