ADVERTISEMENT

ಜಮ್ಮುಗೆ ಪ್ರಧಾನಿ ಭೇಟಿ ಭದ್ರತಾ ವ್ಯವಸ್ಥೆ ಬಿಗಿ

ಪಿಟಿಐ
Published 31 ಮಾರ್ಚ್ 2017, 19:56 IST
Last Updated 31 ಮಾರ್ಚ್ 2017, 19:56 IST
ಜಮ್ಮುಗೆ ಪ್ರಧಾನಿ ಭೇಟಿ ಭದ್ರತಾ ವ್ಯವಸ್ಥೆ ಬಿಗಿ
ಜಮ್ಮುಗೆ ಪ್ರಧಾನಿ ಭೇಟಿ ಭದ್ರತಾ ವ್ಯವಸ್ಥೆ ಬಿಗಿ   

ಜಮ್ಮು: ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್‌ 2ರಂದು ಜಮ್ಮುಗೆ ಭೇಟಿ ನೀಡುತ್ತಿದ್ದು, ಈ ಸಲುವಾಗಿ ಭಾರಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಗಡಿಯಲ್ಲೂ ಕಾವಲು ವ್ಯವಸ್ಥೆ ಬಿಗಿಗೊಳಿಸಲಾಗಿದೆ.

ಉಧಂಪುರ ಜಿಲ್ಲೆಯ ಚೆನಾನಿಯಲ್ಲಿ ನಿರ್ಮಾಣಗೊಂಡಿರುವ ದೇಶದ ಅತಿ ಉದ್ದದ ಸುರಂಗ ಮಾರ್ಗವನ್ನು ಪ್ರಧಾನಿ ಏಪ್ರಿಲ್‌ 2ರಂದು ಉದ್ಘಾಟಿಸಲಿದ್ದು, ಬಳಿಕ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಭದ್ರತಾ ವ್ಯವಸ್ಥೆ ಭಾಗವಾಗಿ ಸೇನಾ ತುಕಡಿಗಳು ಗಸ್ತು ತಿರುಗುತ್ತಿವೆ ಮತ್ತು ಹಲವೆಡೆ ತಪಾಸಣಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಗಡಿ ಪ್ರದೇಶಗಳಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಲಾಗಿದೆ ಯಾವುದೇ ಅಹಿತಕರ ಘಟನೆಗಳಾಗದಂತೆ ನೋಡಿಕೊಳ್ಳಲು ಎಲ್ಲಾ ಭದ್ರತಾ ಸಂಸ್ಥೆಗಳ ನಡುವೆ ಸಮನ್ವಯ ಸಾಧಿಸಲಾಗುವುದು ಎಂದು ಪೊಲೀಸ್‌ ಮಹಾನಿರ್ದೇಶಕ ಎಸ್‌.ಪಿ. ವೈದ್‌ ಹೇಳಿದ್ದಾರೆ.

ADVERTISEMENT

**

ಮತ್ತೆ ಘರ್ಷಣೆ
ಕಾಶ್ಮೀರದ ವಿವಿಧೆಡೆ ಶುಕ್ರವಾರ ಮಧ್ಯಾಹ್ನ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆಯ ಬಳಿಕ ಯುವಕರು ಮತ್ತು ಭದ್ರತಾ ಸಿಬ್ಬಂದಿ ನಡುವೆ ಸಂಭವಿಸಿದ ಘರ್ಷಣೆಗಳಲ್ಲಿ ಒಬ್ಬ ಪೊಲೀಸ್ ಸೇರಿ ಅನೇಕರು ಗಾಯಗೊಂಡಿದ್ದಾರೆ.

ಬಡ್‌ಗಾಂವ್ ಜಿಲ್ಲೆಯ ಚದೂರದಲ್ಲಿ ಭದ್ರತಾ ಪಡೆಗಳಿಗೆ ಮೂವರು ನಾಗರಿಕರು ಬಲಿಯಾದ ಘಟನೆಗೆ ಪ್ರತಿಭಟನೆ ವ್ಯಕ್ತಪಡಿಸಲು ಮುಂದಾದ ಯುವಕರನ್ನು ಚದುರಿಸಲು ಭದ್ರತಾ ಸಿಬ್ಬಂದಿ ಬಲ ಪ್ರಯೋಗಿಸಿದಾಗ ಘರ್ಷಣೆ ಸಂಭವಿಸಿತು.

ಯುವಕರು ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ ನಡೆಸಿದರು. ಭದ್ರತಾ ಸಿಬ್ಬಂದಿ ಲಾಠಿ ಪ್ರಹಾರ ಮಾಡಿದರಲ್ಲದೆ ಅಶ್ರುವಾಯು ಶೆಲ್‌ಗಳನ್ನು ಪ್ರಯೋಗಿಸಿದರು. ಬಾರಾಮುಲ್ಲಾದ ಸೋಪೊರೆಯಲ್ಲಿ ನಡೆದ ಘರ್ಷಣೆಯಲ್ಲಿ ಪೊಲೀಸ್, ನಾಲ್ವರು ಯುವಕರು ಗಾಯಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.