ಚೆನ್ನೈ: ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಮಿಳುನಾಡು ಮುಖ್ಯಮಂತ್ರಿ ಜಯಲಲತಾ ಅವರ ಆರೋಗ್ಯ ಸ್ಥಿತಿ ಬಗ್ಗೆ ಲಂಡನ್ನ ತಜ್ಞ ಡಾ, ರಿಚರ್ಡ್ ಬೀಲೆ ಇಂದು ಸಂಜೆ ಪ್ರತಿಕಾ ಪ್ರಕಟಣೆಯೊಂದನ್ನು ನೀಡಿದ್ದಾರೆ.
ಪತ್ರಿಕಾ ಪ್ರಕಟಣೆ ಹೀಗಿದೆ
ತಮಿಳುನಾಡು ಮುಖ್ಯಮಂತ್ರಿ ಅವರಿಗೆ ನಿನ್ನೆ (ಭಾನುವಾರ) ಹೃದಯ ಸ್ತಂಭನ ಆಗಿದೆ ಎಂಬ ಸುದ್ದಿ ಕೇಳಿ ಅತೀವ ಬೇಸರವಾಗಿದೆ. ಅಪೋಲೊದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರ ಆರೋಗ್ಯ ಸ್ಥಿತಿ ಬಗ್ಗೆ ನಾನು ತೀವ್ರ ನಿಗಾ ಇರಿಸುತ್ತಾ ಬಂದಿದ್ದೇನೆ. ದುರದೃಷ್ಟವಶಾತ್, ಆಕೆ ಸ್ವಲ್ಪ ಚೇತರಿಸಿಕೊಂಡರೂ, ಅವರು ಮತ್ತೆ ಅನಾರೋಗ್ಯಕ್ಕೀಡಾಗುವ ಭೀತಿ ಸದಾ ಇತ್ತು.
ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದ್ದರೂ, ಅವರನ್ನು ಬದುಕುಳಿಸಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಲಾಗುತ್ತದೆ.
ತಜ್ಞ ವೈದ್ಯರ ತಂಡ ಅವರಿಗೆ ಚಿಕಿತ್ಸೆ ನೀಡುತ್ತಿದ್ದು, ಎಕ್ಸ್ಟ್ರಾ ಕಾರ್ಪೊರಲ್ ಲೈಫ್ ಸಪೋರ್ಟ್ ನೀಡಲಾಗುತ್ತಿದೆ, ಈ ಪರಿಸ್ಥಿತಿಯಲ್ಲಿ ಅವರಿಗೆ ನೀಡುವ ಉತ್ತಮವಾದ ಚಿಕತ್ಸೆ ಇದಾಗಿದೆ, ಚೆನ್ನೈನಲ್ಲಿರುವ ಅಪೋಲೊ ಆಸ್ಪತ್ರೆಯಲ್ಲಿ ಈ ಎಲ್ಲ ಸೌಕರ್ಯಗಳೂ ಇವೆ, ಮೇಡಂ ಅವರಿಗೆ ಅಪೋಲೊ ಆಸ್ಪತ್ರೆಯಲ್ಲಿ ಅತ್ಯುತ್ತಮ ಮಟ್ಟದ ಚಿಕಿತ್ಸೆ ನೀಡುತ್ತಿದ್ದು, ಏಮ್ಸ್ ವೈದ್ಯರ ತಂಡವೂ ಜತೆಗಿದೆ.
ನನ್ನ ಪ್ರಾರ್ಥನೆ ಅವರ ಜತೆಗಿದೆ. ಇಂಥಾ ಪರಿಸ್ಥಿತಿಯಲ್ಲಿ ಅವರ ಕುಟುಂಬ, ಆಪ್ತರು ಮತ್ತು ತಮಿಳುನಾಡಿನ ಜನತೆಯ ಪ್ರಾರ್ಥನೆ ಅವರೊಂದಿಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.