ADVERTISEMENT

ಜಾಲತಾಣದಲ್ಲಿ ಲೇವಡಿ ಮಾಡಿದ್ದಕ್ಕೆ ಜೈಲು!

ಪಿಟಿಐ
Published 11 ಅಕ್ಟೋಬರ್ 2017, 19:35 IST
Last Updated 11 ಅಕ್ಟೋಬರ್ 2017, 19:35 IST

ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಕ್ರಿಯಾಶೀಲನಾಗಿ ವಿವಿಧ ವಿಷಯಗಳನ್ನು ಪೋಸ್ಟ್‌ ಮಾಡುತ್ತಿದ್ದ ಯುವಕ ಝಕೀರ್‌ ಅಲಿ ತ್ಯಾಗಿ 42 ದಿನಗಳ ಕಾಲ ಜೈಲಿನಲ್ಲಿ ಕಳೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಗಂಗಾ ನದಿಗೆ ಜೀವನಾಡಿಯ ಸ್ಥಾನಮಾನ ನೀಡಿರುವುದನ್ನು ತ್ಯಾಗಿ ಲಘುವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದ. ರಾಮ ಮಂದಿರ ನಿರ್ಮಾಣದ ಬಗ್ಗೆ ಬಿಜೆಪಿ ನೀಡಿದ್ದ ಆಶ್ವಾಸನೆಯ ಬಗ್ಗೆಯೂ ಚರ್ಚಿಸಿದ್ದ.

ಏರ್‌ ಇಂಡಿಯಾಗೆ ನೀಡುತ್ತಿರುವ ಹಜ್‌ ಸಬ್ಸಿಡಿಯನ್ನು ಕೇಂದ್ರ ಸರ್ಕಾರ ಏಕೆ ವಾಪಸ್‌ ಪಡೆಯುತ್ತಿಲ್ಲ ಎನ್ನುವ ಬಗ್ಗೆಯೂ ಆಶ್ಚರ್ಯ ವ್ಯಕ್ತಪಡಿಸಿದ್ದ. ಇದೇ ರೀತಿ ಹಲವು ವಿಷಯಗಳನ್ನು ನಿರಂತರವಾಗಿ ಚರ್ಚಿಸುತ್ತಿದ್ದ.

ADVERTISEMENT

ಉತ್ತರ ಪ್ರದೇಶ ಪೊಲೀಸರು ಈ ವಿಷಯಗಳನ್ನು ಅಪರಾಧ ಎಂದು ಪರಿಗಣಿಸಿ ತ್ಯಾಗಿಯನ್ನು ಬಂಧಿಸಿದ್ದರು. 42 ದಿನಗಳ ಕಾಲ ಮುಜಫ್ಪರ್‌ನಗರ ಜೈಲಿನಲ್ಲಿ ಕುಖ್ಯಾತ ಅಪರಾಧಿಗಳ ಜತೆ ವಾಸವಿದ್ದ.

18 ವರ್ಷದ ಝಕೀರ್‌ನನ್ನು ಏಪ್ರಿಲ್‌ 2ರಂದು ಬಂಧಿಸಲಾಗಿತ್ತು. ಈತನ ವಿರುದ್ಧ ಐಪಿಸಿ 420 (ವಂಚನೆ) ಮತ್ತು ಸೆಕ್ಷನ್‌ 66 (ಮಾಹಿತಿ ತಂತ್ರಜ್ಞಾನ ಕಾಯ್ದೆ) ಅಡಿಯಲ್ಲಿ ಮೊಕದ್ದಮೆ ದಾಖಲಿಸಲಾಗಿತ್ತು.  42 ದಿನಗಳ ಬಳಿಕ ಈತನಿಗೆ ಜಾಮೀನು ದೊರೆತಿದೆ.

ಪೊಲೀಸರು ಈಗ ಝಕೀರ್‌ ವಿರುದ್ಧ ದೇಶದ್ರೋಹಕ್ಕೆ ಸಂಬಂಧಿಸಿದ ಸೆಕ್ಷನ್‌ 124ಎ ಅಡಿಯಲ್ಲೂ ಮೊಕದ್ದಮೆ ದಾಖಲಿಸಿದ್ದಾರೆ ಎಂದು ತ್ಯಾಗಿ
ಪರ ವಕೀಲ ಖಾಜಿ ಅಹ್ಮದ್‌ ತಿಳಿಸಿದ್ದಾರೆ. ಆದರೆ, ಆರೋಪಪಟ್ಟಿ ಲಭ್ಯವಾಗದ ಕಾರಣ ದೇಶದ್ರೋಹ ಪ್ರಕರಣದ ಕುರಿತ ಮಾಹಿತಿ ದೃಢಪಟ್ಟಿಲ್ಲ.

ಮುಜಫ್ಪರ್‌ನಗರದ ಉಕ್ಕು ಕಾರ್ಖಾನೆಯಲ್ಲಿನ ಟ್ರಾನ್ಸ್‌ಪೋರ್ಟರ್‌ವೊಬ್ಬರ ಬಳಿ ಝಕೀರ್‌ ಕೆಲಸ ಕೆಲಸ ಮಾಡುತ್ತಿದ್ದ. ವಿಚಾರಣೆಗಾಗಿ ಕರೆದುಕೊಂಡು ಹೋಗುತ್ತಿರುವುದಾಗಿ ಪೊಲೀಸರು ಝಕೀರ್‌ನಿಗೆ ತಿಳಿಸಿದ್ದರು. ಬಳಿಕ ಬಂಧಿಸಿದ್ದರು.

‘ಪೊಲೀಸ್‌ ಸಮವಸ್ತ್ರ ಧರಿಸದ ವ್ಯಕ್ತಿಯೊಬ್ಬರು ನನ್ನನ್ನು ಥಳಿಸಿ ಭಯೋತ್ಪಾದಕ ಎಂದು ನಿಂದಿಸಿದರು. ಜಾಮೀನು ಪಡೆದು ಹೊರಬಂದ ನಂತರ ನಾನು ಕೆಲಸ ಕಳೆದುಕೊಂಡೆ. ನನಗೆ ಅಲ್ಲಿ ₹8ಸಾವಿರ ದೊರೆಯುತ್ತಿತ್ತು.  ಜಿಎಸ್‌ಟಿ ಜಾರಿ ಬಳಿಕ ನಷ್ಟವಾಗುತ್ತಿರುವುದರಿಂದ ಕೆಲವು ಕೆಲಸಗಾರರನ್ನು‌ ತೆಗೆದುಹಾಕಬೇಕಾಯಿತು ಎಂದು ಟ್ರಾನ್ಸ್‌ಪೋರ್ಟರ್‌ ತಿಳಿಸಿದ್ದಾರೆ’ ಎಂದು ತ್ಯಾಗಿ ಸುದ್ದಿಗಾರರಿಗೆ ತಾನು ಅನುಭವಿಸಿದ ಸಂಕಷ್ಟಗಳನ್ನು ವಿವರಿಸಿದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.