ನವದೆಹಲಿ : ದೇಶದ ಅಭಿವೃದ್ಧಿಗೆ ತಂತ್ರಜ್ಞಾನದ ಯಾವ ರೀತಿ ಉಪಯುಕ್ತವಾಗಿದೆ ಎಂದು ವಿವರಿಸಿದ ಪ್ರಧಾನಿ ನರೇಂದ್ರ ಮೋದಿ, ಆಧಾರ್ ಸೇರಿದಂತೆ ಇನ್ನಿತರ ತಂತ್ರಜ್ಞಾನದ ಸಮರ್ಪಕ ಬಳಕೆಯಿಂದಾಗಿ ಸರ್ಕಾರಕ್ಕೆ 65,000 ಕೋಟಿಯಷ್ಟು ಉಳಿತಾಯವುಂಟಾಗಿದೆ ಎಂದಿದ್ದಾರೆ.
ಸೈಬರ್ ಸ್ಪೇಸ್ ಜಾಗತಿಕ ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದ ಮೋದಿ ಡಿಜಿಟಲ್ ತಂತ್ರಜ್ಞಾನದ ಮೂಲಕ ದೇಶ ಅಭಿವೃದ್ಧಿ ಸಾಧಿಸಿದೆ ಎಂದಿದ್ದಾರೆ.
ಎರಡು ದಿನಗಳ ಕಾಲ ನಡೆಯುವ ಈ ಸಮ್ಮೇಳನದಲ್ಲಿ 120 ದೇಶಗಳ 10,000 ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ.
ತಂತ್ರಜ್ಞಾನದ ಮೂಲಕ ಕ್ಷಿಪ್ರ ಅಭಿವೃದ್ಧಿಯ ಬಗ್ಗೆ ಮೋದಿ ಭಾಷಣ ಮಾಡಿದ ಮೋದಿ ದೊಡ್ಡ ಕಂಪ್ಯೂಟರ್ ಗಳಿಂದ ಹಿಡಿದು ಮೊಬೈಲ್ ಫೋನ್ , ಗ್ಯಾಜೆಟ್ಗಳಿಗೆ ತಂತ್ರಜ್ಞಾನ ಬದಲಾಯಿತು. ಎರಡು ದಶಕಗಳಲ್ಲಿ ಸೈಬರ್ ಸ್ಪೇಸ್ ನಲ್ಲಿ ದೊಡ್ಡ ಮಟ್ಟದಲ್ಲಿ ಬದಲಾವಣೆಯುಂಟಾಗಿದೆ. ಇಂಟರ್ ನೆಟ್ ಆಫ್ ಥಿಂಗ್ಸ್ (ಐಒಟಿ), ಕೃತಕ ಬುದ್ದಿಮತ್ತೆ (ಎಐ) ಕೂಡಾ ಸುಲಭ ಸಾಧ್ಯವಾಯಿತು.
ಜನರಿಗೆ ನೇರವಾಗಿ ಸಬ್ಸಿಡಿಗಳನ್ನು ನೀಡಲು (ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ ಫರ್ -ಡಿಬಿಟಿ) ತಂತ್ರಜ್ಞಾನ ತುಂಬಾ ಉಪಯುಕ್ತವಾಯಿತು. ಆಧಾರ್, ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಆಗಿರುವ ಸಬ್ಸಿಡಿ ನೇರವಾಗಿ ವರ್ಗಾಯಿಸಿದ ಕಾರಣ ಅಂದಾಜು ₹65,000 ಕೋಟಿ (10 ಬಿಲಿಯನ್ ಡಾಲರ್ ) ಸರ್ಕಾರಕ್ಕೆ ಉಳಿತಾಯವಾಯಿತು.
ಉತ್ತಮ ಸೇವೆ, ಆಡಳಿತ, ಶಿಕ್ಷಣ ಮತ್ತು ಆರೋಗ್ಯ ವಲಯದಲ್ಲಿನ ಸಂಶೋಧನೆಗಳು ಜನರ ಬಳಿ ತಲುಪಲು ತಂತ್ರಜ್ಞಾನ ಸಹಾಯವಾಯಿತು. ಡಿಜಿಟಲ್ ಇಂಡಿಯಾ ಎಂಬುದು ದೊಡ್ಡ ಮಟ್ಟದ ತಂತ್ರಜ್ಞಾನ ಯೋಜನೆಯಾಗಿದೆ. ಜನಧನ್ ಖಾತೆ, ಆಧಾರ್, ಮೊಬೈಲ್ ಮೊದಲಾದವುಗಳು ಸಮನ್ವಯಗೊಂಡ ಜಾಮ್ (JAM) ಭ್ರಷ್ಟಾಚಾರ ತಡೆಯುವುದಕ್ಕೆ ಸಹಾಯ ಮಾಡಿತು.
ನರೇಂದ್ರ ಮೋದಿ ಆ್ಯಪ್ ಜನರೊಂದಿಗೆ ಸಂವಹನ ನಡೆಸಲು ನನಗೆ ಸಹಾಯ ಮಾಡಿತು. ಎಲ್ಲರೂ ಇಂಟರ್ ನೆಟ್ ಬಳಕೆ ಮಾಡಬೇಕು, ಸೈಬರ್ ಭದ್ರತೆ ಒಂದು ಉತ್ತಮ ಉದ್ಯೋಗವೂ ಆಗಿದೆ. ನಮಗೆ ಸೈಬರ್ ಸೈನಿಕರ ಅಗತ್ಯವಿದೆ. ಭಯೋತ್ಪಾದನೆ ಮೊದಲಾದ ದುಷ್ಟ ಶಕ್ತಿಗಳನ್ನು ಹಿಮ್ಮೆಟ್ಟಿಸಲು ಇದು ಸಹಕಾರಿಯಾಗಲಿದೆ. ದೇಶದ ರಕ್ಷಣೆ ಮುಖ್ಯ ಎಂದು ಮೋದಿ ಭಾಷಣದಲ್ಲಿ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.