ADVERTISEMENT

ಚಿಕಿತ್ಸೆ ಹೇಗೆ– ಸೇನಾ ಆಸ್ಪತ್ರೆ ಮಾಹಿತಿ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2016, 19:30 IST
Last Updated 11 ಫೆಬ್ರುವರಿ 2016, 19:30 IST
ಯೋಧ ಹನುಮಂತಪ್ಪ ಅವರ ಭಾವಚಿತ್ರಕ್ಕೆ ಹುಬ್ಬಳ್ಳಿಯಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಮೊಂಬತ್ತಿ ಬೆಳಗಿ ಸಂತಾಪ ಸೂಚಿಸಿದರು
ಯೋಧ ಹನುಮಂತಪ್ಪ ಅವರ ಭಾವಚಿತ್ರಕ್ಕೆ ಹುಬ್ಬಳ್ಳಿಯಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಮೊಂಬತ್ತಿ ಬೆಳಗಿ ಸಂತಾಪ ಸೂಚಿಸಿದರು   

ನವದೆಹಲಿ (ಪಿಟಿಐ): ಕೊಪ್ಪದ ಅವರನ್ನು ಆಸ್ಪತ್ರೆಗೆ ದಾಖಲಿಸಿದಾಗ ಅವರ ದೇಹದ ಉಷ್ಣತೆ ಸಹಜವಾಗಿತ್ತು, ಹೃದಯ ಬಡಿತ ವೇಗವಾಗಿತ್ತು ಮತ್ತು ರಕ್ತದೊತ್ತಡ ಅತ್ಯಂತ ಕಡಿಮೆ ಇತ್ತು. ತಕ್ಷಣವೇ ಅವರಿಗೆ ಗ್ಲುಕೋಸ್‌ ನೀಡಲು ಆರಂಭಿಸಲಾಯಿತು ವೈದ್ಯರು ತಿಳಿಸಿದ್ದಾರೆ,

ಯಾಕೆಂದರೆ ಐದು ದಿನಗಳಿಂದ ಅವರಿಗೆ ಯಾವುದೇ ಆಹಾರ ಇರಲಿಲ್ಲ. ಅವರ ದೇಹಸ್ಥಿತಿಯನ್ನು ಸ್ಥಿರಗೊಳಿಸಲು ದೇಹದ ಉಷ್ಣತೆಯನ್ನು 37 ಡಿಗ್ರಿ ಸೆಂಟಿಗ್ರೇಡ್‌ನಲ್ಲಿಯೇ ಉಳಿಸಿಕೊಳ್ಳಲು ಶ್ರಮಿಸಲಾಯಿತು.

ನಂತರ ಅವರ ದೇಹದ ಭಾಗಗಳಿಗೆ ರಕ್ತ ಹರಿಯುವಂತೆ ನೋಡಿಕೊಳ್ಳಲಾ ಯಿತು. ಕಳೆದ 5–6 ದಿನಗಳಿಂದ ಈ ಭಾಗಗಳಿಗೆ ರಕ್ತ ಸಂಚಾರ ಇರಲಿಲ್ಲ.
ಕೆಲವು ದಿನಗಳಿಂದ ಆಮ್ಲಜನಕ ಮತ್ತು ಗ್ಲುಕೋಸ್‌ ಇಲ್ಲದೆ ಜೀವ ಕಣಗಳ ಮೇಲೆ ಅಪಾರ ಒತ್ತಡ ಸೃಷ್ಟಿಯಾಗಿತ್ತು. ಆಗಲೇ ಬಹಳಷ್ಟು ನಾಜೂಕಾಗಿದ್ದ ಕಣಗಳು ಆಮ್ಲಜನಕ ಮತ್ತು ಗ್ಲುಕೋಸ್‌ ಕೊರತೆಯಿಂದ ಅಪಾರ ಪ್ರಮಾಣದಲ್ಲಿ ವಿಷಕಾರಿ ಅಂಶಗಳನ್ನು ಸೃಷ್ಟಿಸಿದ್ದವು.

ಈ ವಿಷಕಾರಿ ಅಂಶಗಳು ರಕ್ತವನ್ನು ಪ್ರವೇಶಿಸಿದ್ದವು. ರಕ್ತದ ಒತ್ತಡ ಅತ್ಯಂತ ಕಡಿಮೆ ಇದ್ದುದರಿಂದ ಮೂತ್ರಪಿಂಡ, ಪಿತ್ತಜನಕಾಂಗ ಮತ್ತು ಮಿದುಳು ಹಾನಿಗೊಂಡಿದ್ದವು.

ಮೂತ್ರಪಿಂಡ ಮತ್ತು ಪಿತ್ತಜನಕಾಂಗಗಳ ವೈಫಲ್ಯಗಳಿಂದಾಗಿ ಶ್ವಾಸಕೋಶದ ಪರಿಸ್ಥಿತಿಯೂ ಶೋಚನೀಯವಾಗಿತ್ತು. ದೇಹದಲ್ಲಿನ ಸತ್ತ ಜೀವ ಕಣಗಳು ಸೃಷ್ಟಿಸಿದ ವಿಷಕಾರಿ ಅಂಶಗಳು ಸ್ಥಿತಿಯನ್ನು ಮತ್ತಷ್ಟು ಶೋಚನೀಯ ಗೊಳಿಸಿತು. ಕೊಪ್ಪದ ಅವರ ಮೂತ್ರಪಿಂಡ ಆಗಲೇ ವಿಫಲಗೊಳ್ಳಲು ಆರಂಭವಾ ಗಿತ್ತು. ಆಸ್ಪತ್ರೆಗೆ ದಾಖಲಾದ ಆರು ತಾಸಲ್ಲಿ ಅದು ಸಂಪೂರ್ಣವಾಗಿ ವಿಫಲ ಗೊಂಡಿತ್ತು.

ಎಲ್ಲ ಪ್ರಯತ್ನಗಳ ಹೊರತಾಗಿಯೂ ಹೃದಯದ ಪರಿಸ್ಥಿತಿ ಹದಗೆಡುತ್ತಲೇ ಹೋಯಿತು.

ಮಿದುಳು ಊದಿಕೊಂಡಿತ್ತು ಮತ್ತು ಮಿದುಳಿನ ಚಟುವಟಿಕೆ ನಿಧಾನವಾಗಿ ಸ್ಥಗಿತಗೊಳ್ಳುತ್ತಿತ್ತು. ಅವರ ಸಾವಿಗೆ ಕೆಲವು ತಾಸು ಮುಂಚೆ ಅದು ಸಂಪೂರ್ಣವಾಗಿ ಸ್ಥಗಿತಗೊಂಡಿತು.

ಯೋಗದ ನೆರವು: ಹಿಮಪಾತದ ಸಂದರ್ಭದಲ್ಲಿ ಪೂರ್ಣ ದಿರಿಸಿನಲ್ಲಿ ಮಲಗುವ ಚೀಲದೊಳಗೆ ಕೊಪ್ಪದ ನಿದ್ದೆ ಮಾಡಿದ್ದರು. ಅವರ ಎಲುಬುಗಳಿಗೆ ಯಾವುದೇ ಹಾನಿ ಆಗಿರಲಿಲ್ಲ. ಅವರು ಸಿಕ್ಕಿ ಬಿದ್ದಿದ್ದ ಪ್ರದೇಶದಲ್ಲಿ ಉಸಿರಾಟ ಸಾಧ್ಯವಾಗುವಂತೆ ಆಮ್ಲಜನಕ ಇತ್ತು. ಜತೆಗೆ ಯೋಗ ಶಿಕ್ಷಕರೂ ಆಗಿದ್ದ ಕೊಪ್ಪದ ಅವರಿಗೆ ಉಸಿರಾಟ ನಿಯಂತ್ರಣದ ಸಾಮರ್ಥ್ಯವೂ ಇತ್ತು. ಅದುವೇ ಅವರು ಆರು ದಿನಗಳ ಕಾಲ ಬದುಕುಳಿಯಲು ಕಾರಣ ಎಂದು ತಜ್ಞರು ಹೇಳುತ್ತಿದ್ದಾರೆ ಎಂದು ರಕ್ಷಣಾ ಖಾತೆಯ ರಾಜ್ಯ ಸಚಿವ ಇಂದರ್‌ ಜಿತ್‌ ಸಿಂಗ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.